ADVERTISEMENT

ಹೊಸದುರ್ಗ| ಭಗೀರಥ ಗುರುಪೀಠದ ಜಮೀನು ಸಮಸ್ಯೆಗೆ ಶೀಘ್ರ ಪರಿಹಾರ: ಸತೀಶ್ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 7:47 IST
Last Updated 11 ಫೆಬ್ರುವರಿ 2026, 7:47 IST
ಹೊಸದುರ್ಗದ ಭಗೀರಥ ಗುರುಪೀಠದಲ್ಲಿ ಮಂಗಳವಾರ ವಿವಿಧ ಮಠಾಧೀಶರು ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಅವರಿಗೆ ಕಿರೀಟ ಧಾರಣೆ ನೆರವೇರಿಸಿದರು
ಹೊಸದುರ್ಗದ ಭಗೀರಥ ಗುರುಪೀಠದಲ್ಲಿ ಮಂಗಳವಾರ ವಿವಿಧ ಮಠಾಧೀಶರು ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಅವರಿಗೆ ಕಿರೀಟ ಧಾರಣೆ ನೆರವೇರಿಸಿದರು   

ಹೊಸದುರ್ಗ: ಭಗೀರಥ ಗುರುಪೀಠಕ್ಕೆ ಸಂಬಂಧಿಸಿದ 500 ಎಕರೆ ಜಮೀನಿನ ಹಕ್ಕು ದಾಖಲೆಗಳ ಸಮಸ್ಯೆಯನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ಶೀಘ್ರದಲ್ಲೇ ಪರಿಹಾರ ಒದಗಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು. 

ತಾಲ್ಲೂಕಿನ ಮಧುರೆ ಸಮೀಪದ ಬ್ರಹ್ಮ ವಿದ್ಯಾನಗರದ ಭಗೀರಥ ಗುರುಪೀಠದಲ್ಲಿ ಮಂಗಳವಾರ ಆಯೋಜಿಸಿದ್ದ ಭಗೀರಥ ಗುರುಪೀಠದ  ಪುರುಷೋತ್ತಮಾನಂದ ಪುರಿ ಸ್ವಾಮೀಜಿಯ 27ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ, ಭಗೀರಥ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ  ಮಾತನಾಡಿದರು. 

‘ಭಗೀರಥ ಶ್ರೀಗಳು ಸಮುದಾಯದ ಸಂಘಟನೆಗಾಗಿ ಶ್ರಮಿಸುತ್ತಿದ್ದಾರೆ. ಅವರ ನಿರಂತರ ಪರಿಶ್ರಮದ ಫಲದಿಂದಾಗಿ ಶ್ರೀಮಠ ಇಂದು ಅಭಿವೃದ್ಧಿಯತ್ತ ಸಾಗುತ್ತಿದೆ. ಮಠಕ್ಕೆ ಸಹಕಾರ ನೀಡಲು ಸದಾ ಸಿದ್ಧರಿದ್ದೇವೆ’ ಎಂದು ಹೇಳಿದರು. 

ADVERTISEMENT

ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, ‘ಸತೀಶ್ ಜಾರಕಿಹೊಳಿ ಅವರು ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ, ಅವರು ಇಡೀ ಅಹಿಂದ ವರ್ಗದವರ ಆಶಾಕಿರಣ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಂತರದ ಅವಧಿಯಲ್ಲಿ ರಾಜ್ಯವನ್ನು ಮುನ್ನಡೆಸುವ ಎಲ್ಲಾ ಸಾಮರ್ಥ್ಯ ಅವರಲ್ಲಿದೆ. ನಾಡಿನಾದ್ಯಂತ ಜನರು ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ನೋಡಲು ಬಯಸುತ್ತಿದ್ದಾರೆ’ ಎಂದು ಹೇಳಿದರು. 

ಶಾಸಕ ಬಿ‌.ಜಿ.ಗೋವಿಂದಪ್ಪ ಮಾತನಾಡಿ, ‘ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿಯ ಸಾಧನೆ ಅಪಾರ. ಶ್ರೀಮಠದ ವತಿಯಿಂದ ಉಚಿತ ವಿದ್ಯಾಭ್ಯಾಸ, ವಸತಿ, ಪ್ರಸಾದದ ವ್ಯವಸ್ಥೆ ಕಲ್ಪಿಸಿದ್ದಾರೆ. ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು. ಭದ್ರಾ ಮೇಲ್ದಂಡೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಎಲ್ಲಾ ಕೆರೆಗಳಿಗೂ ನೀರು ಹರಿಸಲಾಗುವುದು’ ಎಂದು ಭರವಸೆ ನೀಡಿದರು. 

ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಯಾದವ ಗುರುಪೀಠದ ಕೃಷ್ಣಯಾದವ ಸ್ವಾಮೀಜಿ, ಮಡಿವಾಳ ಮಾಚಿದೇವ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ, ಸಿದ್ಧರಾಮೇಶ್ವರ ಗುರುಪೀಠದ ಜ್ಞಾನಪ್ರಭು ಸಿದ್ಧರಾಮೇಶ್ವರ ಸ್ವಾಮೀಜಿ, ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಅವರಿಗೆ ಕಿರೀಟ ಧಾರಣೆ ನೇರವೇರಿಸಿದರು. 

ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಶ್ರೀರಂಗಪಟ್ಟಣದ ಚಂದ್ರವನ ಮಠದ ತ್ರೀನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ, ಕನುಧಾಮದ ಈಶ್ವರಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. 

