ಹಿರಿಯೂರು: ತಾಲ್ಲೂಕಿನ ಜವನಗೊಂಡನಹಳ್ಳಿ, ಕರಿಯಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಸೋಮವಾರ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಕುಡಿಯುವ ನೀರು ಪೂರೈಕೆ ಕಾರ್ಯದಲ್ಲಿ ವಿಫಲವಾದ ಗ್ರಾಮ ಪಂಚಾಯಿತಿ ಪಿಡಿಒಗಳನ್ನು ತರಾಟೆಗೆ ತೆಗೆದುಕೊಂಡರು.
‘ಕುಡಿಯುವ ನೀರು ಯೋಜನೆಗೆ ಅನುದಾನದ ಕೊರತೆ ಇದ್ದರೆ ತಕ್ಷಣ ನನ್ನ ಗಮನಕ್ಕೆ ತನ್ನಿ. ಸಣ್ಣ ಸಣ್ಣ ವಿಚಾರಕ್ಕೆಲ್ಲ ನಗರದಲ್ಲಿರುವ ನನ್ನ ಕಚೇರಿಗೆ ಅಲೆಯುವಂತೆ ಮಾಡಬೇಡಿ. ಮೊದಲು ಸಬೂಬು ಹೇಳುವ ಅಭ್ಯಾಸ ಬಿಡಿ. ಬಹುತೇಕ ಗ್ರಾಮಗಳಲ್ಲಿ ಸ್ವಚ್ಛತೆ ಬಗ್ಗೆ ದೂರುಗಳಿವೆ. ಇಂತಹ ಸಮಸ್ಯೆಗಳನ್ನು ಸ್ಥಳೀಯ ಸಂಸ್ಥೆಗಳು ನಿರ್ವಹಣೆ ಮಾಡಬೇಕಲ್ಲವೆ’ ಎಂದು ಸಚಿವರು ಪ್ರಶ್ನಿಸಿದರು.
‘ರೈತರ ಪಂಪ್ಸೆಟ್ಗಳಿಗೆ ಸರ್ಕಾರದ ಮಾರ್ಗಸೂಚಿಯಂತೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು. ವಿದ್ಯುತ್ ಸಂಪರ್ಕ ಕಲ್ಪಿಸಲು ಕಂಬಗಳ ಸಮಸ್ಯೆ ಇದ್ದರೆ ಮೇಲಧಿಕಾರಿಗಳಿಗೆ ಹೇಳಿ ತರಿಸಿಕೊಡುತ್ತೇನೆ. ಬಹುತೇಕ ಹಳ್ಳಿಗಳಿಗೆ ಸ್ಮಶಾನ ಮಂಜೂರು ಮಾಡಿದ್ದು, ಅವುಗಳನ್ನು ಪಂಚಾಯಿತಿ ಅನುದಾನದಲ್ಲಿ ಅಭಿವೃದ್ಧಿ ಪಡಿಸಿ. ತಿಂಗಳಲ್ಲಿ ಒಂದೆರಡು ಬಾರಿ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರನ್ನು ಸೇರಿಸಿಕೊಂಡು ಶ್ರಮಾದಾನ ಕಾರ್ಯಕ್ರಮ ನಡೆಸಿ. ಆಗ ಹಳ್ಳಿಗಳ ಚಿತ್ರಣವೇ ಬದಲಾಗುತ್ತದೆ’ ಎಂದು ಸುಧಾಕರ್ ಪಿಡಿಒಗಳಿಗೆ ಸೂಚಿಸಿದರು.
ಜೆ.ಜೆ.ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಲ್ತಾಫ್, ಕರಿಯಾಲ ಪಂಚಾಯಿತಿ ಅಧ್ಯಕ್ಷೆ ವಿಜಯಮ್ಮ, ಉಪಾಧ್ಯಕ್ಷ ರಾಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನಾಗೇಂದ್ರನಾಯ್ಕ, ಮುಖಂಡರಾದ ಪಿ.ಎಸ್. ಪಾತಯ್ಯ, ಪುಟ್ಟರಾಜು, ಮಂಜುನಾಥ್, ನರಸಿಂಹಸ್ವಾಮಿ, ವೇದಮೂರ್ತಿ, ತಿಪ್ಪಮ್ಮ, ಮಹಮದ್ ಫಕೃದ್ದಿನ್, ಚಿತ್ರಲಿಂಗಪ್ಪ, ಶ್ರೀನಿವಾಸನಾಯಕ, ಗಿರೀಶ್ ನಾಯಕ, ವಿ.ಶಿವಕುಮಾರ್, ಪ್ರಶಾಂತ್, ಮಂಜುಳಾ, ಉಮೇಶ್, ಭರತ್, ಶೌಕತ್ ಆಲಿ, ಮಂಗಳಮ್ಮ, ಶಬನಾಪರ್ವೀನ್, ಕೃಷ್ಣಪ್ಪ, ಮಾರಣ್ಣ, ನಾಗರಾಜ್, ನಾಗೇಂದ್ರಪ್ಪ, ಮಹೇಶ್, ಸೀನಪ್ಪ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.