ಚಿತ್ರದುರ್ಗ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಜಿಲ್ಲೆಯಲ್ಲಿ ಭಕ್ತರಿಂದ ನಿಧಿ ಸಂಗ್ರಹಿಸಲಾಗುವುದು. ಭಕ್ತರು ಇದಕ್ಕೆ ಸಹಕರಿಸಬೇಕು ಎಂದು ಬಜರಂಗದಳ ಶಿವಮೊಗ್ಗ ವಿಭಾಗ ಸಂಚಾಲಕ ಪ್ರಭಂಜನ್ ಮನವಿ ಮಾಡಿದರು.
‘ಭಕ್ತರು ನೀಡುವ ನಿಧಿಯಿಂದ ಮಂದಿರ ನಿರ್ಮಿಸಲು ತೀರ್ಮಾನಿಸಲಾಗಿದೆ. ಜ.15ರಿಂದ ಫೆ.5ರವರೆಗೆ ಜಿಲ್ಲೆಯಲ್ಲಿ ನಿಧಿ ಸಮರ್ಪಣೆ ಅಭಿಯಾನ ನಡೆಯಲಿದೆ. ಐದು ಜನರ ತಂಡ ಜಿಲ್ಲೆಯ ಪ್ರತಿ ಮನೆಗೆ ಭೇಟಿ ನೀಡಿ ನಿಧಿ ಸಂಗ್ರಹಿಸಲಿದೆ. ಸಂಗ್ರಹಿಸಿದ ನಿಧಿಯನ್ನು 48 ಗಂಟೆಯಲ್ಲಿ ಬ್ಯಾಂಕಿಗೆ ಜಮಾ ಮಾಡಲಾಗುವುದು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ನಿಧಿ ಸಂಗ್ರಹದ ಉದ್ದೇಶಕ್ಕೆ ಮ್ಯಾರಥಾನ್ ನಡೆಸುವ ಸಾಧ್ಯತೆ ಇದೆ. ಜ.10ರಂದು ಹೋಬಳಿ ಮಟ್ಟದ ಕಾರ್ಯಕ್ರಮ ನಡೆಯಲಿದೆ. ಜ.17ರಂದು ಮಹಿಳೆಯರ ಸಮಾವೇಶ ನಡೆಯಲಿದ್ದು, ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಎಲ್ಲ ಹಳ್ಳಿಯಲ್ಲಿ ಮಂದಿರಕ್ಕೆ ನಿಧಿ ಸಂಗ್ರಹಿಸಲಾಗುವುದು. ಎರಡು ಸಾವಿರಕ್ಕೂ ಅಧಿಕ ಮೊತ್ತ ನೀಡಿದ ಭಕ್ತರಿಗೆ ರಸೀದಿ ನೀಡಲಾಗುವುದು’ ಎಂದು ಹೇಳಿದರು.
‘ರಾಮಮಂದಿರಕ್ಕೆ ರಾಜಸ್ತಾನದ ಪಿಂಕ್ ಗ್ರಾನೈಟ್ ಬಳಕೆ ಮಾಡಲಾಗಲಾಗುತ್ತಿದೆ. 360 ಅಡಿ ಉದ್ದ, 235 ಅಡಿ ಅಗಲ, 161 ಅಡಿ ಎತ್ತರದ ವಿನ್ಯಾಸ ಸಿದ್ಧವಾಗಿದೆ. ನಾಲ್ಕು ವರ್ಷದಲ್ಲಿ ರಾಮಲಲ್ಲಾ ದರ್ಶನಕ್ಕೆ ಪ್ರವೇಶಾವಕಾಶ ಕಲ್ಪಿಸಲಾಗುತ್ತದೆ. ರಾಮಾಯಣ ನೆನಪಿಸುವಂತೆ ರಾಮಕಥಾ ಪಾರ್ಕ್ ನಿರ್ಮಿಸಲಾಗುವುದು. ಸಾವಿರ ವರ್ಷ ದುರಸ್ತಿಗೆ ಅವಕಾಶ ಇಲ್ಲದಂತೆ ಮಂದಿರ ಕಟ್ಟಲಾಗುವುದು’ ಎಂದು ವಿವರಿಸಿದರು.
ಅಭಿಯಾನದ ಜಿಲ್ಲಾ ಪ್ರಮುಖ್ ರಾಜ್ಕುಮಾರ್, ಸಹ ಪ್ರಮುಖ್ ಚಂದ್ರಶೇಖರ್, ಡಾ.ಮಂಜುನಾಥ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.