ಚಿತ್ರದುರ್ಗ: ತಾಲ್ಲೂಕಿನಲ್ಲಿ ಗುರುವಾರ ಮತ್ತು ಶುಕ್ರವಾರ ಸುರಿದ ಮಳೆಯಿಂದಾಗಿ ಮನೆಗಳ ಗೋಡೆ ಕುಸಿದು ಹಾನಿಗೆ ಒಳಗಾಗಿದ್ದ ಇಂಗಳದಾಳ್, ಜೆ.ಎನ್.ಕೋಟೆ, ನರೇನಹಾಳ್ ಗ್ರಾಮಕ್ಕೆ ಶನಿವಾರ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು. ತೊಂದರೆಗೆ ಒಳಗಾದವರಿಗೆ ಸಾಂತ್ವನ ಹೇಳಿದರು.
ಮಳೆಯಿಂದಾಗಿ ಜೆ.ಎನ್.ಕೋಟೆ ಗ್ರಾಮದಲ್ಲಿ 26 ಮನೆ, ನರೇನಹಾಳ್ನಲ್ಲಿ 7, ಕಳ್ಳಿರಪ್ಪದಲ್ಲಿ 3 ಮನೆ, ಇಂಗಳದಾಳ್ ಗ್ರಾಮದಲ್ಲಿ 15, ದೊಡ್ಡಸಿದ್ದವ್ವನಹಳ್ಳಿ 10, ಕ್ಯಾದಿಗೆರೆ 7 ಸೇರಿ ಕೆಲವೆಡೆ ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ.
ಕೆಲವು ಸಂಪೂರ್ಣ ಕುಸಿದಿವೆ. ಈ ಕುರಿತು ಅಧಿಕಾರಿಗಳ ಜತೆ ಪರಿಶೀಲನೆ ನಡೆಸಿದರು.
‘ಜಿಲ್ಲೆಯಲ್ಲಿ ಮನೆಗಳ ಗೋಡೆ ಕುಸಿತದಿಂದಾಗಿ ಆರು ಜನ ಮೃತಪಟ್ಟಿದ್ದಾರೆ. ಆದ್ದರಿಂದ ಮಳೆಯಾದ ವೇಳೆ ಯಾರು ಕೂಡ ಶಿಥಿಲಾವಸ್ಥೆಯಲ್ಲಿ ಇರುವ ಮನೆಗಳಲ್ಲಿ ಇರಬೇಡಿ’ ಎಂದು ತಿಪ್ಪಾರೆಡ್ಡಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.
‘ತೊಂದರೆಗೆ ಒಳಗಾಗಿ ವಾಸಕ್ಕೆ ಪರದಾಡುತ್ತಿರುವ ಕುಟುಂಬಗಳಿಗೆ ಶಾಲೆ, ಸಮುದಾಯ ಭವನ, ದೇಗುಲಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ತಾತ್ಕಾಲಿಕವಾಗಿ ಪರಿಹಾರ ಕೂಡ ನೀಡಲಾಗುವುದು. ಯಾವುದೇ ಸಮಸ್ಯೆ ಉಂಟಾದರೂ ಗಮನಕ್ಕೆ ತನ್ನಿ’ ಎಂದು ತಿಳಿಸಿದರು.
ದೇವರ ಆಶೀರ್ವಾದದಿಂದ ಸದ್ಯ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಿಯೂ ಜೀವ ಹಾನಿ ಘಟನೆ ನಡೆದಿಲ್ಲ. ಹಾಗಂತ ಮೈಮರೆಯುವಂತಿಲ್ಲ. ಜನರು ಸಾಧ್ಯವಾದಷ್ಟು ಎಚ್ಚರಿಕೆಯಿಂದ ಇರಬೇಕು. ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ನೀಡಿದ ನಂತರ ಸೂಕ್ತ ಪರಿಹಾರ ಸಿಗಲಿದೆ ಎಂದರು.
ಇದೇ ವೇಳೆ ತೊಂದರೆ ಒಳಗಾದ ಕುಟುಂಬಗಳಿಗೆ ಆಹಾರ ಸಾಮಗ್ರಿ ಕಿಟ್ ವಿತರಿಸಲಾಯಿತು. ಕಂದಾಯ ನಿರೀಕ್ಷಕ ಶರಣಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.