ಭರಮಸಾಗರ: ಈರುಳ್ಳಿ ಬೆಲೆ ಗಗನಕ್ಕೇರಿದ ಬೆನ್ನಲ್ಲೇ ಎಲ್ಲೆಡೆ ರೈತರು ಈರುಳ್ಳಿ ಬಿತ್ತನೆಗೆ ಮುಂದಾಗಿದ್ದಾರೆ. ಹೊಲ ಹದಗೊಳಿಸಿ ಸಿದ್ಧತೆಯಲ್ಲಿ ತೊಡಗಿರುವ ರೈತರು ಇಳುವರಿ ಹೆಚ್ಚಿಸಲು ಹಾಗೂ ಭೂಮಿಯ ಫಲವತ್ತತೆಗೆ ಕೋಳಿ ಗೊಬ್ಬರ ಹಾಕಲು ಮುಂದಾಗಿದ್ದಾರೆ.
ಇದರಿಂದ ಹೋಬಳಿಯಲ್ಲಿ ಕೋಳಿ ಗೊಬ್ಬರದ ಬೇಡಿಕೆ ಹೆಚ್ಚಾಗಿದೆ.ಈರುಳ್ಳಿ ಬೆಳೆಗೆ ಕೋಳಿ ಗೊಬ್ಬರ ಉತ್ತಮ. ಹೀಗಾಗಿ ರೈತರು ಕೋಳಿ ಗೊಬ್ಬರ ಕೊಂಡೊಯ್ಯಲು ಪೌಲ್ಟ್ರಿಫಾರಂಗಳಿಗೆ ಮುಗಿಬಿದ್ದಿದ್ದಾರೆ.
ಹೊರ ಜಿಲ್ಲೆಯ ರೈತರೂ ಹೋಬಳಿಯ ಸುತ್ತಲಿನ ಪೌಲ್ಟ್ರಿಫಾರಂಗಳ ಮುಂದೆ ಸಾಲು ಸಾಲು ಟ್ರ್ಯಾಕ್ಟರ್ ತಂದು ನಿಲ್ಲಿಸುತ್ತಿದ್ದಾರೆ.
ಸಮೀಪದ ಹುಣಸೇಕಟ್ಟೆ, ಹೆಬ್ಬಾಳು, ಕೊಳಹಾಳು, ಬೀರಾವರ, ಕೆ.ಬಳ್ಳೇಕಟ್ಟೆ, ಆನಗೋಡು, ಹಾಲುವರ್ತಿ ಭಾಗದ ಕೋಳಿ ಫಾರಂಗಳಿಂದ ಗೊಬ್ಬರ ಖರೀದಿ ಸಾಮಾನ್ಯವಾಗಿದೆ. ನಿತ್ಯ ನೂರಾರು ಟನ್ ಕೋಳಿ ಗೊಬ್ಬರ ಜಿಲ್ಲೆಯ ನಾನಾ ಭಾಗಗಳು ಸೇರಿ ಹೊರ ಜಿಲ್ಲೆಗಳಿಗೂ ಸಾಗಾಟವಾಗುತ್ತಿದೆ. ಒಣ ಕೋಳಿ ಗೊಬ್ಬರಕ್ಕೆ ಹೆಚ್ಚು ದರ ನೀಡಿ ರೈತರು ಖರೀದಿಸುತ್ತಿದ್ದಾರೆ.
‘ಕಳೆದ ವರ್ಷ ಒಂದು ಟನ್ ತೂಕದ ಗೊಬ್ಬರಕ್ಕೆ ₹ 1,400 ಇದ್ದ ಬೆಲೆ ಈ ವರ್ಷ ₹ 2,400ಕ್ಕೆ ಏರಿದೆ. ಒಂದು ಟ್ರ್ಯಾಕ್ಟರ್ನಲ್ಲಿ ಆರು ಟನ್ ಕೊಂಡೊಯ್ಯಬಹುದು. ಒಂದು ಟ್ರ್ಯಾಕ್ಟರ್ ಖರ್ಚು ಸೇರಿ ಒಟ್ಟು ₹ 20 ಸಾವಿರ ವೆಚ್ಚ ತಗುಲುತ್ತದೆ’ ಎನ್ನುತ್ತಾರೆ ದೊಡ್ಡ ರಂಗಾಪುರದ ರೈತ ಸತ್ಯಪ್ಪ.
‘ಈರುಳ್ಳಿ ಬೆಳೆ ಬೇಗ ಬೆಳೆಯಲು ಕೋಳಿ ಗೊಬ್ಬರ ಉತ್ತಮ. ಅಲ್ಲದೇ ಈಗ ಕೊಟ್ಟಿಗೆ ಗೊಬ್ಬರ ಸಾಕಷ್ಟು ಸಿಗುತ್ತಿಲ್ಲ. ರಸಗೊಬ್ಬರದ ಅಡ್ಡ ಪರಿಣಾಮದಿಂದ ನಾವೂ ಸೇರಿ ಈ ಭಾಗದ ರೈತರು ಕೋಳಿ ಗೊಬ್ಬರ ಬಳಕೆಗೆ ಮುಂದಾಗಿದ್ದೇವೆ’ ಎಂದು ಕೀರ್ತಪ್ಪ, ಸೌಭಾಗ್ಯಮ್ಮ ಹೇಳಿದರು.
‘ಈ ಗೊಬ್ಬರವನ್ನು ಬೆಳೆಗೆ ಹಾಕಿದರೆ ಬೇಗ ಇಳುವರಿ ಬರುತ್ತದೆ. ತೂಕವೂ ಹೆಚ್ಚು ಬರುತ್ತದೆ. ಒಂದು ಟನ್ ಗೊಬ್ಬರ ಎರಡು ಎಕರೆ ಪ್ರದೇಶಕ್ಕೆ ಸಾಕಾಗುತ್ತದೆ. ಭೂಮಿಯ ಫಲವತ್ತತೆ ಕಾಯ್ದುಕೊಳ್ಳುತ್ತದೆ. ಕೆಲ ವರ್ಷಗಳಿಂದಲೂ ಉತ್ತಮ ಇಳುವರಿ ಪಡೆದಿದ್ದೇವೆ’ ಎನ್ನುತ್ತಾರೆ ರೈತರಾದ ಬೋಗಪ್ಪ, ನಿಂಗಪ್ಪ.
‘ಕೋಳಿ ಗೊಬ್ಬರಕ್ಕಾಗಿ ರೈತರು ಹೆಚ್ಚು ಬೇಡಿಕೆ ಸಲ್ಲಿಸುತ್ತಿದ್ದಾರೆ. ಈ ಬಾರಿ ಕೊರೊನಾ ಕಾರಣ ಕೋಳಿ ಉದ್ಯಮ್ಮಕ್ಕೂ ಬಿಸಿ ತಟ್ಟಿದ್ದು, ಹೆಚ್ಚು ಗೊಬ್ಬರ ಉತ್ಪಾದನೆ ಆಗಲಿಲ್ಲ. ಅಲ್ಲದೇ ರೈತರ ವಾಹನಗಳಿಗೆ ನಾವೇ ಲೋಡ್ ಮಾಡಿಕೊಡಬೇಕಾಗಿದ್ದರಿಂದ ಬೆಲೆ ಹೆಚ್ಚಾಗಿದೆ’ ಎನ್ನುತ್ತಾರೆ ಹೆಬ್ಬಾಳು ಪೌಲ್ಟ್ರಿಫಾರಂ ಮಾಲೀಕ ರಾಜೀವ ರೆಡ್ಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.