ಹೊಳಲ್ಕೆರೆ: ತಾಲ್ಲೂಕಿನ ಕಣಿವೆಹಳ್ಳಿ ಕೆರೆಗೆ ನಿರ್ಮಿಸಿರುವ ಕೋಡಿ ಸಮೀಪ ಮಣ್ಣು ಕೊರೆದಿದ್ದು, ಭದ್ರಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರಾಮಗಿರಿ ಹೋಬಳಿ ಕಣಿವೆಹಳ್ಳಿ ಗ್ರಾಮದ ಕೆರೆಗೆ ₹ 1 ಕೋಟಿ ವೆಚ್ಚದಲ್ಲಿ ಹೊಸ ಏರಿ ನಿರ್ಮಾಣ ಮಾಡಲಾಗಿದೆ. ಈಚೆಗೆ ಸುರಿದ ಚಿತ್ತಾ ಮಳೆಗೆ ಈ ಕೆರೆ ತುಂಬಿದ್ದು, ಕೋಡಿ ಬಿದ್ದಿದೆ. ಕೋಡಿಯ ನೀರು ರಭಸವಾಗಿ ಹರಿದಿದ್ದರಿಂದ ಕೋಡಿ ಕೆಳಗೆ ಮಣ್ಣು ಕುಸಿದು ಕಂದಕವಾಗಿದೆ. ಕಣಿವೆಹಳ್ಳಿ ಗುಡ್ಡದಿಂದ ಈ ಕೆರೆಗೆ ನೀರು ಬರಲಿದ್ದು, ಹೆಚ್ಚು ಮಳೆ ಬಂದರೆ ಒಮ್ಮೆಲೆ ನೀರಿನ ಹರಿವು ಹೆಚ್ಚಾಗಿ ಕೋಡಿ ಕುಸಿಯುವ ಆತಂಕ ಇದೆ. ಕೋಡಿ ಕುಸಿದರೆ ಕೆರೆಯ ನೀರೆಲ್ಲ ಹೊರಗೆ ಹೋಗುವ ಅಪಾಯವೂ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಗುತ್ತಿಗೆದಾರರು ಕೋಡಿ ಸಮೀಪ ನೀರು ಹರಿಯುವ ಜಾಗದಲ್ಲಿ ಕಲ್ಲು ಕಟ್ಟಿ ಕಾಂಕ್ರೀಟ್ ಹಾಕಬೇಕು. ಆಗ ಮಣ್ಣು ಕೊರೆಯುವುದು ನಿಂತು ಏರಿ ಕೊಚ್ಚಿ ಹೋಗುವುದು ತಪ್ಪುತ್ತದೆ. ಗುಡ್ಡದಿಂದ ಕೆರೆಗೆ ಬರುವ ರಾಜಕಾಲುವೆ ಹತ್ತಿರ ಅರ್ಧ ರಸ್ತೆ ಕೊಚ್ಚಿ ಹೋಗಿದೆ. ಅಲ್ಲಿಗೆ ತಕ್ಷಣ ಮಣ್ಣು ಹೊಡೆದು ಹೊಲಗಳಿಗೆ ಹೋಗಲು ದಾರಿ ಮಾಡಿ ಕೊಡಬೇಕು ಎಂದು ಕಣಿವೆಹಳ್ಳಿ ಗ್ರಾಮದ ಆನಂದಸ್ವಾಮಿ, ಮಹೇಶ್ವರಪ್ಪ, ಕೆಂಚಾಪುರದ ರಘು, ಕೆ.ಎನ್.ಅಜಯ್, ನಾಗರಾಜು, ಉಮೇಶ್, ಸಂತೋಷ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.