ADVERTISEMENT

ಜನರ ವಿರೋಧ: ಗ್ರಾಮಸಭೆ ಮುಂದೂಡಿಕೆ

ಹಿರಿಯೂರು ತಾಲ್ಲೂಕಿನ ದಿಂಡಾವರ ಗ್ರಾ.ಪ‍ಂ.; ಸಾರ್ವಜನಿಕರಿಗೆ ಮಾಹಿತಿ ನೀಡದೆ ಸಭೆ ಕರೆದ ಆರೋಪ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 5:24 IST
Last Updated 13 ಡಿಸೆಂಬರ್ 2025, 5:24 IST
ಹಿರಿಯೂರು ತಾಲ್ಲೂಕಿನ ದಿಂಡಾವರ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಮ ಸಭೆಗೆ ಚುನಾಯಿತ ಸದಸ್ಯರು ಹಾಗೂ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರು
ಹಿರಿಯೂರು ತಾಲ್ಲೂಕಿನ ದಿಂಡಾವರ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಮ ಸಭೆಗೆ ಚುನಾಯಿತ ಸದಸ್ಯರು ಹಾಗೂ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರು   

ಹಿರಿಯೂರು: ಸಾರ್ವಜನಿಕರ ಗಮನಕ್ಕೆ ತಾರದೆ ಬೆರಳೆಣಿಕೆಯಷ್ಟು ಜನರನ್ನು ಸೇರಿಸಿಕೊಂಡು ಗ್ರಾಮ ಸಭೆ ನಡೆಸಿದ್ದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಭೆಯನ್ನು ರದ್ದುಪಡಿಸಿದ ಘಟನೆ ತಾಲ್ಲೂಕಿನ ದಿಂಡಾವರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

‘ದಿಂಡಾವರ ಗ್ರಾಮ ಪಂಚಾಯಿತಿಗೆ 23 ಹಳ್ಳಿಗಳು ಸೇರಿದ್ದು, 21 ಸದಸ್ಯರಿದ್ದಾರೆ. ಸಭೆಗೆ ಪಂಚಾಯಿತಿ ಅಧ್ಯಕ್ಷರೇ ಬಂದಿಲ್ಲ. ವಾರ್ಷಿಕ ಲೆಕ್ಕ ಪರಿಶೋಧನೆ ಉದ್ದೇಶದ ಸಭೆಯಿಂದ ಚುನಾಯಿತ ಪ್ರತಿನಿಧಿಗಳನ್ನು, ಸಾರ್ವಜನಿಕರನ್ನು ಹೊರಗಿಡುವ ಮೂಲಕ ಏನು ಮಾಡಲು ಹೊರಟಿದ್ದೀರಿ’ ಎಂದು ಪಿಲ್ಲಾಲಿ ಗ್ರಾಮದ ಸದಸ್ಯ ಪಿ.ಎಚ್. ಗೌಡ ಏರುದನಿಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಆಗಿರುವ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ವರದಿ ಮಂಡಿಸಬೇಕು. ಸದಸ್ಯರು ಹಾಗೂ ಗ್ರಾಮಸ್ಥರು ಕಾಮಗಾರಿ ನಡೆದಿದೆಯೇ ಇಲ್ಲವೇ ಎಂಬುದನ್ನು ಹೇಳಬೇಕು. ಜನರ ಅಭಿಪ್ರಾಯ ಕೇಳದೆ ವರದಿ ಓದುವುದು ಸರಿಯಲ್ಲ ಎಂದು ಸಭೆಯಲ್ಲಿದ್ದವರು ದನಿ ಎತ್ತಿದ್ದಾಗ ವರದಿ ವಾಚನವನ್ನು ಸ್ಥಗಿತಗೊಳಿಸಲಾಯಿತು. 

ADVERTISEMENT

‘ವರದಿಯಲ್ಲಿ ಹೇಳಿದ ಬಹುತೇಕ ಕಾಮಗಾರಿಗಳು ಸರ್ಕಾರಿ ಕಡತಗಳಿಗೆ ಸೀಮಿತವಾಗಿವೆ. ನಿದರ್ಶನವಾಗಿ, ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರೆ, ಅಲ್ಲಿ ಕಾಮಗಾರಿ ನಡೆಯದೇ ಇರುವುದನ್ನು ಪ್ರತ್ಯಕ್ಷವಾಗಿ ತೋರಿಸುತ್ತೇವೆ’ ಎಂದು ಗ್ರಾಮಸ್ಥರು ಸವಾಲು ಹಾಕಿದರು.

ಮುಂದಿನ ಸಭೆಯನ್ನು ತಾಲ್ಲೂಕು ಪಂಚಾಯಿತಿ ಇಒ ಸಮ್ಮುಖದಲ್ಲಿಯೇ ನಡೆಸಬೇಕು. ಸರ್ಕಾರಿ ದಾಖಲೆಯಲ್ಲಿ ಉಲ್ಲೇಖಿಸಿರುವ ಕಾಮಗಾರಿಗಳು ಭೌತಿಕವಾಗಿ ಆಗಿರುವುದನ್ನು ಸಾರ್ವಜನಿಕರಿಗೆ ತೋರಿಸಿ ಒಪ್ಪಿಗೆ ಪಡೆಯಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ₹2.5 ಕೋಟಿ ವೆಚ್ಚದ ಕಾಮಗಾರಿ ನಡೆಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಶೇ 80ರಷ್ಟು ಕೃಷಿ ಹೊಂಡಗಳೇ ನಿರ್ಮಾಣವಾಗಿಲ್ಲ. 15ನೇ ಹಣಕಾಸು ಯೋಜನೆಯಡಿ ಒಂದೇ ಅಂಗಡಿಗೆ ₹30 ಲಕ್ಷದಷ್ಟು ಬಿಲ್ ಪಾವತಿಸಿದ್ದು, ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಪಂಚಾಯಿತಿಯು ಅಕ್ರಮಗಳ ತವರು ಮನೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದರು.

ಪ್ರತಿರೋಧ ವ್ಯಕ್ತವಾದ ಕಾರಣ, ಸಭೆಯನ್ನು ರದ್ದುಪಡಿಸಲಾಯಿತು ಎಂದು ಪಿಡಿಒ ಲೋಕೇಶ್ ‘ಪ್ರಜಾವಾಣಿ’ಗೆ ತಿಳಿಸಿದರು. ಸಭೆಗೆ ನೋಡಲ್ ಅಧಿಕಾರಿ ರವೀಂದ್ರ, ತಾಲ್ಲೂಕು ‍ಪಂಚಾಯಿತಿ ಎಂಜಿನಿಯರ್‌ಗಳಾದ ಕುಶಾಲ್, ಹರ್ಷ, ಪಿಡಿಒ ಲೋಕೇಶ್ ಆಗಮಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.