ADVERTISEMENT

ಚಿತ್ರದುರ್ಗ: ಕಲ್ಲುಕುಟಿಕರಿಗೆ ಫ್ಲೋರೈಡ್‌ ನೀರೇ ಗತಿ; ಹೆಚ್ಚಿದ ಅನಾರೋಗ್ಯ

ಎಂ.ಎನ್.ಯೋಗೇಶ್‌
Published 29 ಜುಲೈ 2024, 7:22 IST
Last Updated 29 ಜುಲೈ 2024, 7:22 IST
ಚಿಕ್ಕಜಾಜೂರು ಸಮೀಪದ ದಾಸರಹಳ್ಳಿ ಗ್ರಾಮದ ಗುಡಿಸಲುಗಳು ಮಳೆ ನೀರು ನುಗ್ಗುವ ಭೀತಿ ಎದುರಿಸುತ್ತಿರುವುದು
ಚಿಕ್ಕಜಾಜೂರು ಸಮೀಪದ ದಾಸರಹಳ್ಳಿ ಗ್ರಾಮದ ಗುಡಿಸಲುಗಳು ಮಳೆ ನೀರು ನುಗ್ಗುವ ಭೀತಿ ಎದುರಿಸುತ್ತಿರುವುದು   

ಚಿತ್ರದುರ್ಗ: ರಟ್ಟೆಯಲ್ಲಿರುವ ಬಲವನ್ನೇ ನಂಬಿ ಬದುಕುತ್ತಿರುವ ಇಲ್ಲಿಯ ಕಲ್ಲುಕುಟಿಕರಿಗೆ ಫ್ಲೋರೈಡ್‌ಯುಕ್ತ ಕುಡಿಯುವ ನೀರು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಂದಿಟ್ಟಿದೆ. ಜೊತೆಗೆ ಮೂಲಸೌಲಭ್ಯಗಳಿಂದ ವಂಚಿತವಾಗಿರುವ ಈ ಜನರು ನಾಗರಿಕ ಸಮಾಜದಿಂದ ದೂರ ಉಳಿದ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.

ಹೊಳಲ್ಕೆರೆ ತಾಲ್ಲೂಕು, ಬಿ.ದುರ್ಗ ಹೋಬಳಿ, ಚಿಕ್ಕಜಾಜೂರಿನಿಂದ 9 ಕಿ.ಮೀ. ದೂರದಲ್ಲಿರುವ ದಾಸರಹಳ್ಳಿ ಗ್ರಾಮದ ಜನರು ಇಲ್ಲಗಳ ನಡುವೆಯೇ ಜೀವನ ಸಾಗಿಸುತ್ತಿದ್ದಾರೆ. ಕುಡಿಯಲು ಶುದ್ಧ ನೀರಿಲ್ಲ, ಗುಡಿಸಲುಗಳಿಗೆ ಹಕ್ಕುಪತ್ರ ಇಲ್ಲ, ಬೆಳಕಿಗೆ ವಿದ್ಯುಚ್ಛಕ್ತಿ ಸೌಲಭ್ಯವಿಲ್ಲ, ಓಡಾಡಲು ಬಸ್‌ ಇಲ್ಲ, ಎಸ್‌ಎಸ್‌ಎಲ್‌ಸಿಯಿಂದ ಹೆಚ್ಚು ಓದಿದವರು ಇಡೀ ಗ್ರಾಮದಲ್ಲಿ ಯಾರೂ ಸಿಗುವುದಿಲ್ಲ.

ಚಿಕ್ಕಜಾಜೂರು, ಕಡೂರು, ನಂದಿಹಳ್ಳಿ ನಂತರ ಬರುವ ದಾಸರಹಳ್ಳಿ ಗುಡ್ಡಗಳ ಸಾಲು. ಅರಣ್ಯ ಪ್ರದೇಶದ ನಡುವೆ ಬರುತ್ತದೆ. ಅತ್ತ ದಾವಣಗೆರೆಯೂ ಅಲ್ಲದ ಇತ್ತ ಚಿತ್ರದುರ್ಗ ಜಿಲ್ಲೆಯೂ ಅಲ್ಲದ ಗಡಿಗ್ರಾಮವಿದು. ಶುದ್ಧ ಕುಡಿಯುವ ನೀರಿಗೆ 2–3 ಕಿ.ಮೀ ತೆರಳಬೇಕಾದ ಪರಿಸ್ಥಿತಿ ಇದ್ದು, ಜನರು ಫ್ಲೋರೈಡ್‌ ನೀರನ್ನೇ ಕುಡಿಯುತ್ತಿದ್ದಾರೆ. ಹಿರೇಹೊಮ್ಮಿಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಾಮಕ್ಕೆ ಕೊಳವೆಬಾವಿಯಿಂದ ನೀರು ಪೂರೈಸಲಾಗುತ್ತಿದೆ. ಆದರೆ ನೀರಿನಲ್ಲಿ ಫ್ಲೋರೈಡ್‌ ಅಂಶ ಹೆಚ್ಚಾಗಿದ್ದು ಗ್ರಾಮಸ್ಥರು ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

