ಚಳ್ಳಕೆರೆ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ನಗರದ ಹೊರವಲಯದ ಕಾಟಪ್ಪನಹಟ್ಟಿ ಸುತ್ತಲಿನ ರೈತರು ಸೋಮವಾರ ನಗರದ ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಲೋಡ್ ಶೆಡ್ಡಿಂಗ್ ಆಗುತ್ತಿರುವುದರಿಂದ ಹಗಲು 12 ಗಂಟೆ ವಿದ್ಯುತ್ ಇರುತ್ತದೆ. ಇಡೀ ರಾತ್ರಿ ಕತ್ತಲಲ್ಲಿ ಇರಬೇಕಾಗಿದೆ. ವಿದ್ಯುತ್ ಇಲ್ಲದ ಕಾರಣ ಕುಡಿಯುವ ನೀರಿನ ಸಮಸ್ಯೆಯಾಗಿದೆ.
ಹೊಲದಲ್ಲಿ ಇಟ್ಟ ಫಸಲು ಬಿಸಿಲಿಗೆ ಬಾಡುವುದಲ್ಲದೆ ಬೆಳೆ ನಷ್ಟವಾಗುತ್ತಿದೆ. ಪರೀಕ್ಷೆ ಸಮಯವಾದ್ದರಿಂದ ವಿದ್ಯುತ್ ಕಡಿತಗೊಳಿಸುತ್ತಿರುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಮುಖಂಡ ಶ್ರೀನಿವಾಸ್ ಒತ್ತಾಯಿಸಿದರು.
‘ಈಗಾಗಲೇ ಹಲವು ಬಾರಿ ಓವರ್ಲೋಡ್ ಆಗುತ್ತಿದೆ. ಹೀಗಾಗಿ ಕೆಲ ಭಾಗದ ಐಪಿ ಸೆಟ್ನ ವಿದ್ಯುತ್ ಕಡಿತಗೊಳಿಸಿ ಸರಿದೂಗಿಸುತ್ತಿದ್ದೇವೆ. ಕಳೆದ ವರ್ಷ 16,000 ಮೆಗಾ ವಾಟ್ ವಿದ್ಯುತ್ ಬೇಡಿಕೆ ಇತ್ತು. ಈ ವರ್ಷ ಈಗಾಲೇ 19,000 ಮೆಗಾ ವಾಟ್ ಖರ್ಚಾಗಿದೆ. ಒಂದು ಭಾಗದಲ್ಲಿ ಕಡಿತಗೊಳಿಸಿ ಇನ್ನೊಂದು ಭಾಗಕ್ಕೆ ಪೂರೈಸಲು ಸಹಕಾರ ನೀಡಬೇಕು’ ಎಂದು ಬೆಸ್ಕಾಂ ಅಧಿಕಾರಿ ಶಿವಪ್ರಸಾದ್ ಮನವಿ ಮಾಡಿದರು.
ಬೆಸ್ಕಾಂ ಸಿಬ್ಬಂದಿ ನಾಗರಾಜ, ಕಾಟಪ್ಪನಹಟ್ಟಿ ನಾಗರಾಜ, ಕೆ. ವೀರಭದ್ರಪ್ಪ, ಮಂಜುನಾಥ, ವೀರಣ್ಣ, ಕೃಷ್ಣಮೂರ್ತಿ, ಚೆನ್ನಕೇಶವ, ವೀರೇಶ್, ಈರಣ್ಣ, ರಾಜಣ್ಣ, ಬೋರಯ್ಯ, ರಂಗಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.