
ಹೊಸದುರ್ಗ: ‘ಆರ್ಎಸ್ಎಸ್ ಎಂದಿಗೂ ಪ್ರಚಾರ ಪಡೆಯುವುದಿಲ್ಲ. 100 ವರ್ಷಗಳಿಂದಲೂ ಕೆಲಸ ಮಾಡುತ್ತಾ ಬಂದಿದೆಯೋ ಹೊರತು, ಪ್ರಚಾರದ ಹಿಂದೆ ಬಿದ್ದಿಲ್ಲ. ದೇಶದ ಪ್ರತಿ ಹಳ್ಳಿ ಹಾಗೂ ಪ್ರತಿ ಮನೆಯನ್ನು ತಲುಪುವುದೇ ಸಂಘದ ಉದ್ದೇಶವಾಗಿದೆ’ ಎಂದು ಆರ್ಎಸ್ಎಸ್ ದಕ್ಷಿಣ ಮಧ್ಯ ಕ್ಷೇತ್ರ ಸಂಯೋಜಕ ಜಗದೀಶ್ ಕಾರಂತ್ ಅಭಿಪ್ರಾಯಪಟ್ಟರು.
ಹಿಂದೂ ಸಂಗಮ ಆಯೋಜನಾ ಸಮಿತಿಯಿಂದ ಪಟ್ಟಣದಲ್ಲಿ ಸೋಮವಾರ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಆರ್ಎಸ್ಎಸ್ ಚಟುವಟಿಕೆಗಳು ಎಂದಿಗೂ ಗುಪ್ತವಾಗಿ ನಡೆದಿಲ್ಲ. ಮತೀಯ ನೆಲೆಯಲ್ಲಿ ಗುರುತಿಸಿಕೊಳ್ಳದೇ, ರಾಷ್ಟ್ರೀಯತೆಯಲ್ಲಿ ಗುರುತಿಸಿಕೊಂಡಿದೆ. ರಾಷ್ಟ್ರವಾದವೇ ಹಿಂದೂವಾದ, ಜಗತ್ತು ಭಾರತವನ್ನು ಹಿಂದೂಸ್ತಾನ್ ಎಂದು ಗುರುತಿಸುತ್ತಿದೆ’ ಎಂದರು.
ಆರ್ಎಸ್ಎಸ್ನ ಜಿಲ್ಲಾ ಕಾರ್ಯವೇದಿಕಾ ಕುಸುಮಾ ದೇಸಾಯಿ ಮಾತನಾಡಿ, ‘ಪ್ರತಿಯೊಂದು ಮನೆಯೂ ಆದರ್ಶ ಹಿಂದೂ ಮನೆಯಾಗಬೇಕು. ನೀರಿನ ಮಿತ ಬಳಕೆ, ವಿದ್ಯುತ್ ಶಕ್ತಿ, ಮನೆಗೊಂದು ಕೈತೋಟವಿರಲಿ’ ಎಂದು ಹೇಳಿದರು.
ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ಕೆ.ಎಸ್. ಕಲ್ಮಠ್ ಮಾತನಾಡಿ, ‘ಹಿಂದುತ್ವ ಪ್ರದರ್ಶನವಾಗದೇ ವ್ರತ ಆಗಬೇಕು. ಮಹಿಳೆಯರನ್ನು ಪೂಜಿಸಿ, ಗೌರವಿಸುವ ಕಾರ್ಯವಾಗಬೇಕು’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮುಖಂಡ ಎಸ್. ಲಿಂಗಮೂರ್ತಿ, ಸಮಿತಿ ಅಧ್ಯಕ್ಷ ಕೆ.ಎಸ್.ಕಲ್ಮಠ, ಉಪಾಧ್ಯಕ್ಷ ತುಂಬಿನಕೆರೆ ಬಸವರಾಜ್, ಕಾರ್ಯದರ್ಶಿ ವಾಸುದೇವ, ಸಹ ಕಾರ್ಯದರ್ಶಿ ಆಕಾಶಸ್ವಾಮಿ, ಮುಖಂಡರಾದ ಅಣ್ಣಪ್ಪ, ಪಂಪ, ಸಿಂಧು ಅಶೋಕ್, ಪ್ರದೀಪ್ ಡಿ.ಎಸ್, ಜಗದೀಶ್ ರಾಮಯ್ಯ ಹಾಗೂ ಇನ್ನಿತರರಿದ್ದರು ಭಾಗವಹಿಸಿದ್ದರು.
ಹಿಂದೂ ಸಂಗಮ ಶೋಭಾಯಾತ್ರೆ
ಪಟ್ಟಣದ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಮಾರುತಿ ಗುರುಪೀಠದ ವಿಜಯ ಮಾರುತಿ ಶರ್ಮಾ ಸ್ವಾಮೀಜಿ ಹಿಂದೂ ಸಂಗಮ ಶೋಭಾಯಾತ್ರೆಗೆ ಚಾಲನೆ ನೀಡಿದರು. ಮದಕರಿ ವೃತ್ತ ದುರ್ಗಾಂಬಿಕಾ ದೇವಿ ದೇವಾಲಯ ಗಣೇಶ ದೇವಸ್ಥಾನ ಗಾಂಧಿ ವೃತ್ತದಿಂದ ಮುಖ್ಯರಸ್ತೆಯ ಮೂಲಕ ಸಾಗಿ ಟಿ.ಬಿ. ವೃತ್ತದಿಂದ ಪ್ರಥಮ ಶೆಟ್ಟಿ ಬಡಾವಣೆಗೆ ತಲುಪಿತು. ಯಾತ್ರೆಯಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ಕೇಸರಿ ಧ್ವಜಗಳನ್ನಿಡಿದು ಹೆಜ್ಜೆ ಹಾಕಿದರು. ವೀರಗಾಸೆ ಡೊಳ್ಳು ಕುಣಿತ ಚಂಡಮದ್ದಳೆ ತಮಟೆ ಡೋಲು ಹಾಗೂ ಇನ್ನಿತರ ಕಲಾತಂಡಗಳು ಮೇಳೈಸಿದವು. ರಾಮ ಹನುಮಂತ ಕೃಷ್ಣ ಒನಕೆ ಓಬವ್ವ ವೇಷ ಧರಿಸಿದ್ದ ಮಹಿಳೆಯರು ವಿಶೇಷ ಗಮನ ಸೆಳೆದರು.