ಕಸ್ತೂರಿ ರಂಗಪ್ಪನಹಳ್ಳಿ ಗೇಟ್ (ಹಿರಿಯೂರು): ‘ಬಿಜೆಪಿಯಲ್ಲಿ ಬಾಂಬೆ ಟೀಮೂ ಇಲ್ಲ, ಯಾವ್ ಟೀಮೂ ಇಲ್ಲ. ಸರ್ಕಾರದ ಕೆಲಸ ದೇವರ ಕೆಲಸ ಎಂದು ನಂಬಿ ಕೆಲಸ ಮಾಡುತ್ತಿದ್ದೇವೆ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.
ತಾಲ್ಲೂಕಿನ ಕೆ.ಆರ್. ಹಳ್ಳಿ ಗೇಟ್ ಬಳಿ ಮಂಗಳವಾರ ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ‘ಸಚಿವ ಸಂಪುಟದಲ್ಲಿ ಒಂದಿಬ್ಬರಿಗೆ ಅಸಮಾಧಾನವಿದೆ. ಒಂದು ಮನೆಯಲ್ಲಿಯೇ ಸಾಕಷ್ಟು ಭಿನ್ನಾಭಿಪ್ರಾಯಗಳಿರುತ್ತವೆ. ಯಾವುದೇ ಇಲಾಖೆ ಇದ್ದರೂ ಅದು ಸರ್ಕಾರದ ಇಲಾಖೆ. ಕೊಟ್ಟ ಖಾತೆ ಒಪ್ಪಿಕೊಳ್ಳಬೇಕು. ಸಿಎಂ ಎಲ್ಲವನ್ನೂ ಸರಿಮಾಡಿದ್ದಾರೆ’ ಎಂದು ಹೇಳಿದರು.
‘ಇಂದಿರಾ ಕ್ಯಾಂಟೀನ್ ಕುರಿತು ಪ್ರತಿಕ್ರಿಯಿಸುವ ಮೊದಲು ಸಿದ್ದರಾಮಯ್ಯನವರು ತಾವೊಬ್ಬ ಮಾಜಿ ಮುಖ್ಯಮಂತ್ರಿ ಎನ್ನುವುದನ್ನು ನೆನಪಿಡಬೇಕಿತ್ತು. ಕಾಂಗ್ರೆಸ್ನವರು ಬಾರ್ಗೆ ಹೋಗೋದೇ ಇಲ್ವಾ? ಅವರ್ಯಾರಿಗೂ ಬಾರ್ ಗೊತ್ತಿಲ್ವಾ? ಹಸಿವಿಗೂ ಇಂದಿರಾ ಗಾಂಧಿಯವರಿಗೂ ಏನು ಸಂಬಂಧ? ಇಂದಿರಾ ಗಾಂಧಿ ಬಗ್ಗೆ ಗೌರವ ಇದೆ. ಹೋಲಿಕೆ ಮಾಡುವ ಮೊದಲು ಯೋಚಿಸಬೇಕು’ ಎಂದು ಪ್ರತಿಕ್ರಿಯಿಸಿದರು. ಸಿ.ಟಿ. ರವಿ–ಕಾಂಗ್ರೆಸ್ ಮುಖಂಡರ ನಡುವಿನ ವಾಕ್ಸಮರದ ಕುರಿತು ಪ್ರತಿಕ್ರಿಯಿಸಿ, ‘ಮದ್ದಾನೆ–ಮದ್ದಾನೆ ಗುದ್ದಾಡುವಾಗ, ಗುಬ್ಬಿ ಹೋಗಿ ಬುದ್ಧಿ ಹೇಳುವುದು ಪೆದ್ದಲ್ಲವೇನೆ ಸರಸಿ’ ಎಂಬ ಡಿವಿಜಿಯವರ ಕವನದ ಉದಾಹರಣೆ ನೀಡಿದರು. ‘ಮದ್ದಾನೆಗಳು ಹುಕ್ಕಾ ಬಾರ್, ಆ ಬಾರ್ ಎಂದು ಗುದ್ದಾಡಲಿ. ನಾವೂ ನೀವು ರೈತರ ಬಗ್ಗೆ ಗುದ್ದಾಡೋಣ’ ಎಂದರು.
ಮಂಡ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚಳ: ಕೃಷಿ ಸಚಿವ ಕಳವಳ
‘ಮಂಡ್ಯ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವುದು ಕಳವಳದ ಸಂಗತಿ. ನೀರಿನ ಕೊರತೆಯ ನಡುವೆಯೂ ಕೋಲಾರದ ರೈತರು ಹೆಚ್ಚು ಅಭಿವೃದ್ಧಿ ಹೊಂದಿದ್ದಾರೆ. ಆದರೆ, ಎಲ್ಲ ಸೌಲಭ್ಯಗಳಿರುವ ಮಂಡ್ಯ ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಗಂಭೀರ ಅಧ್ಯಯನ ಅಗತ್ಯ’ ಎಂದು ಬಿ.ಸಿ. ಪಾಟೀಲ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.