ಚಿತ್ರದುರ್ಗ: ದೆವ್ವ ಬಿಡಿಸುವುದಾಗಿ ನಂಬಿಸಿ ಮೂರು ವರ್ಷದ ಬಾಲಕಿಯನ್ನು ಪೂಜಾರಿ ಕೋಲಿನಿಂದ ಹೊಡೆದು ಸಾಯಿಸಿದ ಘಟನೆ ಹೊಳಲ್ಕೆರೆ ತಾಲ್ಲೂಕಿನ ಅಜ್ಜಿ ಕ್ಯಾತನಹಳ್ಳಿಯಲ್ಲಿ ಭಾನುವಾರ ನಡೆದಿದೆ.
ಪ್ರವೀಣ್ ಹಾಗೂ ಶಾಮಲಾ ದಂಪತಿಯ ಪುತ್ರಿ ಪೂರ್ವಿಕಾ ಮೃತ ಬಾಲಕಿ. ಚೌಡಮ್ಮನ ದೇಗುಲದ ಪೂಜಾರಿ ರಾಕೇಶ್ (19) ಎಂಬಾತನನ್ನು ಚಿಕ್ಕಜಾಜೂರು ಪೊಲೀಸರು ಬಂಧಿಸಿದ್ದಾರೆ. ಮೌಢ್ಯ ನಿಷೇದ ಕಾಯ್ದೆ–2017ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
‘ಪೂರ್ವಿಕಾ ಮೂರು ದಿನಗಳಿಂದ ಸರಿಯಾಗಿ ಊಟ ಮಾಡುತ್ತಿರಲಿಲ್ಲ. ಬಾಲಕಿಗೆ ದೆವ್ವ ಹಿಡಿದಿದೆ ಎಂದಿದ್ದ ರಾಕೇಶ್, ಪೂಜೆ ಮಾಡುವುದಾಗಿ ನಂಬಿಸಿದ್ದನು. ಭಾನುವಾರ ಬೆಳಿಗ್ಗೆ ದಂಪತಿ ಬಾಲಕಿಯೊಂದಿಗೆ ಪೂಜಾರಿಯ ಗುಡಿಸಲಿಗೆ ತೆರಳಿದ್ದರು. ಪೋಷಕರನ್ನು ಹೊರಗೆ ನಿಲ್ಲಿಸಿ ಬಾಲಕಿಯೊಂದಿಗೆ ಪೂಜೆಯಲ್ಲಿ ತೊಡಗಿದ್ದನು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಮಾಹಿತಿ ನೀಡಿದ್ದಾರೆ.
‘ದೆವ್ವ ಬಿಡಿಸುವ ನೆಪದಲ್ಲಿ ಕೊಲಿನಿಂದ ಬಾಲಕಿಗೆ ಏಟು ನೀಡಿದ್ದಾನೆ. ಪ್ರಜ್ಞೆ ತಪ್ಪಿದ ಬಾಲಕಿಯನ್ನು ಕೆರೆಯ ಸಮೀಪಕ್ಕೆ ಕರೆದೊಯ್ದು ಪೋಷಕರಿಗೆ ಹಸ್ತಾಂತರಿಸಿದ್ದಾನೆ. ಬಹುಹೊತ್ತು ಕಳೆದರೂ ಬಾಲಕಿಗೆ ಪ್ರಜ್ಞೆ ಮರಳದೇ ಇದ್ದಾಗ ಪೋಷಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆ ವೇಳೆಗಾಗಲೇ ಮಗು ಮೃತಪಟ್ಟಿತ್ತು’ ಎಂದು ವಿವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.