ಚಿತ್ರದುರ್ಗ: ದ್ವಿಚಕ್ರ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಕಡ್ಡಾಯಗೊಳಿಸಿ ಸರ್ಕಾರ ರೂಪಿಸಿದ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಮುಂದಾಗಿರುವ ಪೊಲೀಸರು ಮಕ್ಕಳ ಮೊರೆ ಹೋಗಿದ್ದಾರೆ. ಶಾಲಾ–ಕಾಲೇಜು ವಿದ್ಯಾರ್ಥಿಗಳ ಮೂಲಕ ಪೋಷಕರಿಗೆ ‘ಪಾಠ’ ಕಲಿಸುವ ವಿನೂತನ ಅಭಿಯಾನವೊಂದನ್ನು ಆರಂಭಿಸಿದ್ದಾರೆ.
ಜಿಲ್ಲೆಯ ಪ್ರಮುಖ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಹೆಲ್ಮೆಟ್ ಸುರಕ್ಷತೆಯ ಕುರಿತು ಪೊಲೀಸರು ಜಾಗೃತಿ ಮೂಡಿಸಿದ್ದಾರೆ. ಹೆಲ್ಮೆಟ್ ಧರಿಸಲು ಪೋಷಕರ ಮನವೊಲಿಸುವಂತೆ ಮಕ್ಕಳಿಗೆ ತಿಳಿವಳಿಕೆ ನೀಡಿದ್ದಾರೆ. ಮಕ್ಕಳ ಮಾತು ಕೇಳದ ಪೋಷಕರಿಗೆ ದಂಡದ ಬಿಸಿ ಮುಟ್ಟಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.
ನಿತ್ಯ ಬೆಳಿಗ್ಗೆ ಶಾಲೆಗೆ ಮಕ್ಕಳನ್ನು ಬಿಡಲು ಹೆಲ್ಮೆಟ್ ಧರಿಸದೇ ಬರುವವರಿಗೆ ದಂಡದ ಬಿಸಿ ಮುಟ್ಟಿದೆ. ಶಿಕ್ಷಣ ಸಂಸ್ಥೆಯ ಹೊರಗೆ ಕಾಯುವ ಸಂಚಾರ ಪೊಲೀಸರು ದ್ವಿಚಕ್ರ ವಾಹನ ಸವಾರರಿಗೆ ದಂಡ ವಿಧಿಸುತ್ತಿದ್ದಾರೆ. ವಾರದಿಂದ ಆರಂಭವಾಗಿರುವ ಈ ಅಭಿಯಾನ ನಿರೀಕ್ಷೆಗೂ ಮೀರಿದ ಪ್ರತಿಫಲ ನೀಡುತ್ತಿದೆ. ಶಾಲೆಗೆ ಮಕ್ಕಳನ್ನು ಕಳುಹಿಸುವ ಹಾಗೂ ಕರೆದೊಯ್ಯಲು ಬರುವ ಬಹುತೇಕರು ಈಗ ಹೆಲ್ಮೆಟ್ ಧರಿಸುತ್ತಿದ್ದಾರೆ.
‘ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವಂತೆ ಮಾಡಲು ಇದೊಂದು ಹೊಸ ಪ್ರಯೋಗ. ಜಿಲ್ಲೆಯ ಎಲ್ಲ ಭಾಗಗಳಲ್ಲಿ ಏಕಕಾಲಕ್ಕೆ ಇದನ್ನು ಕೈಗೆತ್ತಿಕೊಳ್ಳಲಾಗಿದೆ. ಪೋಷಕರು ಸಂಚಾರ ನಿಯಮ ಪಾಲಿಸಿದರೆ ಮಕ್ಕಳೂ ಪಾಲಿಸುತ್ತಾರೆ. ಎಲ್ಲ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿದರೆ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಕಡಿಮೆಯಾಗಲಿದೆ’ ಎನ್ನುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಕೆ. ಪರಶುರಾಮ್.
ಶಾಲೆ–ಕಾಲೇಜು ಆರಂಭವಾಗುವ ಹಾಗೂ ಬಿಡುವ ಸಂದರ್ಭದಲ್ಲಿ ಸಾಮಾನ್ಯವಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚು. ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಹಾಗೂ ಮನೆಗೆ ಕರೆತರಲು ಪೋಷಕರು ದ್ವಿಚಕ್ರವಾಹನ ಬಳಸುತ್ತಾರೆ. ಹೆಲ್ಮೆಟ್ ಧರಿಸದ ಬೈಕ್ ಸವಾರರು ಪ್ರಾಣ ಕಳೆದುಕೊಂಡ ನಿದರ್ಶನಗಳಿವೆ. ಇದೇ ಕಾರಣಕ್ಕೆ ಪೊಲೀಸರು ಶಿಕ್ಷಣ ಸಂಸ್ಥೆಗಳ ಸಮೀಪ ಹೆಲ್ಮೆಟ್ ಕಡ್ಡಾಯ ನಿಯಮ ಅನುಷ್ಠಾನಗೊಳಿಸುತ್ತಿದ್ದಾರೆ.