ADVERTISEMENT

ನಾಲ್ಕೈದು ವರ್ಷಗಳ ಹಿಂದೆಯೇ ಇಲ್ಲಿಯ ನೀರಿನ ಗುಣಮಟ್ಟ ಪರಿಶೀಲಿಸಲಾಗಿದ್ದು, ಫ್ಲೋರೈಡ್‌ ಅಂಶ ಹೆಚ್ಚಾಗಿದೆ ಎಂಬುದು ಪತ್ತೆಯಾಗಿದೆ. ಜೊತೆಗೆ ಕ್ಯಾನ್ಸರ್‌ಕಾರಕ ಯುರೇನಿಯಂ ಅಂಶವೂ ಇದ್ದು, ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬ ಮಾಹಿತಿ ಇದೆ. ಆದರೂ ಜನರು ಇದೇ ನೀರು ಸೇವನೆ ಮಾಡುತ್ತಿದ್ದಾರೆ. ಗ್ರಾಮದ ಬಹುತೇಕ ಜನರ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿದ್ದು, ಫ್ಲೋರೈಡ್‌ ನೀರಿನ ಪರಿಣಾಮ ಎದುರಿಸುತ್ತಿದ್ದಾರೆ.

ಕಲ್ಲು ಒಡೆದು ಹೊಟ್ಟೆ ತುಂಬಿಸಿಕೊಳ್ಳುವ ಈ ಜನರಿಗೆ ರಟ್ಟೆಯ ಬಲವೇ ಆಧಾರ. ಆದರೆ ಅನಾರೋಗ್ಯ ಇವರ ಬಲವನ್ನು ಕಸಿದುಕೊಳ್ಳುತ್ತಿದ್ದು, ಗ್ರಾಮಸ್ಥರು ಕಂಗಾಲಾಗಿದ್ದಾರೆ. ಕೀಲುಗಳ ನೋವು ಇಲ್ಲಿಯ ಯುವಕರು ಹಾಗೂ ಮಹಿಳೆಯರನ್ನು ಕಾಡುತ್ತಿದೆ. ಮೊಣಕಾಲು ನೋವು, ಮೈಕೈನೋವು, ಜ್ವರ ಆಗಾಗ ಕಾಣಿಸಿಕೊಳ್ಳುತ್ತಿದೆ. ಕೆಲವರ ಕೈಕಾಲುಗಳಲ್ಲಿ ಗಂಟುಗಳು ಕಾಣಿಸಿಕೊಳ್ಳುತ್ತಿದ್ದು, ಜನರು ಆತಂಕಗೊಂಡಿದ್ದಾರೆ.

ಜನರ ಆರೋಗ್ಯ ದೃಷ್ಟಿಯಿಂದ ಕಡೇಪಕ್ಷ ಒಂದು ಶುದ್ಧ ನೀರಿನ ಘಟಕವನ್ನಾದರೂ ಸ್ಥಾಪನೆ ಮಾಡಬೇಕು ಎಂದು ಇಲ್ಲಿಯ ಜನರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಗ್ರಾಮಕ್ಕೆ ಆರ್‌.ಒ ಘಟಕ ಬಂದಿಲ್ಲ. ದಾಸರಹಳ್ಳಿ ಮಾತ್ರವಲ್ಲದೇ ಸಮೀಪದ ಕಡೂರು, ನಂದಿಹಳ್ಳಿ, ಕಸ್ತೂರಬಾ ನಗರ ಬಡಾವಣೆಗಳಲ್ಲಿಯೂ ಫ್ಲೋರೈಡ್‌ ನೀರಿನ ಸಮಸ್ಯೆ ಇದೆ.

