ಚಿಕ್ಕಜಾಜೂರು: ಸಮೀಪದ ಹಿರೇಎಮ್ಮಿಗನೂರು ಗ್ರಾಮ ದೇವರು ಕಲ್ಲೇಶ್ವರ ಹಾಗೂ ಆಂಜನೇಯಸ್ವಾಮಿಯ ರಥೋತ್ಸವ ಶನಿವಾರ ಶ್ರದ್ಧಾ, ಭಕ್ತಿಯಿಂದ ನೆರವೇರಿತು.
ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಕಲ್ಲೇಶ್ವರ ಹಾಗೂ ಆಂಜನೇಯಸ್ವಾಮಿ ಮೂರ್ತಿಗೆ ವಿಶೇಷ ಪೂಜೆ, ಅರ್ಚನೆಗಳು ನಡೆದವು. ಸಂಜೆ ಕಲ್ಲೇಶ್ವರ ಹಾಗೂ ಆಂಜನೇಯಸ್ವಾಮಿಗಳ ಉತ್ಸವಮೂರ್ತಿಗಳನ್ನು ಪ್ರತ್ಯೇಕ ಪಲ್ಲಕ್ಕಿಗಳಲ್ಲಿ ಕೂರಿಸಿ, ವೀರಗಾಸೆ, ನಂದಿ ಕೋಲು, ಡೊಳ್ಳು ಕುಣಿತ, ಮದ್ದಳೆ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.
ಅಲಂಕೃತ ರಥದಲ್ಲಿ ಉತ್ಸವಮೂರ್ತಿ ಕೂರಿಸಿ ದೊಡ್ಡೆಡೆ ಸೇವೆ ನೆರವೇರಿಸಲಾಯಿತು. ಭಕ್ತರು ರಥದ ಚಕ್ರಗಳಿಗೆ ತೆಂಗಿನ ಕಾಯಿ ಒಡೆದು ಭಕ್ತಿ ಸಮರ್ಪಿಸಿದರು.
ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಎಸ್.ಎಸ್. ಗಣೇಶ್, ಎಸ್.ಎಸ್. ಬಕ್ಕೇಶ್ ಹಾಗೂ ಅವರ ಕುಟುಂಬ ವರ್ಗದವರು ಕಲ್ಲೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಶಾಮನೂರು ಶಿವಶಂಕರಪ್ಪ ಅವರ ಪುತ್ರರು ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು. ಮಾಜಿ ಸಚಿವ ಎಚ್. ಆಂಜನೇಯ ಪೂಜೆ ಸಲ್ಲಿಸಿದರು.
ಜಿಲ್ಲೆ ಹಾಗೂ ದಾವಣಗೆರೆ ಜಿಲ್ಲೆಯ ಭಕ್ತರು ಭಾಗವಹಿಸಿದ್ದರು. ರಾತ್ರಿ ಸ್ವಾಮಿಗೆ ಓಕುಳಿ ನಡೆಸಿ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.