ಸಿರಿಗೆರೆ: ಹೋಬಳಿ ಕೇಂದ್ರವಾದ ಭರಮಸಾಗರದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಅದ್ದೂರಿಯಿಂದ ನಡೆಯಿತು. ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.
ಇಲ್ಲಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಸಾಗಿತು. ಯುವಜನತೆ ಕುಣಿದು ಕುಪ್ಪಳಿಸಿತು. ಪೊಲೀಸರು ಕಟ್ಟುನಿಟ್ಟಿನ ಆದೇಶ ಮಾಡಿದ್ದರಿಂದ ಈ ಬಾರಿ ಡಿ.ಜೆ. ಬಳಸಲಿಲ್ಲ. ಭವ್ಯವಾದ ಗಣಪತಿ ಮೂರ್ತಿಯನ್ನು ಅಲಂಕೃತ ಟ್ರ್ಯಾಕ್ಟರ್ನಲ್ಲಿ ಕುಳ್ಳಿರಿಸಲಾಗಿತ್ತು. ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
‘ಹಿಂದೂ ವಿರೋಧಿ ಷಡ್ಯಂತ್ರ’: ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ರಾಷ್ಟ್ರ ರಕ್ಷಣಾ ಪಡೆ ಮುಖಂಡ ಪುನೀತ್ ಕೆರೆಹಳ್ಳಿ ‘ರಾಜ್ಯ ಸರ್ಕಾರವು ಹಿಂದೂ ವಿರೋಧಿ ನೀತಿಯನ್ನು ಅನುಸರಿಸಿ ಹಿಂದೂಗಳ ಧಾರ್ಮಿಕ ಹಕ್ಕುಗಳನ್ನು ಕಸಿಯುತ್ತಿದೆ. ಇಂತಹ ತಂತ್ರ ಬಹಳ ಕಾಲ ನಡೆಯುವುದಿಲ್ಲ. ಈ ಸರ್ಕಾರವೇ ಖಾಯಂ ಆಗಿ ಅಧಿಕಾರದಲ್ಲಿ ಇರುವುದಿಲ್ಲ. ಇವರ ಅಧಿಕಾರ ಮುಗಿದ ನಂತರ ಭರಮಸಾಗರದಲ್ಲಿಯೇ ಅದ್ದೂರಿ ಯಾತ್ರೆಯನ್ನು ಹಿಂದೂ ಸಂಘಟನೆಗಳಿಂದ ಮಾಡಲಾಗುತ್ತದೆ’ ಎಂದರು.
ಪುನೀತ್ ಕೆರೆಹಳ್ಳಿ ಮಾತನಾಡುತ್ತಿದ್ದಾಗ ಮೈಕ್ ಕೈಕೊಟ್ಟಿತು. ಇದರಿಂದ ಕೆರಳಿದ ಅವರು, ‘ಇಂತಹ ತಂತ್ರಗಳಿಗೆ ನಾವು ವಿಚಲಿತರಾಗುವುದಿಲ್ಲ. ಇದಕ್ಕೆಲ್ಲಾ ಉತ್ತರ ಕೊಡುವ ಕಾಲ ಬರುತ್ತದೆ. ಭರಮಸಾಗರದಲ್ಲಿ ಅಕ್ರಮವಾಗಿ ಕಸಾಯಿಖಾನೆ ನಡೆಯುತ್ತಿದ್ದರೂ, ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ’ ಎಂದು ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.