ಚಿತ್ರದುರ್ಗ: ತಾಲ್ಲೂಕಿನ ಮಲ್ಲಾಪುರ ಕೆರೆಯ ದಡದಲ್ಲಿ ಗುರುವಾರ ಕಣ್ಣು ಹಾಯಿಸಿದಷ್ಟು ದೂರ ಮೃತಪಟ್ಟ ‘ಮೀನಿನ ರಾಶಿ’ ಕಾಣುತ್ತಿದೆ. ಇದರಿಂದಾಗಿ ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಹಿಸಿಕೊಳ್ಳಲಾಗದ ದುರ್ವಾಸನೆಯೂ ಹೆಚ್ಚಳವಾಗಿದೆ.
ಕೆರೆಯಲ್ಲಿನ ಸಾವಿರಾರು ಮೀನುಗಳು ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದು, ಮಲ್ಲಾಪುರ ಗ್ರಾಮ ಹಾಗೂ ಸಮೀಪದ ಪಿಳ್ಳೆಕೇರನಹಳ್ಳಿಯವರೆಗೂ ಕೊಳಕು ವಾಸನೆ ಬೀರುತ್ತಿದೆ. ಕೆರೆ ಮಾರ್ಗದಿಂದ ನಗರಕ್ಕೆ ಬರುವವರು ಮೂಗು ಮುಚ್ಚಿಕೊಂಡು ಬರುವಂತಾಗಿದೆ.
ಸತ್ತು ಬಿದ್ದಿರುವ ಮೀನಿನ ರಾಶಿಯ ಚಿತ್ರಗಳು ಹಾಗೂ ವಿಡಿಯೊ ತುಣಕು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.ಮರಣಮೃದಂಗಕ್ಕೆ ತುತ್ತಾದ ಮೀನುಗಳನ್ನು ನೋಡಿದವರ ಕಣ್ಣಾಲಿ ಕೂಡ ಒದ್ದೆಯಾಗಿದೆ. ಅಲ್ಲದೆ, ಇದನ್ನು ಕಣ್ಣಾರೆ ನೋಡಿದ ಎರಡು ಗ್ರಾಮಗಳ ಕೆಲವರು ಗಾಬರಿಗೊಂಡಿದ್ದಾರೆ. 2020ರ ಏಪ್ರಿಲ್ ಮೊದಲ ವಾರದಲ್ಲೂ ಇದೇ ರೀತಿ ಸಾವಿರಾರು ಮೀನುಗಳು ಕೆರೆಯಲ್ಲಿ ಮೃತಪಟ್ಟಿದ್ದವು.
ಮಲ್ಲಾಪುರ ಕೆರೆಗೆ ದಶಕಗಳಿಂದಲೂ ತ್ಯಾಜ್ಯದ ರಾಶಿ, ಮಲೀನ ನೀರು ಸೇರಿಕೊಂಡು ಬಹುತೇಕ ಕಲುಷಿತಗೊಂಡಿದೆ. ಮೀನುಗಳು ಸಾವನ್ನಪ್ಪಲು ಇದು ಕೂಡ ಕಾರಣವೇ ಎಂಬ ಸಂಶಯ ವ್ಯಕ್ತವಾಗುತ್ತಿದೆ. ಕೆರೆ ಕಲುಷಿತಗೊಂಡಿದ್ದರೂ ಮೀನು ಉತ್ಪಾದನೆ ಹಾಗೂ ಸಾಕಾಣಿಕೆಗೆ ಬಳಕೆಯಾಗುತ್ತಿದೆ. ಸತ್ತು ಬಿದ್ದ ಮೀನುಗಳನ್ನು ನೋಡಿ ಗುತ್ತಿಗೆ ಪಡೆದವರು ಆತಂಕಕ್ಕೆ ಒಳಗಾಗಿದ್ದಾರೆ.
‘ಕಲುಷಿತ ನೀರು, ವಿಷಕಾರಕ ಪದಾರ್ಥಗಳ ಜತೆಗೆ ಬುಧವಾರ ಸುರಿದ ಮಳೆಯಿಂದಾಗಿ ಜೀವವಾಯುವಿನ ಕೊರತೆ ಉಂಟಾಗಿದೆ. ಇದರಿಂದ ಉಸಿರಾಟದ ತೊಂದರೆಯಿಂದಲೂ ಮೃತಪಟ್ಟಿರಬಹುದು’ ಎಂದು ಗ್ರಾಮದ ಕೆಲವರು ಶಂಕೆ ವ್ಯಕ್ತಪಡಿಸಿದ್ದಾರೆ.
‘ಯಾವ ಕಾರಣಕ್ಕಾಗಿ ಮೀನು ಮೃತಪಟ್ಟಿವೆ ಎಂಬುದನ್ನು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಖಚಿತಪಡಿಸಬೇಕು. ಇದು ಕೂಡ ಸಾಂಕ್ರಾಮಿಕ ರೋಗದ ಕರಿನೆರಳನ್ನು ಸೃಷ್ಟಿಸಿದೆ. ಅದನ್ನು ತಪ್ಪಿಸಲು ಕೂಡಲೇ ಮೀನುಗಳನ್ನು ಹೊರಗೆ ತೆಗೆಸಲು ಮುಂದಾಗಬೇಕು. ಈ ಮೂಲಕ ಇಲ್ಲಿನ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗದಂತೆ ಅನುಕೂಲ ಮಾಡಿಕೊಡಬೇಕು’ ಎಂದು ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.