ADVERTISEMENT

‘ದುರ್ಗದ ಬೇಡರ್ದಂಗೆ’ ಕಾದಂಬರಿ ಈಗ ಪಠ್ಯ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 7:35 IST
Last Updated 17 ಜನವರಿ 2026, 7:35 IST
‘ದುರ್ಗದ ಬೇಡರ್ದಂಗೆ’ ಕಾದಂಬರಿಯ ಮುಖಪುಟ
‘ದುರ್ಗದ ಬೇಡರ್ದಂಗೆ’ ಕಾದಂಬರಿಯ ಮುಖಪುಟ   

ಚಿತ್ರದುರ್ಗ: 1857ರ ಸಿಪಾಯಿ ದಂಗೆಗೂ ಮೊದಲೇ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿ ನಂತರ ಕಲ್ಲಿನಕೋಟೆಯೊಳಗೆ ನೇಣು ಕುಣಿಕೆಗೆ ಕೊರಳೊಡ್ಡಿದ್ದ 7 ಬೇಡ ಹುಡುಗರ ಕತೆಯೇ ‘ದುರ್ಗದ ಬೇಡರ್ದಂಗೆ’ ಐತಿಹಾಸಿಕ ಕಾದಂಬರಿಯ ತಿರುಳು. ಹಿರಿಯ ಸಾಹಿತಿ ಬಿ.ಎಲ್‌.ವೇಣು ಅವರು ಚಿತ್ರಿಸಿರುವ ಈ ಚಾರಿತ್ರಿಕ ಕಾದಂಬರಿ ಈಗ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಎಂ.ಎ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿ ಆಯ್ಕೆಯಾಗಿದೆ.

ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಬೇಡರು ಬ್ರಿಟಿಷ್‌ ಅಧಿಕಾರಿಗಳ ಮೇಲೆ ದಾಳಿ ಮಾಡುತ್ತಿದ್ದರು. ದೊಡ್ಡೇರಿ ಗೌಡರು, ಕಾಡಂಚಿನ ಗ್ರಾಮಸ್ಥರು ಅವರಿಗೆ ಸಹಾಯ ಮಾಡುತ್ತಿದ್ದರು. ಬೇಡರು ಕಾಡಿನಿಂದ ಕಾಡಿಗೆ ಸ್ಥಳ ಬದಲಾವಣೆ ಮಾಡುತ್ತಿದ್ದರು. ಕಡೆಗೆ ಹೊಳಲ್ಕೆರೆ ತಾಲ್ಲೂಕು ರಾಮಗಿರಿ ಅರಣ್ಯದಲ್ಲಿ 7 ಮಂದಿ ಬೇಡ ಹುಡುಗರು ಬ್ರಿಟಿಷ್‌ ಸೈನ್ಯಕ್ಕೆ ಸೆರೆ ಸಿಕ್ಕಿದ್ದರು. ಬ್ರಿಟಿಷರು ಏಕನಾಥೇಶ್ವರಿ ದೇವಾಲಯದ ಎದುರು ಸಾರ್ವಜನಿಕರ ಎದುರಿನಲ್ಲಿ ನೇಣುಗಂಬಕ್ಕೇರಿಸಿದರು ಎಂಬ ವಿಷಯ ಕುತೂಹಲ ಮೂಡಿಸುತ್ತದೆ.

1849ರಲ್ಲಿ ಈ ಘಟನೆ ನಡೆದಿದ್ದರೂ ಇತಿಹಾಸದ ಪುಟಗಳಲ್ಲಿ ದಾಖಲಾಗಿಲ್ಲ. ಸಿಪಾಯಿ ದಂಗೆಯೇ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಬಿಂಬಿತವಾಗಿದೆ. ಅದಕ್ಕೂ ಮೊದಲೇ ನಡೆದ ಬೇಡರ ದಂಗೆಯ ಚಿತ್ರಣವನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ. ಬೇಡರ ತ್ಯಾಗವನ್ನು ಕೇಳಿ ಪ್ರೇರಣೆಗೊಂಡ ಸಾಹಿತಿ ಬಿ.ಎಲ್‌.ವೇಣು ಅವರು 2023ರಲ್ಲಿ ಈ ಕಾದಂಬರಿ ರಚಿಸಿದರು. ಅದರಲ್ಲಿ ಚಿತ್ರದುರ್ಗದ ಬೇಡರ ಇತಿಹಾಸ, ಹೋರಾಟವನ್ನು ದಾಖಲಿಸಿದ್ದಾರೆ. ಈಗ ಕಾದಂಬರಿ ಪಠ್ಯ ರೂಪ ಪಡೆದಿದೆ. ಈಗಾಗಲೇ ವೇಣು ಅವರ ‘ನಾಳೆಗಳಿಲ್ಲದವರು’, ‘ಸುಡುಗಾಡು ಸಿದ್ದನ ಪ್ರಸಂಗ’ ಕೃತಿಗಳು ಪಠ್ಯವಾಗಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.