ಆದರೆ, ಬೇರೆ ಹಳ್ಳಿಗಳಲ್ಲಿ ಆರ್‌.ಒ ಘಟಕ ಇರುವ ಕಾರಣ ಅಲ್ಲಿಯ ಜನರಿಗೆ ಶುದ್ಧ ನೀರು ದೊರೆಯುತ್ತಿದೆ. ಆದರೆ ದಾಸರಹಳ್ಳಿಯಲ್ಲಿ ಆರ್‌ಒ ಘಟಕ ಇಲ್ಲದ ಕಾರಣ ಫ್ಲೋರೈಡ್‌ಯುಕ್ತ ಕೊಳವೆಬಾವಿ ನೀರನ್ನೇ ಕುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ವರ್ಷಗಳಿಂದ ಇಲ್ಲಿಯ ಜನರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆರ್‌.ಒ ಘಟಕ ಮಂಜೂರು ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಆದರೆ ಇಲ್ಲಿವರೆಗೂ ಅದು ಸಾಕಾರಗೊಂಡಿಲ್ಲ.

ಕಾಡುಗಲ್ಲೇ ಬದುಕಿಗೆ ಆಸರೆ:

ಸಮೀಪದ ಕಾಡಿನಲ್ಲಿ ದೊರೆಯುವ ಕಲ್ಲುಗಳನ್ನು ತರುವ ಇಲ್ಲಿಯ ಜನರು ಸೈಜುಗಲ್ಲು, ಜಲ್ಲಿಗಳನ್ನು ಒಡೆಯುತ್ತಾರೆ. ಸೈಜು, ಜಲ್ಲಿಯ ಅವಶ್ಯಕತೆ ಇರುವವರು ಗ್ರಾಮಕ್ಕೆ ಬಂದು ಖರೀದಿ ಮಾಡಿಕೊಂಡು ತೆರಳುತ್ತಾರೆ. ಇಲ್ಲಿಯ ಜನರಿಗೆ ಕಲ್ಲು ಒಡೆಯುವುದೇ ಪ್ರಮುಖ ಆಧಾರ. ಸಮೀಪದಲ್ಲೇ ಜಲ್ಲಿ ಕ್ರಷರ್‌ಗಳು ಇದ್ದರೂ ದಾಸರಹಳ್ಳಿ ಜನರು ಕುಲಕಸುಬಿಗೆ ಮಾರುಹೋಗಿ ಇನ್ನೂ ಕೈಕುಳಿ ಮಾಡಿಕೊಂಡೇ ಜೀವನ ಸಾಗಿಸುತ್ತಿದ್ದಾರೆ.

ಗ್ರಾಮದಲ್ಲಿ 85 ಮನೆಗಳಿದ್ದು, 30ಕ್ಕೂ ಹೆಚ್ಚು ಮನೆಗಳು ತೆಂಗಿನಗರಿಯ ಗುಡಿಸಲುಗಳಾಗಿವೆ. ಕೆಲವು ಮನೆಗಳು ಗ್ರಾಮಠಾಣ ವ್ಯಾಪ್ತಿಯಲ್ಲೂ ಇಲ್ಲ. ಹೀಗಾಗಿ ವಸತಿ ಯೋಜನೆ ಸೇರಿದಂತೆ ಇತರ ಸರ್ಕಾರಿ ಸೌಲಭ್ಯಗಳು ದೊರೆಯುತ್ತಿಲ್ಲ. ಜೊತೆಗೆ ಕೆಲವು ಮನೆಗಳು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತಿದ್ದು, ಅವರು ಮನೆ ಕಟ್ಟಿಕೊಳ್ಳಲು ಅನುಮತಿ ದೊರೆಯುತ್ತಿಲ್ಲ. ಮನೆ ಕಟ್ಟಿಕೊಂಡರೆ ಯಾವಾಗ ಅಧಿಕಾರಿಗಳು ಬಂದು ತೆರವುಗೊಳಿಸುತ್ತಾರೋ ಎಂಬ ಭಯ ಕಾಡುತ್ತಿರುವ ಕಾರಣ ಇಲ್ಲಿಯ ಜನರು ಗುಡಿಸಲುಗಳಲ್ಲೇ ವಾಸಿಸುವ ಪರಿಸ್ಥಿತಿ ಇದೆ.

ಮನೆಗಳಿಗೆ ಹಕ್ಕುಪತ್ರಗಳ ಸಮಸ್ಯೆಯಿಂದಾಗಿ ಬಹುತೇಕ ಜನರಿಗೆ ಪಡಿತರ ಚೀಟಿಯನ್ನೂ ವಿತರಿಸಿಲ್ಲ. ಹೀಗಾಗಿ ಅನ್ನಭಾಗ್ಯ ಸೇರಿದಂತೆ ಸರ್ಕಾರದಿಂದ ದೊರೆಯವ ಸೌಲಭ್ಯಗಳೂ ದೊರೆಯದಾಗಿದೆ.

