ADVERTISEMENT

ಹಂದಿ ಗೂಡುಗಳಾಗಿರುವ ಮನೆಗಳು

ಕಾಯಕಲ್ಪಕ್ಕೆ ಕಾಯುತ್ತಿರುವ ಪಲ್ಲಳ್ಳಿ ತಿಮ್ಮಪ್ಪ ಬಡಾವಣೆ; ಬೆಳೆದು ನಿಂತ ಮುಳ್ಳುಗಿಡಗಳು

ಕೊಂಡ್ಲಹಳ್ಳಿ ಜಯಪ್ರಕಾಶ
Published 28 ನವೆಂಬರ್ 2020, 6:20 IST
Last Updated 28 ನವೆಂಬರ್ 2020, 6:20 IST
ಮೊಳಕಾಲ್ಮುರಿನ ಪಲ್ಲಳ್ಳಿ ತಿಮ್ಮಪ್ಪ ಬಡಾವಣೆ ರಸ್ತೆಯೊಂದರ ದುಃಸ್ಥಿತಿ (ಎಡಚಿತ್ರ). ಬಡಾವಣೆಯಲ್ಲಿ ಬಿರುಕು ಬಿಟ್ಟಿರುವ ಮನೆಗಳು
ಮೊಳಕಾಲ್ಮುರಿನ ಪಲ್ಲಳ್ಳಿ ತಿಮ್ಮಪ್ಪ ಬಡಾವಣೆ ರಸ್ತೆಯೊಂದರ ದುಃಸ್ಥಿತಿ (ಎಡಚಿತ್ರ). ಬಡಾವಣೆಯಲ್ಲಿ ಬಿರುಕು ಬಿಟ್ಟಿರುವ ಮನೆಗಳು   

ಮೊಳಕಾಲ್ಮುರು: ಕುಡಿಯಲು ನೀರಿಲ್ಲ. ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ, ಎತ್ತ ನೋಡಿದರೂ ಕಾಣಸಿಗದ ಬೀದಿ ದೀಪಗಳು, ಸೇವೆಯಿಂದ ದೂರವಾಗಿರುವ ವಸತಿ ಯೋಜನೆ ಮನೆಗಳಲ್ಲಿ ಹಂದಿಗಳ ಹಿಂಡು, ರಾತ್ರಿ ವೇಳೆ ಹಾವುಗಳ ಕಾಟ.

- ಇದು ಪಟ್ಟಣದ ರಾಯದುರ್ಗ ರಸ್ತೆಯಲ್ಲಿರುವ ಪಲ್ಲಳ್ಳಿ ತಿಮ್ಮಪ್ಪ ಬಡಾವಣೆಯ ಚಿತ್ರಣ.

15 ವರ್ಷಗಳ ಹಿಂದೆ ಪಟ್ಟಣದಲ್ಲಿ ವಸತಿ ರಹಿತರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಪಟ್ಟಣ ಪಂಚಾಯಿತಿ ಈ ಬಡಾವಣೆಯನ್ನು ನಿರ್ಮಾಣ ಮಾಡಿತು. ಇದಕ್ಕೆ ಪಲ್ಲಳ್ಳಿ ತಿಮ್ಮಪ್ಪ ಎಂಬುವವರು ಸ್ಥಳ ವ್ಯವಸ್ಥೆ ಮಾಡಿದ ಕಾರಣ ಅವರ ಹೆಸರನ್ನು ಬಡಾವಣೆಗೆ ಇಡಲಾಗಿದೆ. ಶಾಸಕ ಎನ್.ವೈ.ಗೋಪಾಲಕೃಷ್ಣ ಅವಧಿಯಲ್ಲಿ ಬಡಾವಣೆ ಲೋಕಾರ್ಪಣೆಯಾಗಿತ್ತು.