ಮೋಟಾರು ವಾಹನ ಕಾಯ್ದೆಯ ಪ್ರಕಾರ ದ್ವಿಚಕ್ರ ವಾಹನ ಸವಾರರು ಐಎಸ್ಐ ಗುರುತಿನ ಹೆಲ್ಮೆಟ್ ಧರಿಸುವುದು ಕಡ್ಡಾಯ. ಈ ಕಾಯ್ದೆಗೆ ಇತ್ತೀಚೆಗೆ ತಿದ್ದುಪಡಿ ತರಲಾಗಿದ್ದು, ದಂಡದ ಮೊತ್ತವನ್ನು ಹೆಚ್ಚಿಸಲಾಗಿದೆ. ಹೆಲ್ಮೆಟ್ ಧರಿಸದವರಿಗೆ ₹ 500 ದಂಡ ವಿಧಿಸಲಾಗುತ್ತಿದೆ. ದಂಡದ ಪ್ರಮಾಣ ಏರಿಕೆಯಾದ ಸಂದರ್ಭದಲ್ಲಿ ಅನೇಕರು ಹೆಲ್ಮೆಟ್ ಖರೀದಿಸಿದರೂ ಧರಿಸಿದ್ದು ಮಾತ್ರ ವಿರಳ.
‘ರಸ್ತೆಯಲ್ಲಿ ಸಂಚರಿಸುವ ವಾಹನಗಳಲ್ಲಿ ದ್ವಿಚಕ್ರ ವಾಹನಗಳೇ ಹೆಚ್ಚು ಅಪಾಯಕ್ಕೆ ಒಳಗಾಗುತ್ತವೆ. ವಾಹನ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುವವರಲ್ಲಿ ದ್ವಿಚಕ್ರ ವಾಹನ ಸವಾರರ ಸಂಖ್ಯೆ ಅಧಿಕ. ತಲೆಗೆ ಬೀಳುವ ಬಲವಾದ ಪೆಟ್ಟಿನಿಂದ ಬಹುತೇಕರು ಬಲಿಯಾಗುತ್ತಿದ್ದಾರೆ. ಗುಣಮಟ್ಟದ ಹೆಲ್ಮೆಟ್ ಧರಿಸಿದರೆ ಪ್ರಾಣಾಪಾಯದಿಂದ ಪಾರಾಗಬಹುದು’ ಎನ್ನುತ್ತಾರೆ ಪರಶುರಾಮ್.
ನಗರ ವ್ಯಾಪ್ತಿಯ ಬಹುತೇಕ ಮಾರ್ಗಗಳು ಸಿಮೆಂಟ್ ರಸ್ತೆಗಳಾಗಿ ಬದಲಾಗಿವೆ. ಆಯತಪ್ಪಿ ಬಿದ್ದರೆ ತಲೆಗೆ ತೀವ್ರಸ್ವರೂಪದ ಗಾಯಗಳಾಗುವುದು ನಿಶ್ಚಿತ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಹೆಲ್ಮೆಟ್ ವಿಚಾರ
ಚರ್ಚೆಗೆ ಬಂದಿದೆ. ಹೆಲ್ಮೆಟ್ ಧರಿಸದ ಸವಾರರಿಗೆ ಗುಲಾಬಿ ಹೂ ನೀಡಿ ಅರಿವು ಮೂಡಿಸುವ ಅಭಿಯಾನವೂ ನಡೆದಿದೆ. ಸ್ವಯಂ ಸೇವಾ ಸಂಸ್ಥೆಗಳು ಹೆಲ್ಮೆಟ್ ಉಚಿತ ಕೊಡುಗೆಯನ್ನು ನೀಡಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿವೆ. ಬೈಕ್ ಸವಾರರು ಜೀವದ ಪ್ರಾಮುಖ್ಯತೆ ಅರಿತಾಗ ಮಾತ್ರ ಹೆಲ್ಮೆಟ್ ಧರಿಸಲು ಸಾಧ್ಯ.