‘ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಮ್ಮ ಊರು ತೀರಾ ಹಿಂದುಳಿದಿದೆ. ನಮಗೆ ವಸತಿ ಯೋಜನೆಗಳಲ್ಲಿ ಹೆಚ್ಚು ಮನೆ ನಿರ್ಮಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಕೇಳಿಕೊಂಡರೂ ಗ್ರಾಮ ಪಂಚಾಯಿತಿ ಅಧಿಕಾರಿಗಳೂ ನಮಗೆ ಯಾವುದೇ ಸೌಲಭ್ಯ ನೀಡುತ್ತಿಲ್ಲ’ ಗ್ರಾಮಸ್ಥರು ನೋವು ತೋಡಿಕೊಳ್ಳುತ್ತಾರೆ.

ಗ್ರಾಮದ ಸಮಸ್ಯೆ ಹೇಳಿಕೊಳ್ಳುತ್ತಿರುವ ಮಹಿಳೆ
ನೀರು ಪರೀಕ್ಷೆಯಲ್ಲಿ ಫ್ಲೋರೈಡ್‌ ಅಂಶ ಪತ್ತೆ ಶುದ್ಧ ನೀರು ಘಟಕ ಸ್ಥಾಪನೆಗೆ ಗ್ರಾಮಸ್ಥರ ಒತ್ತಾಯ ದಾಸರಹಳ್ಳಿಯಲ್ಲಿ ಕನಿಷ್ಠ ಸೌಲಭ್ಯಗಳೂ ಇಲ್ಲ
ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಶುದ್ಧ ನೀರು ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳುತ್ತೇವೆ. ಗ್ರಾ.ಪಂ ಸಭೆ ನಡೆಸಿ ದಾಸರಹಳ್ಳಿಗೆ ಮೂಲ ಸೌಲಭ್ಯ ಒದಗಿಸಲಾಗುವುದು.
ಫಾತಿಮಾ ಬೀಬಿ ತಹಶೀಲ್ದಾರ್‌ ಹೊಳಲ್ಕೆರೆ
ಫ್ಲೋರೈಡ್‌ಯುಕ್ತ ನೀರು ಸೇವನೆಯಿಂದ ಗ್ರಾಮದಲ್ಲಿ ದಿನೇ ದಿನೇ ಅನಾರೋಗ್ಯ ಸಮಸ್ಯೆ ಹೆಚ್ಚುತ್ತಿದೆ. ಕಲ್ಲು ಒಡೆದು ಬದುಕುವವರ ಬಲಕ್ಕೆ ಪೆಟ್ಟು ಬಿದ್ದರೆ ಏನು ಗತಿ ಎಂಬ ಪ್ರಶ್ನೆ ಕಾಡುತ್ತಿದೆ.
ಆರ್‌.ವಿಜಯ್‌ ಗ್ರಾಮ ಪಂಚಾಯಿತಿ ಸದಸ್ಯ
‘ಡೀಸೆಲ್‌ ಬತ್ತಿ’ಯ ಅವಲಂಬನೆ
ದಾಸರಹಳ್ಳಿ ಗ್ರಾಮದ ಗುಡಿಸಲುಗಳು ವಿದ್ಯುಚ್ಛಕ್ತಿಯಿಂದ ವಂಚಿತಗೊಂಡಿವೆ. ಬಹುತೇಕ ಮನೆಗಳಿಗೆ ಹಕ್ಕುಪತ್ರಗಳಿಲ್ಲದ ಕಾರಣ ವಿದ್ಯುತ್‌ ಸಂಪರ್ಕ ಒದಗಿಸಲು ಸಾಧ್ಯವಾಗಿಲ್ಲ. ಜನರು ಡೀಸೆಲ್‌ ತಂದು ಹಣತೆ (ಡೀಸೆಲ್‌ ಬತ್ತಿ) ಮಾಡಿಕೊಂಡು ಬೆಳಕು ಪಡೆಯುತ್ತಿದ್ದಾರೆ. ಮಂದ ಬೆಳಕಿನ ಕಾರಣಕ್ಕೆ ಹಲವರ ಕಣ್ಣುಗಳು ಮಂಜಾಗಿವೆ. ‘ಮೊದಲೆಲ್ಲಾ ಸೀಮೆಎಣ್ಣೆ ತಂದು ಹಣೆತೆಯಿಂದ ಬೆಳಕು ಪಡೆಯುತ್ತಿದ್ದೆವು. ಈಗ ಎಲ್ಲೂ ಸೀಮೆಎಣ್ಣೆ ಸಿಗುತ್ತಿಲ್ಲ ಹೀಗಾಗಿ ಡೀಸೆಲ್‌ ಹಣತೆಯೇ ನಮಗೆ ಬೆಳಕಿನ ಆಧಾರವಾಗಿದೆ. ಡೀಸೆಲ್‌ ಬೆಲೆ ಹೆಚ್ಚಿರುವ ಕಾರಣ ನಮ್ಮ ದುಡಿಮೆಯ ಬಹುಪಾಲು ಡೀಸೆಲ್‌ಗಾಗಿ ವ್ಯಯವಾಗುತ್ತಿದೆ‘ ಎನ್ನುತ್ತಾರೆ ಗ್ರಾಮದ ಮಂಜುಳಮ್ಮ.
