ADVERTISEMENT

ಹಿರಿಯೂರು: ಗ್ರಾಮೀಣ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು!

ಸುವರ್ಣಾ ಬಸವರಾಜ್
Published 1 ಅಕ್ಟೋಬರ್ 2025, 8:17 IST
Last Updated 1 ಅಕ್ಟೋಬರ್ 2025, 8:17 IST
ಹಿರಿಯೂರು ತಾಲ್ಲೂಕಿನ ವದ್ದೀಗೆರೆಯಿಂದ ಸೊಂಡೆಕೆರೆ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿನ ಡಾಂಬರು ಸಂಪೂರ್ಣ ಕಿತ್ತು ಹೋಗಿದ್ದು ಮಣ್ಣಿನ ರಸ್ತೆಯಂತೆ ಕಾಣುತ್ತಿರುವುದು.
ಹಿರಿಯೂರು ತಾಲ್ಲೂಕಿನ ವದ್ದೀಗೆರೆಯಿಂದ ಸೊಂಡೆಕೆರೆ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿನ ಡಾಂಬರು ಸಂಪೂರ್ಣ ಕಿತ್ತು ಹೋಗಿದ್ದು ಮಣ್ಣಿನ ರಸ್ತೆಯಂತೆ ಕಾಣುತ್ತಿರುವುದು.   

ಹಿರಿಯೂರು: ತಾಲ್ಲೂಕಿನ ಗ್ರಾಮೀಣ ಭಾಗದ ರಸ್ತೆಗಳು ತೀರಾ ಹಾಳಾಗಿರುವ ಕಾರಣ ವಾಹನಗಳ ಸುಗಮ ಸಂಚಾರ ಅಸಾಧ್ಯವಾಗುತ್ತಿದೆ. ಜನರು ಹೈರಾಣಾಗುತ್ತಿದ್ದು, ‘ಕೋಡಗನ ಕೋಳಿ ನುಂಗಿತ್ತ’ ಎನ್ನುವ ಮಾತಿನಂತೆ ಇಲ್ಲಿಯ ರಸ್ತೆಗಳ ಸ್ಥಿತಿ ‘ರಸ್ತೆಗೆ ಹಾಕಿದ್ದ ಡಾಂಬರನ್ನು ಮಣ್ಣು ನುಂಗಿತ್ತ’ ಎನ್ನುವಂತಾಗಿದೆ.

ನಗರದಿಂದ ಗನ್ನಾಯಕನಹಳ್ಳಿ, ಮಲ್ಲಪ್ಪನಹಳ್ಳಿ ಮೂಲಕ ವದ್ದೀಗೆರೆ ರಸ್ತೆ, ವದ್ದೀಗೆರೆಯಿಂದ ಎಂ.ಡಿ. ಕೋಟೆ, ಸೊಂಡೆಕೆರೆ ರಸ್ತೆ, ಹಿರಿಯೂರಿನಿಂದ ಹೇಮದಳ–ಅಂಬಲಗೆರೆ–ರಂಗೇನಹಳ್ಳಿ–ಶಿಡ್ಲಯ್ಯನಕೋಟೆ ರಸ್ತೆ, ತಾಳವಟ್ಟಿ– ಬಂಡ್ಲೋರಹಟ್ಟಿ ರಸ್ತೆ, ರಾಷ್ಟ್ರೀಯ ಹೆದ್ದಾರಿ –48ರಿಂದ ಅರಳೀಕಟ್ಟೆ ಗ್ರಾಮದ ಸಂಪರ್ಕ ರಸ್ತೆಗಳು ಹದಗೆಟ್ಟಿವೆ.

ಐಮಂಗಲ ಹೋಬಳಿಯ ಸೊಂಡೆಕೆರೆ ಗ್ರಾಮ ಹಿರಿಯೂರು, ಚಳ್ಳಕೆರೆ ಹಾಗೂ ಚಿತ್ರದುರ್ಗ ತಾಲ್ಲೂಕುಗಳ ಗಡಿ ಗ್ರಾಮವಾಗಿದೆ. ಜಿಲ್ಲೆಯ ಅರ್ಧದಷ್ಟು ಶಾಸಕರು ಈ ಊರಿನ ಮೂಲಕವೇ ಚುನಾವಣಾ ಪ್ರವಾಸ ಮಾಡುವುದುಂಟು. ಆದರೆ, ಈ ಗ್ರಾಮದಿಂದ ಸಾಣಿಕೆರೆ ಮೂಲಕ ಚಳ್ಳಕೆರೆಗೆ ಸಂಪರ್ಕಿಸುವ ರಸ್ತೆ, ಎಂ.ಡಿ. ಕೋಟೆ ಮೂಲಕ ಐತಿಹಾಸಿಕ ವದ್ದೀಗೆರೆ ಸಿದ್ಧೇಶ್ವರಸ್ವಾಮಿ ದೇವಸ್ಥಾನಕ್ಕೆ ಹೋಗುವ ರಸ್ತೆ, ಮರಡಿಹಳ್ಳಿ ಮೂಲಕ ಚಿತ್ರದುರ್ಗಕ್ಕೆ ಹೋಗುವ ರಸ್ತೆಗಳು ವಾಹನ ಸವಾರರಿಗೆ ಸವಾಲು ಒಡ್ಡುವಷ್ಟು ಕೆಟ್ಟು ಹೋಗಿವೆ. ಮಳೆ ಬಂದರಂತೂ ರಸ್ತೆಯಲ್ಲಿ ಗುಂಡಿಗಳು ಎಷ್ಟು ಆಳ ಇವೆ ಎಂದು ತಿಳಿಯದೆ ಬಿದ್ದು ಕೆಸರಿನ ಸ್ನಾನದ ಅನುಭವ ಪಡೆದವರು ಸಾಕಷ್ಟು ಮಂದಿ.

