ಹಿರಿಯೂರು: ‘ಬ್ರಿಟೀಷರ ವಿರುದ್ಧದ ಹೋರಾಟಕ್ಕೆ ಭಾರತೀಯರನ್ನು ಒಗ್ಗೂಡಿಸುವ ವಿಚಾರದಲ್ಲಿ ರಂಗಭೂಮಿ ಪ್ರಮುಖ ಪಾತ್ರ ವಹಿಸಿತ್ತು. ದೇಸೀ ಸೊಗಡಿನ ಪ್ರತೀಕವಾಗಿರುವ ರಂಗಕಲೆ ನಶಿಸಲು ಬಿಡಬಾರದು’ ಎಂದು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್ ತಿಳಿಸಿದರು.
ನಗರದ ವೇದಾವತಿ ಬಡಾವಣೆಯಲ್ಲಿ ಬುಧವಾರ ರಾತ್ರಿ ನವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಕೃಷ್ಣ ಕೃಪಾಪೋಷಿತ ನಾಟಕ ಮಂಡಳಿಯಿಂದ ಪ್ರದರ್ಶಿಸಿದ ಶಾಂಭವಿ ಮಹಾತ್ಮೆ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ನಾಟಕಗಳು ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಜೀವಂತವಾಗಿ ಉಳಿದಿರುವುದಕ್ಕೆ ಯುವಕರು, ರಂಗಾಸಕ್ತರು ಹಬ್ಬ–ಹರಿದಿನಗಳಲ್ಲಿ ನಾಟಕ ಆಡುವ ಅಭ್ಯಾಸ ಉಳಿಸಿಕೊಂಡಿರುವುದು ಕಾರಣ. ನಾಟಕಗಳು ಕಲಾವಿದರ ನೈಜ ಅಭಿವ್ಯಕ್ತಿಯನ್ನು ಸಾದರಪಡಿಸುತ್ತವೆ. ಹಳ್ಳಿಗರನ್ನು ಒಗ್ಗೂಡಿಸುವ ನಾಟಕಗಳು ಸದಾ ಜೀವಂತವಾಗಿ ಉಳಿಯಬೇಕು’ ಎಂದು ಸಲಹೆ ನೀಡಿದರು.
ಜೆಡಿಎಸ್ ಮುಖಂಡ ಎಂ. ರವೀಂದ್ರಪ್ಪ ಮಾತನಾಡಿದರು. ಮುಖಂಡರಾದ ವಿ. ವಿಶ್ವನಾಥ್, ಪಾತ್ರಧಾರಿಗಳಾದ ಚಿತ್ರಜಿತ್ ಯಾದವ್, ಟಿಬಿ ಗೊಲ್ಲರಹಟ್ಟಿ ಎನ್. ಲಕ್ಷ್ಮೀಕಾಂತ್, ಎಂ.ಲೋಕೇಶ್, ನಿಜಲಿಂಗಪ್ಪ, ಶ್ರೀನಿವಾಸ್, ಹರೀಶ್, ವೆಂಕಟೇಶ್, ನಟರಾಜ್, ಎಚ್.ಆರ್. ತಿಪ್ಪೇಸ್ವಾಮಿ, ಜಗದೀಶ್, ಹನುಮಂತಪ್ಪ, ನಿಂಗಣ್ಣ, ನಂದೀಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.