ADVERTISEMENT

ಧರ್ಮಪುರ: ಮನೆ ಗೋಡೆ ಕುಸಿದು ಗೃಹಿಣಿ ಸಾವು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 5:31 IST
Last Updated 20 ನವೆಂಬರ್ 2021, 5:31 IST
ತ್ರಿವೇಣಿ
ತ್ರಿವೇಣಿ   

ಧರ್ಮಪುರ: ಹೋಬಳಿಯ ಬ್ಯಾಡರಹಳ್ಳಿಯಲ್ಲಿ ಶುಕ್ರವಾರ ಬೆಳಗಿನ ಜಾವ ಶೋಕ ಮಡುಗಟ್ಟಿತ್ತು. ಒಂದು ವಾರದಿಂದ ಹೋಬಳಿಯಲ್ಲಿ ಬಿಡದೆ ಸುರಿಯುತ್ತಿರುವ ಜಿಟಿಜಿಟಿ ಮಳೆಗೆಕೃಷ್ಣಮೂರ್ತಿ ಎಂಬುವವರ ಮನೆಯ ಮಣ್ಣಿನ ಗೋಡೆ ಕುಸಿದು ಅವರ ಪತ್ನಿ ಮೃತಪಟ್ಟಿದ್ದಾರೆ.

ತ್ರಿವೇಣಿ (25), ಅವರ ಪತಿಕೃಷ್ಣಮೂರ್ತಿ, ಅತ್ತೆ ತಿಪ್ಪಮ್ಮ ಮಲಗಿದ್ದಾಗ ಗೋಡೆ ಕುಸಿದು ತ್ರಿವೇಣಿಯವರ ಮೇಲೆ ಬಿದ್ದಿದ್ದರಿಂದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಕುಟುಂಬದವರು ಮಣ್ಣಿನ ಗೋಡೆಯ ಮನೆಯಲ್ಲಿ ವಾಸವಿದ್ದರು.

ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಧನ ಸಹಾಯ ಮಾಡಿದರು. ಸರ್ಕಾರದಿಂದ ₹ 5 ಲಕ್ಷ ಪರಿಹಾರ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು. ಉಪ ತಹಶೀಲ್ದಾರ್ ಮಹಾಂತೇಶ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಮಾಜಿ ಶಾಸಕ ಡಿ.ಸುಧಾಕರ್ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿವೈಯಕ್ತಿಕವಾಗಿ ಧನಸಹಾಯ ನೀಡಿದರು.

ADVERTISEMENT

ಕೃಷ್ಣಮೂರ್ತಿ ಕುಟುಂದವರಿಗೆ ತಹಶೀಲ್ದಾರf ಎನ್.ಶಿವಕುಮಾರ ₹ 5ಲಕ್ಷ ಸಹಾಯಧನದ ಚೆಕ್ ವಿತರಿಸಿದರು.

‘ಮನೆ ನಿರ್ಮಿಸಿಕೊಡಿ’:ಬ್ಯಾಡರಹಳ್ಳಿಯಲ್ಲಿ ಹೆಚ್ಚಾಗಿ ಪರಿಶಿಷ್ಟ ಜಾತಿ, ವರ್ಗ ಅಲ್ಪಸಂಖ್ಯಾತ ಮತ್ತು ಹಿಂದುಳಿದ ಸಮುದಾಯದವರೇ ಇದ್ದು, ವಾಸಿಸಲು ಯೋಗ್ಯ ಮನೆಗಳಿಲ್ಲ. 40 ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿವೆ. ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಬಡವರಿಗೆ ಮನೆ ನಿರ್ಮಿಸಿಕೊಡಲು ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಗ್ರಾಮದ ಷಣ್ಮುಖಪ್ಪ ದೂರಿದ್ದಾರೆ.

ಹೋವಳಿಯ ಅರಳೀಕೆಯಲ್ಲಿ ವೇಣುಗೋಪಾಲ್, ಅರಳೀಕೆರೆ ಪಾಳ್ಯದಲ್ಲಿ ಮಂಜುಳಾ ಮತ್ತು ಕಣಜನಹಳ್ಳಿಯಲ್ಲಿ ಗುರುಸಿದ್ದಮ್ಮ ಎಂಬುವವರ ಮನೆಯ ಗೋಡೆ ಮತ್ತು ಚಾವಣಿ ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.