ADVERTISEMENT

‘ಸೊಂಡೆಕೆರೆ ಗ್ರಾಮವೊಂದರಲ್ಲೇ ದ್ವಿಚಕ್ರ ವಾಹನಗಳಲ್ಲಿ ಓಡಾಡುವ 20–25 ವಯಸ್ಸಿನ ಯುವಕರು ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕೆ ಹದಗೆಟ್ಟಿರುವ ರಸ್ತೆಗಳೇ ಕಾರಣ ಎಂದು ವೈದ್ಯರು ಹೇಳುತ್ತಾರೆ. ರಸ್ತೆ ಹಾಳಾಗಿರುವ ಕಾರಣ ಕೆಎಸ್‌ಆರ್‌ಟಿಸಿ ಅಥವಾ, ಖಾಸಗಿಯವರು ಬಸ್‌ ಬಿಡುತ್ತಿಲ್ಲ. ಹೀಗಾಗಿ ಬೈಕ್ ಅನಿವಾರ್ಯ’ ಎನ್ನುತ್ತಾರೆ ಸೊಂಡೆಕೆರೆ ಮಂಜುನಾಥ್.

ವದ್ದೀಗೆರೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭಾನುವಾರ ಹಾಗೂ ಅಮಾವಾಸ್ಯೆ– ಹುಣ್ಣಿಮೆಗಳಂದು ಸಾವಿರಾರು ಸಂಖ್ಯೆಯ ಭಕ್ತರು ಹೋಗುತ್ತಾರೆ. ಭಕ್ತರು ರಸ್ತೆಗಳ ಸ್ಥಿತಿ ಕಂಡು ಮರುಗುತ್ತಾರೆ.

‘ರಸ್ತೆ ಮಾಡಿಕೊಡಿ, ಪಂಪ್‌ಸೆಟ್‌ಗಳಿಗೆ ನಿತ್ಯ ಏಳೆಂಟು ಗಂಟೆ ವಿದ್ಯುತ್ ಕೊಡಿ, ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಡಿ, ಸಕಾಲಕ್ಕೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಕೊಡಿ, ಆರೋಗ್ಯ ಕೇಂದ್ರಗಳಿಗೆ ವೈದ್ಯರನ್ನು ನೇಮಿಸಿ ಎಂದು ಕೇಳಿದ್ದೇವೆ. ಸರ್ಕಾರ ಕೊಡುತ್ತಿಲ್ಲ’ ಎಂದು ಗ್ರಾಮಸ್ಥರು ಆರೋಪಿಸಿದರು.

ರಸ್ತೆಯಲ್ಲಿನ ಡಾಂಬರು ಸಂಪೂರ್ಣ ಕಿತ್ತು ಹೋಗಿರುವ ಕಾರಣ ರಸ್ತೆಯೆಲ್ಲ ಮಣ್ಣು– ಗುಂಡಿ ಮಯವಾಗಿದೆ. ಮಣ್ಣಿನ ರಸ್ತೆಯಲ್ಲಿನ ಗುಂಡಿಗಳಿಗೆ ಡಾಂಬರು ಹಾಕಿ ಮುಚ್ಚಲಾಗದು. ಹೀಗಾಗಿ ಹೊಸದಾಗಿ ಮೆಟ್ಲಿಂಗ್ ಮಾಡಿ ಡಾಂಬರು ಹಾಕಬೇಕಿದೆ. ಒಮ್ಮೆ ನಿರ್ಮಿಸುವ ಡಾಂಬರು ರಸ್ತೆಯನ್ನು ಕನಿಷ್ಠ 10 ವರ್ಷ ಗುತ್ತಿಗೆದಾರರೇ ನಿರ್ವಹಣೆ ಮಾಡುವಂತೆ ನಿಯಮಾವಳಿ ರೂಪಿಸಬೇಕು. ಕಟ್ಟಡ, ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಟೆಂಡರ್ ಆಹ್ವಾನಿಸಿ ಕಮೀಷನ್ ವ್ಯವಹಾರಕ್ಕೆ ಕಡಿವಾಣ ಹಾಕಬೇಕು ಎಂದು ತಾಳವಟ್ಟಿಯ ನಿವೃತ್ತ ಮುಖ್ಯ ಶಿಕ್ಷಕ ಅನಂತರೆಡ್ಡಿ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.