ADVERTISEMENT

ಹಿರಿಯೂರು| ಕಡಲೆ; ಬಂಪರ್ ಇಳುವರಿ ನಿರೀಕ್ಷೆ

ಬಿ.ಸುವರ್ಣ ಬಸವರಾಜ್
Published 28 ನವೆಂಬರ್ 2025, 5:12 IST
Last Updated 28 ನವೆಂಬರ್ 2025, 5:12 IST
ಹಿರಿಯೂರು ತಾಲ್ಲೂಕಿನ ಬಬ್ಬೂರಿನ ಸಮೀಪದ ಹೊಲವೊಂದರಲ್ಲಿ ಹುಲುಸಾಗಿ ಬೆಳೆದಿರುವ ಕಡ್ಲೆ ಬೆಳೆ
ಹಿರಿಯೂರು ತಾಲ್ಲೂಕಿನ ಬಬ್ಬೂರಿನ ಸಮೀಪದ ಹೊಲವೊಂದರಲ್ಲಿ ಹುಲುಸಾಗಿ ಬೆಳೆದಿರುವ ಕಡ್ಲೆ ಬೆಳೆ   

ಹಿರಿಯೂರು: ತಾಲ್ಲೂಕಿನಲ್ಲಿ ಅಕ್ಟೋಬರ್‌ನಲ್ಲಿ ಸುರಿದ ಮಳೆಗೆ ಕಡಲೆ ಬಿತ್ತನೆ ಮಾಡಿರುವ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಬಂಪರ್ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.

ಮದುವೆ ಮುಂಜಿಯಲ್ಲಿನ ಲಡ್ಡು, ಮೈಸೂರು ಪಾಕ್ ನಿಂದ ಹಿಡಿದು ಬಿಸಿಬಿಸಿ ಮೆಣಸಿನಕಾಯಿ ವಡೆ (ಬೋಂಡಾ)ಗೂ ಬೇಕಿರುವ ಕಡಲೆ ಬೇಳೆಯನ್ನು ಈ ಬಾರಿ ತಾಲ್ಲೂಕಿನಲ್ಲಿ 18,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ. ಬಹುತೇಕ ಕಪ್ಪು ಭೂಮಿ ಹೊಂದಿರುವ ಐಮಂಗಲ ಹೋಬಳಿಯಲ್ಲಿ ಎತ್ತ ನೋಡಿದರೂ ಕಡಲೆ ಬೆಳೆಯೇ ಕಾಣುತ್ತದೆ. ಮುಂಗಾರು ಹಾಗೂ ಪಂಪ್ ಸೆಟ್ ನೀರಾವರಿಗೆ ಈರುಳ್ಳಿ ಬಿತ್ತನೆ ಮಾಡಿದ್ದ ಬಹುತೇಕ ರೈತರು ಈ ಬಾರಿ ಎರಡನೇ ಬೆಳೆಯಾಗಿ ಕಡಲೆ ಬಿತ್ತನೆ ಮಾಡಿರುವುದು ವಿಶೇಷ.

ಕೃಷಿ ಇಲಾಖೆಯವರು ರೈತರ ಬೇಡಿಕೆ ಆಧರಿಸಿ ಅಂದಾಜು 9,000 ಕ್ವಿಂಟಲ್ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ರಿಯಾಯಿತಿ ದರದಲ್ಲಿ ವಿತರಿಸಿದ್ದಾರೆ. ಅಂತೆಯೇ ಹಿಂಗಾರು ಹಂಗಾಮಿನಲ್ಲಿ ಸಾಮಾನ್ಯವಾಗಿ ಕಡಲೆ, ಸೂರ್ಯಕಾಂತಿ, ಕುಸುಬೆ ಬಿತ್ತನೆ ಮಾಡುತ್ತಿದ್ದ ರೈತರು ಈ ಬಾರಿ ಕಡಲೆಯ ಬೆಲೆ ಕುಸಿದಿದ್ದರೂ ತಲೆಕೆಡಿಸಿಕೊಳ್ಳದೆ ಬಿತ್ತನೆ ಮಾಡುವ ಮೂಲಕ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ.

