ADVERTISEMENT

ಹೊಸದುರ್ಗ: ಮಾಡದಕೆರೆ–ಗುಂಡಿಹಳ್ಳ ಬ್ರಿಡ್ಜ್‌ ಕಂ ಬ್ಯಾರೇಜ್‌ ಸಂಚಾರಕ್ಕೆ ಮುಕ್ತ

₹ 1.50 ಕೋಟಿ ವೆಚ್ಚದ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 4:34 IST
Last Updated 8 ಜೂನ್ 2021, 4:34 IST
ಹೊಸದುರ್ಗ ತಾಲ್ಲೂಕಿನ ಗುಂಡಿಹಳ್ಳಕ್ಕೆ ನಿರ್ಮಿಸಿರುವ ಬ್ಯಾರೇಜ್‌ ಕಂ ಬ್ರಿಡ್ಜ್‌ ಸಂಚಾರಕ್ಕೆ ಮುಕ್ತವಾಗಿದೆ
ಹೊಸದುರ್ಗ ತಾಲ್ಲೂಕಿನ ಗುಂಡಿಹಳ್ಳಕ್ಕೆ ನಿರ್ಮಿಸಿರುವ ಬ್ಯಾರೇಜ್‌ ಕಂ ಬ್ರಿಡ್ಜ್‌ ಸಂಚಾರಕ್ಕೆ ಮುಕ್ತವಾಗಿದೆ   

ಹೊಸದುರ್ಗ: ತಾಲ್ಲೂಕಿನ ಮಾಡದಕೆರೆ ಗುಂಡಿಹಳ್ಳಕ್ಕೆ ನಿರ್ಮಿಸಿರುವ ಬ್ರಿಡ್ಜ್‌ ಕಂ ಬ್ಯಾರೇಜ್‌ ಸಂಚಾರಕ್ಕೆ ಮುಕ್ತವಾಗಿದೆ.

ಈ ಭಾಗದಲ್ಲಿ ಬಿರುಸಿನ ಮಳೆ ಬಂದಾಗ ಈ ಹಳ್ಳದಲ್ಲಿ ಸಾಕಷ್ಟು ನೀರು ಹರಿಯುತ್ತಿರುವಾಗ ಈ ಮಾರ್ಗದಲ್ಲಿ ಬರುವ ಮಾಡದಕೆರೆ, ಕೆಂಕೆರೆ, ಶೀರನಕಟ್ಟೆ ಗ್ರಾಮದ ರೈತರು ಜಮೀನುಗಳಿಗೆ ಹೋಗಲು ತೊಂದರೆಯಾಗುತ್ತಿತ್ತು. ಈ ಬಗ್ಗೆ ರೈತರು ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಅವರಿಗೆ ಮನವಿ ಸಲ್ಲಿಸಿದ್ದರು.

ಶಾಸಕರು₹1.50 ಕೋಟಿ ವೆಚ್ಚದಲ್ಲಿ ಗುಂಡಿಹಳ್ಳಕ್ಕೆ ಬ್ರಿಡ್ಜ್‌ ಕಂ ಬ್ಯಾರೇಜ್‌ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿದ್ದರು. ಕಾಮಗಾರಿ ಪೂರ್ಣಗೊಂಡಿದ್ದು, ಈ ಭಾಗದ ರೈತರು ಜಮೀನಿಗೆ ಹಾಗೂ ಲಕ್ಕಿಗಣಿ ಗುಡ್ಡಕ್ಕೆ ಹೋಗಲು ಸಹಕಾರಿಯಾಗಿದೆ.

ADVERTISEMENT

ಗುಂಡಿಹಳ್ಳದ ಬ್ಯಾರೇಜ್‌ನಲ್ಲಿ 8 ಅಡಿ ಆಳದವರೆಗೂ ನೀರು ನಿಲ್ಲುತ್ತಿರುವುದರಿಂದ ಈ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಿದೆ. ಇದರಿಂದ ಮಾಡದಕೆರೆ, ಕೆಂಕೆರೆ, ಮಲ್ಲಾಪುರ, ಗಡಿಯಪ್ಪನಹಟ್ಟಿ, ರಾಮಜ್ಜನಹಳ್ಳಿ, ಪೂಜಾರಹಟ್ಟಿ, ಬಂಟನಗವಿ ಗ್ರಾಮಗಳ ಹಲವು ರೈತರ ಕೊಳವೆಬಾವಿಗಳಿಗೆ ನೆರವಾಗಿದೆ. ಈ ಭಾಗದ ತೆಂಗು, ಅಡಿಕೆ ಹಾಗೂ ಬಾಳೆ ತೋಟಗಳಿಗೆ ಜೀವಕಳೆ ಬಂದಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

‘ತಾಲ್ಲೂಕಿನಲ್ಲಿ ಹಲವು ಚೆಕ್‌ಡ್ಯಾಂ ಹಾಗೂ ಬ್ರಿಡ್ಜ್‌ ಕಂ ಬ್ಯಾರೇಜ್‌ ನಿರ್ಮಿಸಲಾಗಿದೆ. ಹಾಳಾಗಿದ್ದ ಕೆಲವು ಕೆರೆಕಟ್ಟೆ, ಚೆಕ್‌ಡ್ಯಾಂ, ಬ್ಯಾರೇಜ್‌ಗಳನ್ನು ದುರಸ್ತಿ ಮಾಡಿಸಲಾಗಿದೆ. ತಾಲ್ಲೂಕಿನ ಶ್ರೀರಾಂಪುರ, ಮತ್ತೋಡು, ಮಾಡದಕೆರೆ ಹೋಬಳಿಯ ಹಲವು ಗ್ರಾಮಗಳ ಜನರ ಅನುಕೂಲಕ್ಕಾಗಿ₹ 2.50 ಕೋಟಿ ವೆಚ್ಚದಲ್ಲಿಸಿರಿಗೊಂಡನಹಳ್ಳಿ ಸಮೀಪ ನಿರ್ಮಿಸುತ್ತಿರುವ ಬ್ರಿಡ್ಜ್‌ ಕಂ ಬ್ಯಾರೇಜ್‌ ಕಾಮಗಾರಿಯನ್ನು 3 ತಿಂಗಳೊಳಗೆ ಪೂರ್ಣಗೊಳಿಸಲಾಗುವುದು’ ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.