ಶಾಸಕ ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಟಿ. ರಘುಮೂರ್ತಿ, ಶ್ರೀನಿವಾಸ್ ಮಾತನಾಡಿದರು. 

ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಲಕ್ಷ್ಮಣ್ ಉಪ್ಪಾರ, ಉಪ್ಪಾರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಲಕ್ಷ್ಮಣ್ ಉಪ್ಪಾರ, ಭಗೀರಥ ಉಪ್ಪಾರ ಧಾರ್ಮಿಕ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಭೀಮಪ್ಪ, ಮುಖಂಡರಾದ ಶ್ರೀಕಾಂತ್ ರಾವ್, ಸರಸ್ವತಿ ಮಹಾದೇವಿ, ಎಚ್.ಎನ್. ವಿಜಯಕುಮಾರ್, ಎಸ್. ಲಿಂಗಮೂರ್ತಿ ಸೇರಿದಂತೆ ಉಪ್ಪಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರು, ತಾಲ್ಲೂಕು ಘಟಕದ ಅಧ್ಯಕ್ಷರು, ಸಮುದಾಯದ ಮುಖಂಡರು ಸೇರಿದಂತೆ ಶ್ರೀಮಠದ ಭಕ್ತರಿದ್ದರು.

ಬಿಜೆ‍ಪಿಯವರಿಗೆ ಅಭಿವೃದ್ಧಿ ಬೇಕಾಗಿಲ್ಲ

‘ವಿರೋಧ ಪಕ್ಷದವರು ಹಿಂದುತ್ವದ ಹೆಸರಿನಲ್ಲಿ ಮತ ಕೇಳುತ್ತಾರೆ. ಬಿಜೆ‍ಪಿಯವರಿಗೆ ಅಭಿವೃದ್ಧಿ ಬೇಕಾಗಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ದೂರಿದರು.  ಭಗೀರಥ ಗುರುಪೀಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ನಮಗೆ ಹೈಕಮಾಂಡ್ ದೇವಸ್ಥಾನವಿದ್ದಂತೆ. ಅಲ್ಲಿಗೆ ಹೋಗಿ ನಮ್ಮ ಕಷ್ಟಸುಖಗಳನ್ನು ಹೇಳಿಕೊಳ್ಳುತ್ತೇವೆ. ಅಲ್ಲಿ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ’ ಎಂದರು.  ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ಅಗತ್ಯಕ್ಕೆ ತಕ್ಕಂತೆ ಅನುದಾನ ಮೀಸಲಿಡುವುದಾಗಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.

ಯಶಸ್ವಿಯಾಗಿ ನಡೆದ ಭಜನಾ ಕಾರ್ಯಕ್ರಮ

ಭಗೀರಥ ಗುರುಪೀಠದಲ್ಲಿ ಸೋಮವಾರದಿಂದ ಆರಂಭವಾದ ಭಜನಾ ಕಾರ್ಯಕ್ರಮ ಮಂಗಳವಾರವೂ ನಡೆಯಿತು. ಬೆಳಿಗ್ಗೆ ವೇದಿಕೆ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.  ಬಾಗಲಕೋಟೆಯ ಭೀಮಾವದೂತ ಭಜನಾ ತಂಡ ರಾಮರೂಢ ಭಜನಾ ತಂಡ ರಾಮಯೋಗಿ ಪರಮಹಂಸ ಭಜನಾ ತಂಡ ಬೆಳಗಾವಿಯ ಬಸವೇಶ್ವರ ಭಜನಾ ತಂಡ ಹಾಗೂ ಭೀಮಾಶಂಕರ ಭಜನಾ ತಂಡದವರು ಪ್ರಥಮ ಸ್ಥಾನ ಪಡೆದರು.  ಗೆದಲೆಮ್ಮಾದೇವಿ ಭಜನಾ ತಂಡ ದುರ್ಗಾಂಭಿಕಾ ಭಜನಾ ತಂಡ ಪಂಚಸಿದ್ಧೇಶ್ವರ ಭಜನಾ ತಂಡ ಮಲ್ಲಿಕಾರ್ಜುನ ಭಜನಾ ತಂಡ ಹಾಗೂ ಬಾಗಲಕೋಟೆ ಶಿವಾನಂದ ಭಾರತಿ ತಂಡದವರು ದ್ವಿತೀಯ ಸ್ಥಾನ ಪಡೆದರು.  ಬೆಳಗಾವಿ ಶಿವಾನಂದ ಭಾರತಿ ಬಾಗಲಕೋಟೆಯ ನಿತ್ಯಾನಂದ ದಾವಣಗೆರೆಯ ಮಾತಾ ಅಕಾಡೆಮಿ ರಾಯಚೂರಿನ ದೇವನಾಂಪ್ರಿಯ ಕಲಾತಂಡ ತುಮಕೂರಿನ ರಾಮಾಂಜನೇಯ ಕಲಾ ತಂಡಗಳು ತೃತೀಯ ಸ್ಥಾನ ಪಡೆದವು.  ಪ್ರಥಮ ಬಹುಮಾನ ₹20000 ದ್ವಿತೀಯ ₹16000 ಹಾಗೂ ತೃತೀಯ ₹14000 ನೀಡಿ ಗೌರವಿಸಲಾಯಿತು. 130ಕ್ಕೂ ಅಧಿಕ ಭಜನಾ ತಂಡದವರು ಭಾಗವಹಿಸಿದ್ದರು. ಒಂದು ತಂಡಕ್ಕೆ 20 ನಿಮಿಷ ಕಾಲಾವಕಾಶ ನೀಡಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.