ADVERTISEMENT

ಕಾರೇಹಳ್ಳಿ ಆಂಜನೇಯ ಸ್ವಾಮಿ ದೇಗುಲ: ಮಹಾದ್ವಾರ ಉದ್ಘಾಟನೆ, ಕಳಸಾರೋಹಣ ಇಂದು

ಕಾರೇಹಳ್ಳಿ ಆಂಜನೇಯ ಸ್ವಾಮಿ ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 6:30 IST
Last Updated 22 ಜನವರಿ 2026, 6:30 IST
<div class="paragraphs"><p>ಕಾರೇಹಳ್ಳಿಯಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿ ಮೂರ್ತಿ&nbsp;ಹೊಸದುರ್ಗದ ಮತ್ತೋಡು ಹೋಬಳಿಯ ಕಾರೇಹಳ್ಳಿ ಗ್ರಾಮದಲ್ಲಿ ನೂತನವಾಗಿ ಅತ್ಯಾಕರ್ಷಕವಾಗಿ ನಿರ್ಮಿಸಿರುವ ಮಹಾದ್ವಾರ</p></div>

ಕಾರೇಹಳ್ಳಿಯಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿ ಮೂರ್ತಿ ಹೊಸದುರ್ಗದ ಮತ್ತೋಡು ಹೋಬಳಿಯ ಕಾರೇಹಳ್ಳಿ ಗ್ರಾಮದಲ್ಲಿ ನೂತನವಾಗಿ ಅತ್ಯಾಕರ್ಷಕವಾಗಿ ನಿರ್ಮಿಸಿರುವ ಮಹಾದ್ವಾರ

   

ಹೊಸದುರ್ಗ: ತಾಲ್ಲೂಕಿನ ಮತ್ತೋಡು ಹೋಬಳಿ ವ್ಯಾಪ್ತಿಯ ಕಾರೇಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶಕ್ತಿ ದೈವ ಆಂಜನೇಯ ಸ್ವಾಮಿ ದೇಗುಲಕ್ಕೆ ನೂತನ ಮಹಾದ್ವಾರ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಜ. 22ರಂದು ಗುರುವಾರ ಕಳಸಾರೋಹಣ ನೆರವೇರಲಿದೆ.

71 ಅಡಿ ಎತ್ತರದ ಮಹಾದ್ವಾರ, 35 ಅಡಿ ಎತ್ತರದ ಬೃಹತ್ ಆಂಜನೇಯ ಮೂರ್ತಿಯನ್ನು ನಿರ್ಮಿಸಲಾಗಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬೃಹತ್ ಮೂರ್ತಿಯಾಗಿದೆ. ಅಂದಾಜು ₹ 1 ಕೋಟಿಗೂ ಅಧಿಕ ವೆಚ್ಚದಲ್ಲಿ ಗೋಪುರ ಹಾಗೂ ಎರಡು ದ್ವಾರಗಳನ್ನು ನಿರ್ಮಿಸಲಾಗಿದೆ.

ADVERTISEMENT

ಗ್ರಾಮದ ಪ್ರಮುಖ ಬೀದಿಗಳಲ್ಲಿ ಆಕರ್ಷಕ ವಿದ್ಯುತ್ ದೀಪಾಲಂಕಾರ, ಅಲ್ಲಲ್ಲಿ ಸ್ವಾಗತ ಕೋರುವ ಫ್ಲೆಕ್ಸ್‌ಗಳು, ಕೇಸರಿ ವಸ್ತ್ರಾಲಂಕಾರ ಹಾಗೂ ತಳಿರು ತೋರಣಗಳಿಂದ ದೇವಾಲಯವನ್ನು ಸಿಂಗರಿಸಲಾಗಿದೆ. ಮಹಾದ್ವಾರದ ಕಳಸಾರೋಹಣಕ್ಕೆ ಸಿದ್ಧತಾ ಕಾರ್ಯ ಬಿರುಸಿನಿಂದ ಸಾಗಿದೆ.

ಮಹಾದ್ವಾರದ ಅಂದ ಹೆಚ್ಚಿಸಲು ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಗೋಪುರ ಸೇರಿ ದೇವಾಲಯವನ್ನು ಸುಣ್ಣ ಬಣ್ಣ ಬಳಿದು ಸಿಂಗರಿಸಲಾಗಿದೆ. ಮಹಾದ್ವಾರವು ಮುಖ್ಯರಸ್ತೆಯ ಪಕ್ಕದಲ್ಲಿಯೇ ಇದ್ದು, ದಾರಿಹೋಕರ ಚಿತ್ತವನ್ನು ಸೆಳೆಯುತ್ತಿದೆ. ಭಕ್ತರ ದೇಣಿಗೆ ಹಾಗೂ ದೇವಾಲಯದ ಅನುದಾನದಿಂದ ಇದನ್ನು ನಿರ್ಮಿಸಲಾಗಿದೆ.

