ಮೊಳಕಾಲ್ಮುರು: ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ಅಪ್ಲೋಡ್ ಮಾಡಲು ತೊಂದರೆಯಾಗುತ್ತಿದೆ ಎಂದು ಈಚೆಗೆ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರು. ಇದನ್ನು ಪರಿಗಣಿಸಿ ಸರ್ಕಾರ ಲ್ಯಾಪ್ಟ್ಯಾಪ್ ನೀಡಿದೆ. ಜನರಿಂದ ದೂರು ಬಾರದ ರೀತಿಯಲ್ಲಿ ಕೆಲಸ ಮಾಡಿ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಸಲಹೆ ನೀಡಿದರು.
ತಾಲ್ಲೂಕು ಆಡಳಿತ ಸೌಧದಲ್ಲಿ ಗ್ರಾಮ ಆಡಳಿತಾಧಿಕಾರಿಗಳಿಗೆ ಈಚೆಗೆ ಲ್ಯಾಪ್ಟ್ಯಾಪ್ ಉಚಿತವಾಗಿ ವಿತರಿಸಿ ಮಾತನಾಡಿದರು.
ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರು ಹಾಗೂ ಇತರೆ ಕಾರ್ಮಿಕ ಮಂಡಳಿಗಳಿಂದ ಪೂರೈಕೆಯಾಗಿದ್ದ ಕಿಟ್ ಹಾಗೂ ವಿಕಲಚೇತನ ಮತ್ತು ಹಿರಿಯ ನಾಗರಿಕರ ಇಲಾಖೆಯಿಂದ ಪೂರೈಕೆಯಾಗಿದ್ದ ತ್ರಿಚಕ್ರ ವಾಹನಗಳನ್ನು ಫಲಾನುಭವಿಗಳಿಗೆ ವಿತರಿಸಿದರು.
ತಹಶೀಲ್ದಾರ್ ಟಿ. ಜಗದೀಶ್, ತಾಲ್ಲೂಕು ಪಂಚಾಯಿತಿ ಇಒ ಎಚ್. ಹನುಮಂತಪ್ಪ, ಉಪ ತಹಶೀಲ್ದಾರ್ ಮಹಾಂತೇಶ್, ಕಾರ್ಮಿಕ ಇಲಾಖೆ ಜಿಲ್ಲಾಧಿಕಾರಿ ವೈಶಾಲಿ, ದಾದಾಪೀರ್ ಇದ್ದರು.
ಶಂಕುಸ್ಥಾಪನೆ: ತಾಲ್ಲೂಕಿನ ರಾಂಪುರ ಬಳಿಯ ವಡೇರಹಳ್ಳಿಯಲ್ಲಿ ₹2.50 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಿರುವ ಮೊಳಕಾಲ್ಮುರು- ಹಂಪಿ- ಕಮಲಾಪುರ ಸಂಪರ್ಕ ರಸ್ತೆಯ ನವೀಕರಣ ಮತ್ತು ಮರ್ಲಹಳ್ಳಿಯಲ್ಲಿ ₹2.50 ಕೋಟಿ ವೆಚ್ಚದಲ್ಲಿ ಮೊಳಕಾಲ್ಮುರು- ಮಲ್ಪೆ ರಾಜ್ಯ ಹೆದ್ದಾರಿಯ ನವೀಕರಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದರು.
ಲೋಕೋಪಯೋಗಿ ಇಲಾಖೆ ಎಇಇ ಲಕ್ಷ್ಮೀನಾರಾಯಣ್, ಗುತ್ತಿಗೆದಾರರ ಸಂಘದ ಅಧ್ಯಕ್ಷ ನಾಗಸಮುದ್ರ ಗೋವಿಂದಪ್ಪ, ಗೌರವಾಧ್ಯಕ್ಷ ಎಸ್. ಖಾದರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.