ಚಿತ್ರದುರ್ಗ: ಮುರುಘಾ ಮಠದ ಆಡಳಿತಾಧಿಕಾರಿ ಬಸವರಾಜನ್ ಹಾಗೂ ಅವರ ಪತ್ನಿ ಸೌಭಾಗ್ಯ ವಿರುದ್ಧ ದಾಖಲಾಗಿರುವ ಲೈಂಗಿಕ ಕಿರುಕುಳ ಹಾಗೂ ಅಪಹರಣ ಪ್ರಕರಣದ ತನಿಖೆಯನ್ನು ಪೊಲೀಸರು ಮಂಗಳವಾರ ಕೈಗೆತ್ತಿಕೊಂಡಿದ್ದಾರೆ.
ದೂರುದಾರ ಮಹಿಳೆ ಕಣ್ಮರೆಯಾಗಿರುವ ಕಾರಣಕ್ಕೆ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳುವುದು ವಿಳಂಬವಾಗಿದೆ. ಅಪಹರಣಕ್ಕೆ ಒಳಗಾಗಿರುವ ಮಕ್ಕಳ ಹೇಳಿಕೆಯನ್ನು ತನಿಖಾ ತಂಡ ದಾಖಲು ಮಾಡಿಕೊಂಡಿತು.
ಮಕ್ಕಳು ಆಶ್ರಯ ಪಡೆದಿರುವ ಬಾಲಕಿಯರ ಸರ್ಕಾರಿ ಬಾಲಮಂದಿರಕ್ಕೆ ತನಿಖಾ ತಂಡ ಮಂಗಳವಾರ ಬೆಳಿಗ್ಗೆ ಭೇಟಿ ನೀಡಿತು. ಅಪಹರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಕೇಳಿ ಮಕ್ಕಳಿಂದ ಮಾಹಿತಿ ಪಡೆಯಿತು.
ಮಠದ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯರಿಬ್ಬರು ವೈಯಕ್ತಿಕ ಕಾರಣ ನೀಡಿ ಜುಲೈ 24ರಂದು ಹಾಸ್ಟೆಲ್ನಿಂದ ಹೊರ ಬಂದಿದ್ದರು. ಬಳಿಕ ಅವರು ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆ ತಲುಪಿದ್ದರು. ಠಾಣೆಯಿಂದ ಮಕ್ಕಳನ್ನು ಕರೆತಂದ ಬಸವರಾಜನ್ ಹಾಗೂ ಸೌಭಾಗ್ಯ ಅವರು ವಸತಿನಿಲಯಕ್ಕೆ ಒಪ್ಪಿಸದೇ ತಮ್ಮ ಮನೆಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದರು ಎಂದು ಹಾಸ್ಟೆಲ್ ವಾರ್ಡನ್ ದೂರು ದಾಖಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.