
ಹಿರಿಯೂರು: ಪ್ರತಿ ಕ್ವಿಂಟಲ್ಗೆ ₹2,400ರಂತೆ ರೈತರಿಂದ ಮೆಕ್ಕೆಜೋಳ ಖರೀದಿಸಲು ಕೆಎಂಎಫ್ ತಿರ್ಮಾನಿಸಿದ್ದು, ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಿಮುಲ್ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ಮನವಿ ಮಾಡಿದರು.
ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಸಹಕಾರ ಸಂಘದವರು ತಮ್ಮ ವ್ಯಾಪ್ತಿಯ ರೈತರಿಗೆ ಮೆಕ್ಕೆಜೋಳ ಖರೀದಿ ಕುರಿತು ತಿಳಿಸಬೇಕು. ಮೆಕ್ಕೆಜೋಳದ ತೇವಾಂಶ ಕಡ್ಡಾಯವಾಗಿ 14 ಡಿಗ್ರಿ ಇರುವಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬ ರೈತರಿಂದ ಗರಿಷ್ಠ 25 ಟನ್ ಮಾತ್ರ ಖರೀದಿಸಲಾಗುತ್ತದೆ. ಸಂಘಗಳ ಸಿಬ್ಬಂದಿ ಮೆಕ್ಕೆಜೋಳವನ್ನು ಮೊದಲು ಪರೀಕ್ಷಿಸಿ ತಾಲ್ಲೂಕಿನ ಗುಬ್ಬಿ ಪಶು ಆಹಾರ ಘಟಕಕ್ಕೆ ಕಳುಹಿಸಿಕೊಡಬೇಕು ಎಂದು ಅವರು ಸೂಚಿಸಿದರು.
ಕೃಷಿ ಇಲಾಖೆ, ಇ-ಗವರ್ನೆನ್ಸ್ ಮತ್ತು ಎನ್ಐಸಿ ಮೂಲಕ ರೈತರು ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಮಧ್ಯವರ್ತಿಗಳಿಗೆ ಅವಕಾಶ ಇಲ್ಲ. ಹಾಲು ಉತ್ಪಾದಕ ರೈತರಷ್ಟೇ ಅಲ್ಲದೆ ಇತರ ರೈತರೂ ಮಾರಾಟ ಮಾಡಬಹುದು ಎಂದು ತಿಳಿಸಿದರು.
ಸಹಾಯಕ ವ್ಯವಸ್ಥಾಪಕ ನಿರ್ದೇಶಕ ಎಂ. ಪುಟ್ಟರಾಜು, ವಿಸ್ತರಣಾಧಿಕಾರಿ ಕೃಷ್ಣಕುಮಾರ್, ಪಶುವೈದ್ಯ ಡಾ. ಧೀರಜ್ ಪ್ರಕಾಶ್, ಮಂಜುನಾಥ್, ನಿರಂಜನಮೂರ್ತಿ, ಸುರೇಶ್ ಬಾಬು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.