---
ಗ್ರಾಮೀಣರಿಂದ ಪಾಲನೆಯಾಗದ ನಿಯಮ
ರವಿಕುಮಾರ್ ಸಿರಿಗೊಂಡನಹಳ್ಳಿ
ಶ್ರೀರಾಂಪುರ:ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುವುದು ತಪ್ಪು ಎಂಬುದು ಗೊತ್ತಿದ್ದರೂ ಗ್ರಾಮೀಣ ಭಾಗದಲ್ಲಿ ಬಹುತೇಕರು ಇದನ್ನು ಪಾಲಿಸುತ್ತಿಲ್ಲ.ಹೆಲ್ಮೆಟ್ ಕಡ್ಡಾಯದ ನಿಯಮ ಗ್ರಾಮೀಣ ಪ್ರದೇಶದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ.
ತುರ್ತು ಕೆಲಸಕ್ಕೆ ಹೊರಡುವಾಗ, ಹೊಲ, ತೋಟ ಹಾಗೂ ಸಾಮಗ್ರಿಗಳ ಖರೀದಿಗಾಗಿ ನಿತ್ಯ ಬೈಕ್ಗಳಲ್ಲಿ ಓಡಾಡುವ ಜನರು ಹೆಲ್ಮೆಟ್ ಧರಿಸುವಿಕೆಯ ಅನಿವಾರ್ಯತೆಯನ್ನು ಮರೆಯುತ್ತಿದ್ದಾರೆ.
ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸಿ ಅಪಘಾತ ಸಂಭವಿಸಿ ಪ್ರಾಣಕ್ಕೆ ಕುತ್ತು ತಂದುಕೊಂಡಿರುವ ನಿದರ್ಶನಗಳು ಸಾಕಷ್ಟಿವೆ. ಠಾಣೆಯ ಮುಂದೆ ಪೊಲೀಸರು ವಾಹನ ತಪಾಸಣೆಗೆ ನಿಂತಿರುವುದನ್ನು ಕಂಡು ಅನ್ಯಮಾರ್ಗದ ಮೂಲಕ ತಪ್ಪಿಸಿಕೊಂಡು ಹೋಗುವುದು ಸಾಮಾನ್ಯವಾಗಿದೆ.
‘ಕೆಲಸದ ಒತ್ತಡ ಹಾಗೂ ಸಿಬ್ಬಂದಿ ಕೊರತೆಯ ನಡುವೆಯೂ ಹೆಲ್ಮೆಟ್ ಅನಿವಾರ್ಯತೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ.ಹೊಲ, ತೋಟದ ಕೆಲಸಕ್ಕೆ, ರಸಗೊಬ್ಬರ, ಸಾಮಾನು ಖರೀದಿಗೆ ಗ್ರಾಮೀಣ ಪ್ರದೇಶದ ಜನ ಹೆಲ್ಮೆಟ್ ಧರಿಸದೇ ಸಂಚರಿಸುತ್ತಾರೆ. ಯುವಕರು, ವಿದ್ಯಾರ್ಥಿಗಳಿಗೆ ಅರಿವಿದ್ದರೂ ಉದಾಸೀನತೆ ತೋರುತ್ತಾರೆ. ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಲಾಗುವುದು’ ಎನ್ನುತ್ತಾರೆ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಧರಶಾಸ್ತ್ರಿ.
---
ಹೆಲ್ಮೆಟ್ ಧರಿಸದೇ ಬಲಿಯಾದ ಸವಾರರು
ಸುವರ್ಣಾ ಬಸವರಾಜ್
ಹಿರಿಯೂರು:ತಾಲ್ಲೂಕು ವ್ಯಾಪ್ತಿಯಲ್ಲಿ ಮೂರು ತಿಂಗಳ ಅವಧಿಯಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಮೃತಪಟ್ಟ ನಾಲ್ವರು ಸವಾರರು ಹೆಲ್ಮೆಟ್ ಧರಿಸಿರಲಿಲ್ಲ. ಸುರಕ್ಷತಾ ನಿಯಮ ಪಾಲನೆ ಮಾಡಿದ್ದರೆ ಜೀವ ಉಳಿಯುವ ಸಾಧ್ಯತೆ ಇತ್ತು ಎಂಬುದು ಪೊಲೀಸರ ಅಭಿಮತ.
ಏಪ್ರಿಲ್ 1ರಂದು ಬಬ್ಬೂರು ಸಮೀಪ ಬೈಕಿಗೆ ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದ ಹನುಮಂತಪ್ಪ, ಏ.2 ರಂದು ಬೈಪಾಸ್ ರಸ್ತೆಯಲ್ಲಿರುವ ಮಸೀದಿ ಮುಂಭಾಗ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದ ದ್ವಿಚಕ್ರ ವಾಹನ ಸವಾರ, ಹುಚ್ಚವ್ವನಹಳ್ಳಿ ಸಮೀಪ ಜೂನ್ 23ರಂದು ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದ ಮಂಜುನಾಥ್ ಹಾಗೂ ಜೂನ್ 27 ರಂದು ಚನ್ನಮ್ಮನಹಳ್ಳಿ ಸಮೀಪ ಸಂಭವಿಸಿದ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ನವೀನ್ ಎಂಬುವವರು ಹೆಲ್ಮೆಟ್ ಧರಿಸಿರಲಿಲ್ಲ.