ADVERTISEMENT

ಬಡಾವಣೆಯಲ್ಲಿ ಸುಮಾರು 400 ಮನೆಗಳಿವೆ. ಭೂಸೇನಾ ನಿಗಮ ನಿರ್ಮಾಣ ಹೊಣೆ ಹೊತ್ತಿತ್ತು. ತೀರಾ ಬೆರಳೆಣಿಕೆಯಷ್ಟು ಫಲಾನುಭವಿಗಳು ಮಾತ್ರ ಇಲ್ಲಿ ವಾಸ ಮಾಡುತ್ತಿದ್ದಾರೆ. ಪರಿಣಾಮ ಬಹುತೇಕ ಮನೆಗಳು ಖಾಲಿ ಉಳಿದಿಕೊಂಡಿವೆ. ನಿರ್ವಹಣೆ ಇಲ್ಲದಿರುವುದು ಸಹ ಮನೆಗಳು ಹಾಳಾಗಲು, ಬಡಾವಣೆ ವ್ಯರ್ಥವಾಗಲು ಕಾರಣವಾಗಿದೆ ಎಂದು ನಿವಾಸಿ ರಾಮಕ್ಕ ದೂರಿದರು.

ಫಲಾನುಭವಿಗಳ ಆಯ್ಕೆ ಮಾಡುವಾಗ ಸರಿಯಾದ ನಿಯಮ ಪಾಲನೆಯಾಗಿಲ್ಲ. ಕೆಲವರು ಆಂಧ್ರದವರು ಇಲ್ಲಿ ಮನೆಗಳನ್ನು ಪಡೆದಿದ್ದಾರೆ. ಇನ್ನೂ ಕೆಲವರು ಎರಡು, ಮೂರು ಮನೆಗಳನ್ನು
ಒಬ್ಬರೇ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

‘ಮನೆ ವ್ಯರ್ಥವಾಗುತ್ತಿರುವುದನ್ನು ಅರಿತ ಪಟ್ಟಣ ಪಂಚಾಯಿತಿ ಮರು ಸಮೀಕ್ಷೆ, ಮರು ಹಂಚಿಕೆ ಕೆಲಸ ಮಾಡಿತು. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ರಾಜ್ಯ ಹಣಕಾಸು ಯೋಜನೆಗಳಲ್ಲಿ ಬಡಾವಣೆಗೆ ವಿದ್ಯುತ್, ರಸ್ತೆ, ಚರಂಡಿ ವ್ಯವಸ್ಥೆ ಮಾಡಿತು. ಆದರೆ, ಫಲಾನುಭವಿಗಳು ವಾಸ ಮಾಡದ ಕಾರಣ ಬಡಾವಣೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ’ ಎಂದು ಬಡಾವಣೆಯ ಹೊನ್ನೂರಪ್ಪ, ಯಲ್ಲಮ್ಮ ಹೇಳಿದರು.

‘ಇಲ್ಲಿ ಸರ್ಕಾರಿ ಶಾಲೆ, ಅಂಗನವಾಡಿ ವ್ಯವಸ್ಥೆ ಇಲ್ಲ. ಗುಡ್ಡದ ಪಕ್ಕದಲ್ಲಿದ್ದು, ಬಡಾವಣೆಯಲ್ಲಿ ಮುಳ್ಳುಗಂಟಿಗಳು ಬೆಳೆದಿರುವ ಕಾರಣ ವಿಷಜಂತುಗಳ ವಾಸಸ್ಥಳವಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಸರಿಯಿಲ್ಲ. ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಮನವಿ ಸಲ್ಲಿಸಿದಾಗ, ಚುನಾವಣೆ ಸಮಯದಲ್ಲಿ ಪರಿಹರಿಸುವ ಭರವಸೆ ಸಿಗುತ್ತದೆ. ನಂತರ ಕಾರ್ಯರೂಪಕ್ಕೆ ಬರುವುದಿಲ್ಲ’ ಎಂದು ನಿವಾಸಿಗಳು ದೂರುತ್ತಾರೆ.

ಈಚೆಗೆ ಪಟ್ಟಣ ಪಂಚಾಯಿತಿಯಲ್ಲಿ ಹೊಸ ಸದಸ್ಯರು ಅಧಿಕಾರ ವಹಿಸಿಕೊಂಡಿದ್ದು ಇತ್ತ ಗಮನಹರಿಸಿ ಸಮಸ್ಯೆಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.