ಹಿರಿಯೂರು:ನಗರದ ವೇದಾವತಿ ಬಡಾವಣೆಯಲ್ಲಿರುವ ಉಪ್ಪಾರ ಸಮುದಾಯ ಭವನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಬುಧವಾರ ತಾಲ್ಲೂಕು ಉಪ್ಪಾರ ಸಂಘದ ಪದಾಧಿಕಾರಿಗಳು ನಗರಸಭೆ ಕಚೇರಿ ಎದುರು ಧರಣಿ ನಡೆಸಿದರು.
‘ರಸ್ತೆ ತೆರವುಗೊಳಿಸುವಂತೆ 25 ವರ್ಷದಿಂದ ಹೋರಾಟ ನಡೆಸುತ್ತಿದ್ದೇವೆ. ನಗರಸಭೆ ಅಧಿಕಾರಿಗಳಲ್ಲಿ ಬದ್ಧತೆ ಇಲ್ಲದಿರುವ ಕಾರಣ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಲ್ಲ. ಇಂದು–ನಾಳೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಾ ಬಂದಿದ್ದಾರೆ. ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ರಸ್ತೆ ವ್ಯವಸ್ಥೆ ಮಾಡಿಕೊಡಬೇಕು’ ಎಂದು ಉಪ್ಪಾರ ಸಂಘದ ಮಾಜಿ ಅಧ್ಯಕ್ಷ ಬಿ.ಜಿ.ಪದ್ಮನಾಭ್ ಒತ್ತಾಯಿಸಿದರು.
‘ಸಮುದಾಯ ಭವನಕ್ಕೆ ಹೋಗುವ ರಸ್ತೆ ತೆರವುಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ ಹಾಜರಿರುವಂತೆ ನಗರಸಭೆ ಅಧಿಕಾರಿಗಳು ನಮಗೆ ನೋಟೀಸ್ ನೀಡಿ, ಅವರೇ ಗೈರುಹಾಜರಾಗಿರುವುದು ನಮ್ಮ ಸಮುದಾಯಕ್ಕೆ ಮಾಡಿರುವ ಅವಮಾನ’ ಎಂದು ಸಂಘದ ಉಪಾಧ್ಯಕ್ಷ ಮಸ್ಕಲ್ ವಿ.ಎಲ್. ಗೌಡ ಆರೋಪಿಸಿದರು.
ಪ್ರತಿಭಟನಾನಿರತರ ಜೊತೆ ಮಾತನಾಡಿದ ನಗರಸಭಾಧ್ಯಕ್ಷೆ ಷಂಸುನ್ನಿಸಾ, ‘ಪೌರಾಯುಕ್ತರು ಅನ್ಯಕಾರ್ಯ ನಿಮಿತ್ತ ಕೇಂದ್ರ ಸ್ಥಾನದಲ್ಲಿಲ್ಲ. ಅಧಿಕಾರಿಗಳು ಹಾಗೂ ಉಪ್ಪಾರ ಸಮಾಜದ ಮುಖಂಡರ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇನೆ’ ಎಂದು ಭರವಸೆ ನೀಡಿದ್ದರಿಂದ ಧರಣಿ ಅಂತ್ಯಗೊಳಿಸಲಾಯಿತು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಆಲೂರು ರಾಮಣ್ಣ, ಕಾರ್ಯದರ್ಶಿ ಹಳದಪ್ಪ, ಯುವ ಘಟಕದ ಅಧ್ಯಕ್ಷ ನಿಂಗರಾಜ್, ಟ್ರಸ್ಟ್ ಅಧ್ಯಕ್ಷ ಶೇಖರಪ್ಪ, ಕಾರ್ಯದರ್ಶಿ ರಾಜಣ್ಣ, ನಿವೃತ್ತ ಡಿವೈಎಸ್ಪಿ ನಾಗರಾಜ್, ಅಜ್ಜಪ್ಪ, ನಾಗರಾಜ್, ಓಂಕಾರ್, ಮಲ್ಲಿಕಾರ್ಜುನ, ಕಂಠಪ್ಪ, ವೀರಣ್ಣ, ಬಸವರಾಜ್, ಕರಿಯಲ್ಲಪ್ಪ, ಶ್ರೀನಿವಾಸ್, ಕರಿಯಣ್ಣ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.