‘ಹೆಲ್ಮೆಟ್ ಬಗ್ಗೆ ಒಂದು ವಾರದಿಂದ ಜಾಗೃತಿ ಮೂಡಿಸುತ್ತಿದ್ದೇವೆ. ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುತ್ತಿದ್ದ ನೂರಕ್ಕೂ ಹೆಚ್ಚು ಸವಾರರಿಗೆ ದಂಡ ವಿಧಿಸಿದ್ದೇವೆ. ದಂಡ ವಿಧಿಸಬೇಕೆಂಬುದು ಪೊಲೀಸರ ಉದ್ದೇಶವಲ್ಲ. ಜನರ ಜೀವ ಉಳಿಯಬೇಕು ಎಂಬುದು ಮುಖ್ಯ. ಗ್ರಾಮೀಣ ಭಾಗದಿಂದ ನಗರಕ್ಕೆ ಬರುವ ಬಹಳಷ್ಟು ಸವಾರರು ಹೆಲ್ಮೆಟ್ ಧರಿಸಿರುತ್ತಾರೆ. ನಗರದಲ್ಲಿನ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದನ್ನು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ’ ಎನ್ನುತ್ತಾರೆ ಡಿವೈಎಸ್ಪಿ ರೋಷನ್ ಜಮೀರ್.
---
ಹೆಲ್ಮೆಟ್ ಧರಿಸುವ ಅಭ್ಯಾಸವನ್ನು ಸವಾರರಲ್ಲಿ ರೂಢಿಸಬೇಕಿದೆ. ಅರ್ಧ ಅಥವಾ ಕಳಪೆ ಗುಣಮಟ್ಟದ ಹೆಲ್ಮೆಟ್ ಹಾಕಿದವರಿಗೆ ಐಎಸ್ಐ ಗುರುತಿನ ಹೆಲ್ಮೆಟ್ ಧರಿಸುವಂತೆ ಸೂಚನೆ ನೀಡಲಾಗುತ್ತಿದೆ. ಹೆಲ್ಮೆಟ್ ಧರಿಸದವರಿಗೆ ಮಾತ್ರ ದಂಡ ವಿಧಿಸಲಾಗುತ್ತಿದೆ.
- ಕೆ. ಪರಶುರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಹೆಲ್ಮೆಟ್ ಕಡ್ಡಾಯಗೊಳಿಸುವುದು ಉತ್ತಮ ನಿಯಮ. ಆದರೆ, ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಆಗಾಗ ದಂಡ ವಿಧಿಸುವ ಪೊಲೀಸರು ಬಳಿಕ ಸುಮ್ಮನಾಗದೇ ನಿರಂತರ ನಿಗಾ ಇರಿಸಬೇಕು
- ಪ್ರಕಾಶ್, ಬೈಕ್ ಸವಾರ, ಚಿತ್ರದುರ್ಗ
ದ್ವಿಚಕ್ರ ವಾಹನ ಸವಾರರ ಪ್ರಾಣ ರಕ್ಷಣೆಗಾಗಿ ಸರ್ಕಾರ ನಿಯಮ ರೂಪಿಸಿದೆ. ದಂಡಕ್ಕೆ ಹೆದರಿ ಹೆಲ್ಮೆಟ್ ಹಾಕುವ ಬದಲು ಅಮೂಲ್ಯ ಜೀವ ಉಳಿಸಿಕೊಳ್ಳುವ ಹೊಣೆಗಾರಿಕೆ ಬೆಳೆಸಿಕೊಳ್ಳುವುದು ಉತ್ತಮ.
- ನಾಗರಾಜ್, ಶ್ರೀರಾಂಪುರ
ವರ್ಷದ ಹಿಂದೆ ಬೈಕ್ ಉರುಳಿ ಬಿದ್ದು ತಲೆಗೆ ಪೆಟ್ಟಾಗಿತ್ತು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದೆ. ಅಂದಿನಿಂದ ಹೆಲ್ಮೆಟ್ ಕೈಗೆ ತೆಗೆದುಕೊಂಡು ಬೈಕ್ ಹೊರ ತೆಗೆಯುತ್ತೇನೆ.
- ಎಸ್.ಎಸ್.ರಂಗಪ್ಪ, ವಿ.ವಿ. ಪುರ, ಹಿರಿಯೂರು ತಾಲ್ಲೂಕು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.