‘ಹಿಂದಿನ ಕಾಲದಲ್ಲಿ ದನ–ಕರುಗಳನ್ನು ಮೇಯಿಸಲು ಜನರು ಬರುತ್ತಿದ್ದರು. ಅಲ್ಲಿ ಕಾರೇಗಿಡದ ಮಧ್ಯದಲ್ಲಿ ಒಂದು ಹಸು ನಿತ್ಯ ಹಾಲು ಕರೆಯುತ್ತಿತ್ತು. ಅಲ್ಲಿ ಉದ್ಭವಗೊಂಡ ಮೂರ್ತಿಯೇ ಆಂಜನೇಯ ಸ್ವಾಮಿ. ಆಗ ಕುರಿಗಾಹಿಗಳು ಒಂದು ಸಣ್ಣ ಗರ್ಭಗುಡಿಯನ್ನು ನಿರ್ಮಿಸಿ ಪ್ರಾರ್ಥಿಸಿದರು. ಸ್ವಾಮಿಯ ಮೂರ್ತಿ ಗರ್ಭಗುಡಿಯಲ್ಲಿ ನೆಲೆಸಿದೆ. ಕಷ್ಟ ಎಂದು ಬಂದವರನ್ನು ಪೊರೆಯುವ ಸ್ವಾಮಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರಿದ್ದಾರೆ. ಆಂಜನೇಯ ಸ್ವಾಮಿ ಭಕ್ತರ ಬಾಯಲ್ಲಿ ಕಾರೇಹಳ್ಳಿಯ ಭೀಮ ಎಂದೇ ಪ್ರಸಿದ್ಧಿ ಪಡೆದಿದ್ದಾನೆ’ ಎಂದು ಗ್ರಾಮಸ್ಥ ರಮೇಶ್ ಪಿ.ಕೆ. ಹೇಳಿದರು.

ಬುಧವಾರ ದೀಪಾರಾಧನೆ, ದೇವತಾ ಪ್ರಾರ್ಥನೆ, ಮಹಾಗಣಪತಿ ಪೂಜೆ, ಗಂಗಾಪೂಜೆ, ರಕ್ಷಾಬಂಧನ, ಅಗ್ನಿ ಪ್ರತಿಷ್ಠಾಪನೆ, ಅಷ್ಟದಿಗ್ಬಂಧನ, ನವಗ್ರಹ ಕಳಶ ಸ್ಥಾಪನೆ, ಕಳಸಕ್ಕೆ ಜಲಾಧಿವಾಸ, ವಸ್ತ್ರಾಧಿವಾಸ, ಕ್ಷೀರಾಧಿವಾಸ, ಧಾನ್ಯಾಧಿವಾಸ, ರತ್ನಾಧಿವಾಸ, ಪುಷ್ಪಾದಿವಾಸ, ನಿತ್ಯ ಕಲಶ ಸ್ಥಾಪನೆ, ಕ್ಷಯಾದಿವಾಸ ನಡೆದವು.

ಗುರುವಾರ ಮತ್ತೋಡಿನ ಶೇಷಣ್ಣ ಭಟ್ಟ ಹಾಗೂ ಶ್ರೀರಾಂಪುರದ ನರಸಿಂಹಮೂರ್ತಿ ಭಟ್ಟರ ನೇತೃತ್ವದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಗಂಗಾಪೂಜೆ, ಗುರುಪೂಜೆ, ಗೋಪೂಜೆ ನಡೆಯಲಿದೆ. ಬೆಳಿಗ್ಗೆ 6 ಗಂಟೆಗೆ ಹೋಮ ನಡೆಯಲಿದೆ. ಗವಿರಂಗಾಪುರ ಗ್ರಾಮದಲ್ಲಿ ದೇವರಾಜ್ ಕೊಂಡುಕಾರ್ ಅವರು ಮಹಾದ್ವಾರದ ಕಳಸಾರೋಹಣ ನೆರವೇರಿಸುವರು. ಮಧ್ಯಾಹ್ನ 12ರಿಂದ ಧಾರ್ಮಿಕ ಸಮಾರಂಭ ನಡೆಯಲಿದೆ.

ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಕೆಲ್ಲೋಡು ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ, ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ, ಬೆಲಗೂರಿನ ಮಾರುತಿ ಗುರುಪೀಠದ ವಿಜಯ ಮಾರುತಿ ಶರ್ಮಾ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಕಾರೇಹಳ್ಳಿ ದೊಡ್ಡಮಠದ ಎಸ್. ಶೇಖರಯ್ಯ ಒಡೆಯರ್, ಕೆ. ಶೇಖರಯ್ಯ ಒಡೆಯರ್, ಅರ್ಚಕ ಪಿ.ಸಿ. ಹನುಮಂತಪ್ಪ ಭಾಗವಹಿಸುವರು.

ಪ್ರತಿ ಅಮಾವಾಸ್ಯೆಯಂದು ವಿಶೇಷ ಪೂಜೆ ಇರುತ್ತದೆ. ದಸರಾ ಮಹೋತ್ಸವ, ದೀಪಾವಳಿ, ಓಕುಳಿ ಮಹೋತ್ಸವ, ಹನುಮ ಜಯಂತಿಯಂದು ಬೆಳ್ಳಿರಥದ ಉತ್ಸವ ಹಾಗೂ ರಾತ್ರಿಯಿಡೀ ಅಖಂಡ ಭಜನಾ ಕಾರ್ಯಕ್ರಮ ನಡೆಯುತ್ತದೆ.

‌ಭಕ್ತರಿಗೆ ದಾಸೋಹ

ಬುಧವಾರ ಸಂಜೆ ವಿವಿಧೆಡೆಯಿಂದ 12 ದೇವರುಗಳನ್ನು ಕರೆ ತರಲಾಯಿತು. ರಾತ್ರಿ ಹೋಮ ಹವನ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಭಕ್ತರಿಗೆ ಗುರುವಾರ ನಿರಂತರ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.