ಹೊಳಲ್ಕೆರೆ: ತಾಲ್ಲೂಕಿನಲ್ಲಿ ಈವರ್ಷ 45,150 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಬಂಪರ್ ಬೆಳೆ ನಿರೀಕ್ಷಿಸಲಾಗಿದೆ. 37,995 ಹೆಕ್ಟೇರ್ನಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ 7,155 ಹೆಕ್ಟೇರ್ ಹೆಚ್ಚುವರಿ ಬಿತ್ತನೆ ಆಗಿದೆ. ಸರಾಸರಿ ಎಕರೆಗೆ 20 ಕ್ವಿಂಟಲ್ ಮೆಕ್ಕೆಜೋಳ ಇಳುವರಿ ನಿರೀಕ್ಷಿಸಲಾಗಿದ್ದು, ಕೃಷಿ ಇಲಾಖೆ 2.25 ಲಕ್ಷ ಟನ್ ಉತ್ಪಾದನೆಯ ಗುರಿ ಹೊಂದಿದೆ.
‘ಕಸಬಾ, ರಾಮಗಿರಿ, ಬಿ.ದುರ್ಗ ಹೋಬಳಿಗಳಲ್ಲಿ ಮೆಕ್ಕೆಜೋಳ ತೆನೆಯೊಡೆದಿದ್ದು, ಕಾಳುಕಟ್ಟುವ ಹಂತದಲ್ಲಿದೆ. ಈ ಪ್ರದೇಶದ ಬೆಳೆಗೆಮಳೆ ಅಗತ್ಯವಾಗಿದ್ದು, ಒಂದುಬಾರಿ ಉತ್ತಮ ಮಳೆ ಬಂದರೆಹೆಚ್ಚು ಇಳುವರಿ ಬರಲಿದೆ. ತಾಳ್ಯ ಹೋಬಳಿಯ ಶಿವಗಂಗಾ, ಚಿತ್ರಹಳ್ಳಿ, ಟಿ.ನುಲೇನೂರು, ಬಿ.ಜಿ.ಹಳ್ಳಿ ಸುತ್ತಲಿನ ಪ್ರದೇಶದಲ್ಲಿ ಮೆಕ್ಕೆಜೋಳ ತಡವಾಗಿ ಬಿತ್ತನೆ ಆಗಿದ್ದರಿಂದ ಈಗ ತೆನೆ ಬಿಡುವ ಹಂತದಲ್ಲಿದೆ. ಈ ಭಾಗಕ್ಕೆ ಇನ್ನೂ ಎರಡು ಮಳೆ ಬೇಕಾಗುತ್ತದೆ. ತಾಲ್ಲೂಕಿನ ಎಲ್ಲಾ ಭಾಗದಲ್ಲೂ ಸಮೃದ್ಧವಾಗಿ ಮೆಕ್ಕೆಜೋಳ ಬೆಳೆದಿದ್ದು, ಹೆಚ್ಚು ಉತ್ಪಾದನೆ
ನಿರೀಕ್ಷೆ ಮಾಡಲಾಗಿದೆ’ ಎಂದು ಪ್ರಭಾರ ಸಹಾಯಕ ಕೃಷಿ ನಿರ್ದೇಶಕ ವಿ.ಸಿ. ಉಮೇಶ್ ಹೇಳಿದರು.
‘ತಾಲ್ಲೂಕಿನಲ್ಲಿ ರಾಗಿ, ಹೈಬ್ರಿಡ್ ಜೋಳ, ತೊಗರಿ, ಹತ್ತಿ, ಶೇಂಗಾ, ಅವರೆ ಸೇರಿ ಒಟ್ಟು 54,313 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಈ ವರ್ಷ ಉತ್ತಮ ಮಳೆ ಬಂದಿರುವುದರಿಂದ ಶೇ 98.06ರಷ್ಟು ಬಿತ್ತನೆ ಆಗಿದ್ದು, ಎಲ್ಲಾ ಕಡೆ ಉತ್ತಮ
ಬೆಳೆ ಬಂದಿದೆ. ಉತ್ತಮ ಮಳೆ ಬಂದರೆ ನಿರೀಕ್ಷೆಗೂ ಮೀರಿ ಆಹಾರ ಧಾನ್ಯಗಳ ಉತ್ಪಾದನೆ ಆಗಲಿದೆ’ ಎಂದು ಎಡಿಎ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.