ADVERTISEMENT

ಚಳ್ಳಕೆರೆ | ಶಾಶ್ವತ ಬರಗಾಲ ಪ್ರದೇಶ ಘೋಷಣೆಗೆ ಆಗ್ರಹ: ರೈತ ಸಂಘದದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 6:52 IST
Last Updated 17 ಅಕ್ಟೋಬರ್ 2025, 6:52 IST
ಚಳ್ಳಕೆರೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ರೈತ ಸಂಘದ ತಾಲ್ಲೂಕು ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.
ಚಳ್ಳಕೆರೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ರೈತ ಸಂಘದ ತಾಲ್ಲೂಕು ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.   

ಚಳ್ಳಕೆರೆ: ವಿಫಲವಾಗಿರುವ ಶೇಂಗಾ, ತೊಗರಿ ಮತ್ತು ಈರುಳ್ಳಿ ಬೆಳೆಗೆ ತಾತ್ಕಾಲಿಕ ಪರಿಹಾರ ನೀಡಬೇಕು ಮತ್ತು ಚಿತ್ರದುರ್ಗ ಜಿಲ್ಲೆಯನ್ನು ಶಾಶ್ವತ ಬರಗಾಲ ಪೀಡಿತ ಪ್ರದೇಶ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಗುರುವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ನೇತೃತ್ವ ವಹಿಸಿದ್ದ ರೈತ ಸಂಘದ ರಾಜ್ಯ ಮುಖಂಡ ಕೆ.ಪಿ.ಭೂತಯ್ಯ ಮಾತನಾಡಿ, ‘ಅತಿವೃಷ್ಟಿ – ಅನಾವೃಷ್ಟಿಯ ಪರಿಣಾಮ ಜಿಲ್ಲೆಯ ರೈತರು 10 ವರ್ಷ ನಿರಂತರ ನಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿ ಮಳೆ ಕೊರತೆಯಿಂದ ಶೇಂಗಾ, ತೊಗರಿ ಹಾಗೂ ಈರುಳ್ಳಿ ಬೆಳೆ ಸಂಪೂರ್ಣ ವಿಫಲವಾಗಿದೆ.
ಹೀಗಾಗಿ ಶೇಂಗಾ, ತೊಗರಿ ಬೆಳೆದ ಪ್ರತಿ ಹೆಕ್ಟೇರ್‌ಗೆ ₹ 50,000 ಹಾಗೂ ಈರುಳ್ಳಿಗೆ ₹ 1 ಲಕ್ಷ ಪರಿಹಾರ ನೀಡಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಮೀರಾಸಾಬಿಹಳ್ಳಿ ಸಿ.ಶಿವಲಿಂಗಪ್ಪ ಮಾತನಾಡಿ, ‘ರಾಷ್ಟ್ರೀಕೃತ ಬ್ಯಾಂಕ್‍ಗಳ ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ಮಳೆ ಬಂದು ಬೆಳೆ  ಬರುವವರೆಗೆ ರೈತರ ಸಾಲ ವಸೂಲಿ ಮಾಡಬಾರದು. ವಿಮೆ ಪಾವತಿಸಿದ ರೈತರ ಖಾತೆಗೆ ಕೂಡಲೇ ವಿಮಾಹಣ ಜಮಾ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ADVERTISEMENT

ಪ್ರಗತಿಪರ ರೈತ ವಿಡಪನಕುಂಟೆ ಸಿದ್ದೇಶರೆಡ್ಡಿ, ತಾಲ್ಲೂಕು ಘಟಕದ ಅಧ್ಯಕ್ಷ ಹಂಪಣ್ಣ, ಜಿಲ್ಲಾ ಘಟಕದ ಅಧ್ಯಕ್ಷ ಧನಂಜಯ, ಜಿಲ್ಲಾ ಘಟಕದ ಉಪಾಧ್ಯಕ್ಷ ಮಲ್ಲಾಪುರ ತಿಪ್ಪೇಸ್ವಾಮಿ ಮಾತನಾಡಿದರು.

ಮನವಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ತಹಶೀಲ್ದಾರ್ ರೇಹಾನ್‍ಪಾಷ ತಿಳಿಸಿದರು.

ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಅಶೋಕ್, ಜಿಲ್ಲಾ ಲೀಡ್ ಬ್ಯಾಂಕ್‌ ವ್ಯವಸ್ಥಾಪಕ ರಾಘವೇಂದ್ರ, ತೋಟಗಾರಿಕೆ ಇಲಾಖೆಯ ಕುಮಾರ್, ರೈತ ಸಂಘದ ಮಹಿಳಾ ಪ್ರತಿನಿಧಿ ಓಂಕಾರಮ್ಮ, ಶಾಂತಮ್ಮ, ಮಾರಕ್ಕ, ಓಬಕ್ಕ, ಲಿಂಗದಹಳ್ಳಿ ಪಾಲಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.