ಗುಳೇ ಹೋಗುವ ಜನರು
ಅರಣ್ಯ ಪ್ರದೇಶಗಳಲ್ಲಿ ಕಲ್ಲುಗಳನ್ನು ತರಲು ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಕುಲಕಸುಬು ಮಾಡುವುದಕ್ಕೂ ಹಲವು ತಡೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ದಾಸರಹಳ್ಳಿ ಗ್ರಾಮದ ಜನರು ಉದ್ಯೋಗ ಅರಸಿ ನಗರ ಪಟ್ಟಣ ಪ್ರದೇಶಗಳಿಗೆ ಗುಳೇ ಹೋಗುತ್ತಿದ್ದಾರೆ. ಪಾಲಕರು ಗುಳೇ ಹೋಗುವ ಕಾರಣ ಮಕ್ಕಳು ಸರಿಯಾಗಿ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗುತ್ತಿಲ್ಲ. ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆಯಿದ್ದು 28 ವಿದ್ಯಾರ್ಥಿಗಳು ಇದ್ದಾರೆ. ಬಹುತೇಕ ಮಕ್ಕಳು ಅರ್ಧಕ್ಕೆ ಶಾಲೆ ತ್ಯಜಿಸುತ್ತಿದ್ದು ವಿದ್ಯಾಭ್ಯಾಸದಿಂದಲೂ ವಂಚಿತರಾಗುತ್ತಿದ್ದಾರೆ. 5ನೇ ತರಗತಿಯಿಂದ ಮಕ್ಕಳು ಬೇರೆ ಊರುಗಳಿಗೆ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಓದುವವರ ಸಂಖ್ಯೆ ಕುಸಿಯುತ್ತಿದೆ.
ಕಾಡುತ್ತಿದೆ ಬೆಂಕಿಯ ಭಯ
ದಾಸರಹಳ್ಳಿಯಲ್ಲಿ ಗುಡಿಸಲುಗಳು ಹೆಚ್ಚಿನ ಸಂಖ್ಯೆಯಲ್ಲಿರುವರ ಕಾರಣ ಬೆಂಕಿ ಅನಾಹುತದ ಭಯ ಜನರನ್ನು ಸದಾ ಕಾಡುತ್ತದೆ. ಬೇಸಿಗೆ ಅವಧಿಯಲ್ಲಿ ಬೆಂಕಿಯಿಂದ ಹಲವು ಗುಡಿಸಲುಗಳು ಸುಟ್ಟು ಹೋದ ಉದಾಹರಣೆಗಳಿವೆ. ಹೀಗಾಗಿ ಜನರು ಡೀಸೆಲ್‌ ಬತ್ತಿಯನ್ನು ಬಹಳ ಎಚ್ಚರಿಕೆಯಿಂದ ಬಳಸುವ ಅನಿವಾರ್ಯತೆ ಇದೆ. ಮಳೆಗಾಲದಲ್ಲೂ ಗ್ರಾಮಸ್ಥರು ನೆಮ್ಮದಿಯಿಂದ ಬದುಕುವ ಪರಿಸ್ಥಿತಿ ಇಲ್ಲ. ಗುಡಿಸಲುಗಳು ಇಳಿಜಾರಿನ ಜಾಗದಲ್ಲಿದ್ದು ಮಳೆ ನೀರು ಒಳಗೆ ನುಗ್ಗಿ ಬರುತ್ತದೆ. ಮಳೆಗಾಲ ಮಳೆ ನೀರು ನುಗ್ಗುವ ಭಯದಲ್ಲಿ ಬದುಕಿದರೆ ಬೇಸಿಗೆಕಾಲದಲ್ಲಿ ಬೆಂಕಿಯ ಭಯದಿಂದಲೇ ಬದುಕುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.