ADVERTISEMENT

ಕೃಷಿ ಇಲಾಖೆ ಪ್ರತಿ ಎಕರೆಗೆ 20 ಕೆ.ಜಿ. ಬೀಜ ಬಿತ್ತನೆ ಮಾಡುವಂತೆ ಸೂಚಿಸಿದ್ದರೂ, ರೈತರು ಮಾತ್ರ 30ರಿಂದ 35 ಕೆ.ಜಿ. ಬೀಜ ಬಿತ್ತನೆ ಮಾಡಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ, ಬೇಸಾಯ, ಕಳೆ, ಔಷಧಿ ಸಿಂಪರಣೆ, ಕೊಯ್ಲು ಎಲ್ಲ ಸೇರಿ ಪ್ರತಿ ಎಕರೆಗೆ ₹ 4,500ಕ್ಕಿಂತ ಅಧಿಕ ಖರ್ಚು ಮಾಡಿದ್ದೇವೆ. ಎಕರೆಗೆ ಆರೇಳು ಕ್ವಿಂಟಲ್ ಇಳುವರಿ ಬಂದು, ಮಾರುಕಟ್ಟೆಯಲ್ಲಿ ಈಗಿರುವ ಬೆಲೆಯೇ (ಕ್ವಿಂಟಲ್ ಗೆ ₹ 6.600– ₹ 6,800) ಸಿಕ್ಕಲ್ಲಿ ಖಂಡಿತ ನಷ್ಟವಾಗದು ಎನ್ನುತ್ತಾರೆ ಬಬ್ಬೂರಿನ ಯುವ ರೈತರಾದ ಟಿ. ಸಂತೋಷ್ ಹಾಗೂ ಕಾಂತರಾಜ್ .

ಹಿರಿಯೂರು ತಾಲ್ಲೂಕಿನ ಬಬ್ಬೂರು ಸಮೀಪದ ಹೊಲವೊಂದರಲ್ಲಿ ರೈತರು ಎಡೆಕುಂಟೆ ಹೊಡೆಯುತ್ತಿರುವುದು

‘ರೋಗ ಕೀಟ ನಿಯಂತ್ರಣ ಅಗತ್ಯ’

ಕಡಲೆ ಬೆಳೆಗೆ ರೋಗ ತಗುಲದಂತೆ ರೈತರು ನೋಡಿಕೊಳ್ಳಬೇಕು. ಬೆಳೆಯಲ್ಲಿ ಎಲೆ ತಿನ್ನುವ ಹುಳು ಕಂಡುಬಂದಲ್ಲಿ ಪ್ರತಿ ಲೀಟರ್ ನೀರಿಗೆ 2 ಎಂ.ಎಲ್. ಪ್ರೊಫೆನೋಪಾಸ್ ಪ್ರತಿ ಲೀಟರ್ ನೀರಿಗೆ 0.5 ಗ್ರಾಂ ಹೆಮಾಮ್ಯಾಕ್ಟಿನ್ ಬೆಂಜೋಯೇಟ್ ಹಾಗೂ ಪ್ರತಿ ಲೀಟರ್ ನೀರಿಗೆ ಕ್ಲೋರ್‌ಫೈರಿಫಾಸ್ ಬೆರೆಸಿ ಸಿಂಪರಣೆ ಮಾಡಬೇಕು. ಸೊರಗು ರೋಗ ಕಂಡುಬಂದಲ್ಲಿ ಪ್ರತಿ ಲೀಟರ್ ನೀರಿಗೆ 2 ಗ್ರಾಂ ಕಾರ್ಬನ್ ಡೈಜಿಂ ಅಂಗಮಾರಿ ರೋಗದ ಲಕ್ಷಣವಿದ್ದರೆ ಪ್ರತಿ ಲೀಟರ್ ನೀರಿಗೆ 2 ಗ್ರಾಂ ಮಾಂಕೋಜೆಬ್ ಬೆರೆಸಿ ಸಿಂಪಡಿಸಬೇಕು. ಪ್ರಖರ ಬಿಸಿಲು ಇದ್ದಾಗ ಔಷಧಿ ಸಿಂಪರಣೆ ಮಾಡಿದಲ್ಲಿ ಹುಳುಗಳು ಸಾಯುತ್ತವೆ. ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಸಲಹೆ ನೀಡಿದ್ದಾರೆ. ಈ ಬಾರಿ ಅಕ್ಟೋಬರ್‌ನಲ್ಲಿ ಉತ್ತಮ ಮಳೆಯಾಗಿತ್ತು. ಚೆನ್ನಾಗಿ ಇಬ್ಬನಿ ಬೀಳುತ್ತಿರುವ ಕಾರಣ ರೋಗ ನಿಯಂತ್ರಿಸಿದಲ್ಲಿ ಎಕರೆಗೆ 7ರಿಂದ 8 ಕ್ವಿಂಟಲ್ ಇಳುವರಿ ಪಡೆಯಬಹುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.