ADVERTISEMENT

ದೇವರ ಎತ್ತುಗಳಿಗೆ ಮೇವು ಸಂಗ್ರಹ ಅಭಿಯಾನ

ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿಯಿಂದ ಮೇವು ವಿತರಣೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 5:45 IST
Last Updated 21 ಏಪ್ರಿಲ್ 2021, 5:45 IST
ನಾಯಕನಹಟ್ಟಿ ಹೋಬಳಿಯ ಮಲ್ಲೇಬೋರನಹಟ್ಟಿ ಗ್ರಾಮದ ವಡಲೇಶ್ವರ ದೇವರ ಎತ್ತುಗಳಿಗೆ ಮೇವು ವಿತರಿಸಲಾಯಿತು.
ನಾಯಕನಹಟ್ಟಿ ಹೋಬಳಿಯ ಮಲ್ಲೇಬೋರನಹಟ್ಟಿ ಗ್ರಾಮದ ವಡಲೇಶ್ವರ ದೇವರ ಎತ್ತುಗಳಿಗೆ ಮೇವು ವಿತರಿಸಲಾಯಿತು.   

ಪ್ರಜಾವಾಣಿ ವಾರ್ತೆ

ನಾಯಕನಹಟ್ಟಿ: ಹೋಬಳಿಯಲ್ಲಿ ಬಿಸಿಲಿನ ತಾಪ ಹೆಚ್ಚಿದ್ದು, ಅಡವಿಯಲ್ಲಿ ದೇವರ ಎತ್ತುಗಳಿಗೆ ಮೇವು, ನೀರು ಇಲ್ಲದಂತಾಗಿದೆ. ಹಾಗಾಗಿ ದೇವರ ಎತ್ತುಗಳಿಗೆ ಮೇವು ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ಕೆ.ಬಿ. ಓಬಣ್ಣ ಹೇಳಿದರು.

ಹೋಬಳಿಯ ಮಲ್ಲೇಬೋರನಹಟ್ಟಿ ಗ್ರಾಮದ ವಡಲೇಶ್ವರ ದೇವರ ಎತ್ತುಗಳಿಗೆ ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿಯಿಂದ ಮೇವು ವಿತರಿಸಿ ಅವರು ಮಾತನಾಡಿದರು.

ADVERTISEMENT

ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ಮ್ಯಾಸನಾಯಕ ಬುಡಕಟ್ಟು ಜನಾಂಗವು ವಿಶಿಷ್ಟವಾದ ಸಂಸ್ಕೃತಿ ಹೊಂದಿದೆ. ಜನಾಂಗವು ಹಿಂದಿನಿಂದಲೂ ಪಶುಪಾಲನೆ ಮತ್ತು ಪಶುಗಳ ಸಂರಕ್ಷಣೆಯಲ್ಲಿ ತೊಡಗಿದೆ. ತಮ್ಮ ಕಟ್ಟೆಮನೆಗಳು ಮತ್ತು ಅದರ ವ್ಯಾಪ್ತಿಯಲ್ಲಿ ಬರುವ ಗುಡಿಕಟ್ಟು ದೇವರುಗಳಿಗೆ ದೇವರ ಎತ್ತುಗಳನ್ನು ಬಿಡುವ ಪದ್ಧತಿ ಇದೆ. ಈ ದೇವರ ಎತ್ತುಗಳನ್ನು ಪೋಷಣೆ ಮಾಡಲು ಕಿಲಾರಿಗಳು ಇದ್ದಾರೆ. ಅಡವಿಯಲ್ಲಿ ಮೇವು ಮತ್ತು ನೀರಿನ ಕೊರತೆಯಿಂದ ದೇವರ ಎತ್ತುಗಳು ಸಾಯುತ್ತಿವೆ. ಆದಕಾರಣ ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿಯನ್ನು ರಚಿಸಿಕೊಂಡು ಎರಡೂ ತಾಲ್ಲೂಕಿನಲ್ಲಿರುವ ದೇವರ ಎತ್ತುಗಳಿಗೆ ಪ್ರತಿವರ್ಷ ಬೇಸಿಗೆಯಲ್ಲಿ ಮೇವು ಒದಗಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಮುಖಂಡ ಕಾಕಾಸೂರಯ್ಯ, ಸೋಮವಾರ ಜಗಳೂರು ತಾಲ್ಲೂಕಿನಿಂದ ಉಚಿತವಾಗಿ ಮೆಕ್ಕೆಜೋಳದ ಮೇವು ಸಂಗ್ರಹಿಸಿ ಹೋಬಳಿಯ ಮಲ್ಲೇಬೋರನಹಟ್ಟಿ ವಡಲೇಶ್ವರ ದೇವರ ಎತ್ತುಗಳು, ಭೀಮಗೊಂಡನಹಳ್ಳಿ ಮತ್ತು ದಾಸರಮುತ್ತೇನಹಳ್ಳಿ ಓಬಳದೇವರು ದೇವರ ಎತ್ತುಗಳಿಗೆ, ಮಲ್ಲೂರಹಳ್ಳಿ ರಾಜಲುದೇವರು ದೇವರ ಎತ್ತುಗಳಿಗೆ ತಲಾ ಒಂದು ಲೋಡ್‌ನಷ್ಟು ಮೇವು ವಿತರಿಸಲಾಯಿತು. ನೆಲಗೇತಹಟ್ಟಿ ಚನ್ನಕೇಶವ ದೇವರ ಎತ್ತುಗಳಿಗೆ, ಕುದಾಪುರ, ಬೋಸೆದೇವರಹಟ್ಟಿ, ನನ್ನಿವಾಳ ಗ್ರಾಮಗಳ ದೇವರ ಎತ್ತುಗಳಿಗೆ ಮೇವು ಒದಗಿಸಲಾಗುವುದು. ಮುಂದಿನ ದಿನಗಳಲ್ಲಿ ಮೇವು ಖಾಲಿಯಾದ ತಕ್ಷಣ ಮತ್ತೆ ಮೇವು ಒದಗಿಸಲಾಗುವುದು ಎಂದು ತಿಳಿಸಿದರು.

ಮುಖಂಡ ಚಂದ್ರಣ್ಣ, ಟಿ.ಪಿ. ಮಂಜುನಾಥ, ಕೆ.ಸಿ. ರಮೇಶ, ಕಿಲಾರಿ ಪಾಲಯ್ಯ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.