ದಿಂಡಾವರ (ಹಿರಿಯೂರು): ತಾಲ್ಲೂಕಿನ ದಿಂಡಾವರ ಗ್ರಾಮದಲ್ಲಿ ಮೆಕ್ಕೆಜೋಳಕ್ಕೆ ಬೆಂಕಿರೋಗ ಹಾಗೂ ಕಾಡುಹಂದಿಗಳ ಕಾಟದಿಂದ ಬೇಸತ್ತ ರೈತರೊಬ್ಬರು ಫಸಲಿಗೆ ಬಂದಿದ್ದ ಮೆಕ್ಕೆಜೋಳದ ಹೊಲಕ್ಕೆ ಕುರಿ ಮಂದೆ, ಎತ್ತುಗಳನ್ನು ಬಿಟ್ಟು ಮೇಯಿಸಿದ್ದಾರೆ.
ಇಳಿ ವಯಸ್ಸನ್ನೂ ಲೆಕ್ಕಿಸದೇ ಎರಡು ಎಕರೆ ಜಮೀನಿನಲ್ಲಿ ₹ 50 ಸಾವಿರದಿಂದ ₹ 60 ಸಾವಿರದಷ್ಟು ವೆಚ್ಚ ಮಾಡಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದ ಇ. ತಿಮ್ಮಯ್ಯ ಎಂಬ ವೃದ್ಧ ರೈತರೇ ನಷ್ಟಕ್ಕೆ ಸಿಕ್ಕಿರುವವರು.
‘ಬೆಳೆಗೆ ಬೆಂಕಿ ರೋಗ ಕಾಣಿಸಿಕೊಂಡಿದ್ದರಿಂದ ಬೆಳವಣಿಗೆ ಕುಂಠಿತವಾಯಿತು. ಮೆಕ್ಕೆಜೋಳಕ್ಕೆ
ಪೈಪೋಟಿ ನೀಡುವಂತೆ ಹುಲ್ಲು ಬೆಳೆದಿತ್ತು. ಕೈಯಲ್ಲಿ ಕಾಸಿಲ್ಲದ ಕಾರಣಕ್ಕೆ ಸಕಾಲದಲ್ಲಿ ರಾಸಾಯನಿಕ ಸಿಂಪಡಣೆ ಮಾಡಲು, ಕಳೆ ಕೀಳಿಸಲು ಆಗಲಿಲ್ಲ. ಇದು ಸಾಲದು ಎಂಬಂತೆ ಕಾಡು ಹಂದಿಗಳ ಹಾವಳಿ ಹೇಳತೀರದಷ್ಟಾಗಿತ್ತು. ನನ್ನ ನೋವನ್ನು ಯಾರಲ್ಲಿ ಹೇಳಿಕೊಳ್ಳಲಿ ಎಂದು ತಿಳಿಯದೇ, ಕುರಿ–ಎತ್ತುಗಳಿಗಾದರೂ ಅನುಕೂಲವಾಗಲಿ ಎಂದು ಹೊಲದಲ್ಲಿ ಮೇಯಲು ಬಿಟ್ಟೆ’ ಎನ್ನುತ್ತಾರೆ
ತಿಮ್ಮಯ್ಯ.
‘ಬೆಳೆ ವಿಮೆ ಕಟ್ಟಿದ್ದೇವೆ. ಆದರೆ, ನಮ್ಮ ಸುತ್ತಮುತ್ತ ಬೇರೆ ರೈತರ ಬೆಳೆ ಚೆನ್ನಾಗಿ ಬಂದಿದೆ. ಹಣವಿದ್ದವರು ಬೆಳೆಯನ್ನು ಕಾಪಾಡಿಕೊಂಡಿದ್ದಾರೆ. ನಮ್ಮಂತಹವರಿಗೆ ಜೀವನ ನಡೆಸುವುದೇ ಕಷ್ಟ. ಸಾಲ ಮಾಡಿ ಬೆಳೆ ಉಳಿಸಿಕೊಳ್ಳಲು ಆಗಲಿಲ್ಲ. ಇದಕ್ಕಿಂತ ಬಿತ್ತನೆ ಮಾಡದೇ ಇದ್ದರೆ ನಷ್ಟ ಆಗುತ್ತಿರಲಿಲ್ಲ. ಸಾಲದ ಭಯ ಇರುತ್ತಿರಲಿಲ್ಲ. ಏನೋ ಹಿರಿಯ ಜೀವ ಭೂಮಿ ತಾಯಿ ಕೈಬಿಡಲ್ಲ ಎಂದು ಬಿತ್ತನೆ ಮಾಡಿದರು. ಈಗ ಬೆಳೆ ನೋಡಿ ಒಳಗೇ ಸಂಕಟಪಡುತ್ತಿದ್ದಾರೆ’ ಎಂದು ತಿಮ್ಮಯ್ಯ ಅವರ ಮಗ ಮಂಜುನಾಥ ಬೇಸರ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.