ADVERTISEMENT

ಹಿರಿಯೂರು | ಮುಕ್ಕಾಲು ಮಾರು ದೂರಕ್ಕೆ ತುಂಡಾದ ಸರಪಳಿ; ಮಳೆ–ಬೆಳೆ ಉತ್ತಮ

ಹಿರಿಯೂರಿನಲ್ಲಿ ಮೈಲಾರಲಿಂಗೇಶ್ವರಸ್ವಾಮಿ ಸರಪಳಿ ಪವಾಡ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 6:53 IST
Last Updated 4 ಅಕ್ಟೋಬರ್ 2025, 6:53 IST
ಹಿರಿಯೂರಿನಲ್ಲಿ ಶುಕ್ರವಾರ ರಾತ್ರಿ ನಡೆದ ಏಳುಕೋಟಿ ಮೈಲಾರಲಿಂಗೇಶ್ವರಸ್ವಾಮಿ ದೇವರ ‘ಸರಪಳಿ ಪವಾಡ’ ಕಾರ್ಯಕ್ರಮದಲ್ಲಿ ಹಾಲುಮತದ ಮೂರು ಮನೆತನದವರು ಸರಪಳಿ ಎಳೆದರು
ಹಿರಿಯೂರಿನಲ್ಲಿ ಶುಕ್ರವಾರ ರಾತ್ರಿ ನಡೆದ ಏಳುಕೋಟಿ ಮೈಲಾರಲಿಂಗೇಶ್ವರಸ್ವಾಮಿ ದೇವರ ‘ಸರಪಳಿ ಪವಾಡ’ ಕಾರ್ಯಕ್ರಮದಲ್ಲಿ ಹಾಲುಮತದ ಮೂರು ಮನೆತನದವರು ಸರಪಳಿ ಎಳೆದರು   

ಹಿರಿಯೂರು: ಇಲ್ಲಿನ ಏಳುಕೋಟಿ ಮೈಲಾರ ಲಿಂಗೇಶ್ವರ ಸ್ವಾಮಿ ಸರಪಳಿ ಪವಾಡ ಸಂಜೆ 5.30ಕ್ಕೆ ತಹಶೀಲ್ದಾರ್ ಸಿದ್ದೇಶ್ ಪೂಜೆ ಸಲ್ಲಿಸುವ ಮೂಲಕ  ಆರಂಭಗೊಂಡಿತು.

ಸರಪಳಿ ಪವಾಡ ಪಾರಂಪರಿಕವಾಗಿ ನಡೆದು ಬಂದಿದ್ದು, ಹಾಲುಮತದ ಮೂರು ಮನೆತನದವರಾದ ಭಂಡಾರದವರು, ಗಣಾಚಾರರು ಹಾಗೂ ಸೊಪ್ಪಿನವರು ಸ್ವಾಮಿಯ ಸರಪಳಿ ಪವಾಡ ಹಾಗೂ ಇತರೆ ಧಾರ್ಮಿಕ ವಿಧಿಗಳನ್ನು ನಡೆಸಿಕೊಟ್ಟರು. ಈ ಬಾರಿ ಸರಪಳಿಯನ್ನು ಪೂಜಿಸಿ ಎಳೆಯಲು ಆರಂಭಿಸಿದ ನಾಲ್ಕುವರೆ ಗಂಟೆಯ ನಂತರ ಸುಮಾರು 15 ಮೀಟರ್ ಉದ್ದದ ಸರಪಳಿಯು ಮುಕ್ಕಾಲು ಮೀಟರ್ (ಮೂರು ಅಡಿ) ಅಂತರದಲ್ಲಿ ಹರೀಶ್‌ ಎನ್ನುವವರಿಂದ ತುಂಡಾಯಿತು.

ವಿವಿಧ ಜಾತಿ, ಧರ್ಮ ಹಾಗೂ ಕಸುಬಿಗೆ ಸೇರಿದ ಭಕ್ತ ಸಮುದಾಯ ಸ್ವಾಮಿಗೆ ಹರಕೆ ತೀರಿಸಿದರು. ಹಾಲುಮತದ ಮನೆತನದವರು ಶರನ್ನವರಾತ್ರಿಯ ಒಂಬತ್ತು ದಿನಗಳ ಕಾಲ ಕಟ್ಟುನಿಟ್ಟಾದ ನಿಯಮ ಪಾಲನೆ ಮಾಡಿ, ಸರಪಳಿ ಪವಾಡದ ದಿನ ಮನೆ ಮಂದಿಯೆಲ್ಲ ಉಪವಾಸವಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಮುಜರಾಯಿ ಅಧಿಕಾರಿಗಳು ಪೂಜೆ ಸಲ್ಲಿಸಿದ ನಂತರ, ದೇವಸ್ಧಾನದ ಮುಂಭಾಗದ ತ್ರಿಶೂಲ ಮುದ್ರೆ ಹೊಂದಿರುವ ಕಲ್ಲಿನ ಕಂಬಕ್ಕೆ ಸರಪಳಿ ಬಿಗಿಯಲಾಗುತ್ತದೆ. ಉಪವಾಸವಿದ್ದ ಭಕ್ತ ಸಾವಿರಾರು ಭಕ್ತರ ಸಮ್ಮುಖದಲ್ಲಿ ತನ್ನೆಲ್ಲ ಬಲ ಉಪಯೋಗಿಸಿ ಸರಪಳಿ ಎಳೆಯುತ್ತಾನೆ.

ಸರಪಳಿ ಅರ್ಧಕ್ಕೆ ತುಂಡಾದರೆ ಸಮೃದ್ಧ ಮಳೆ–ಬೆಳೆ, ಅಕಸ್ಮಾತ್ ಸರಪಳಿ ಕಲ್ಲು ಗೂಟಕ್ಕೆ ಸಮೀಪ ತುಂಡಾದರೆ ಮಳೆ ಬೆಳೆ ಸಾಧಾರಣ ಎನ್ನುವುದು ಹಿರಿಯರ ನಂಬಿಕೆ. ಸರಪಳಿಗೆ ಹಾಲು, ತುಪ್ಪ, ಜೇನುತುಪ್ಪ, ವಿವಿಧ ಹಣ್ಣುಗಳಿಂದ ತಯಾರಿಸಿದ ಪ್ರಸಾದವನ್ನು ಮಣೇವು ಮತ್ತು ದೋಣಿ ಸೇವೆಯಲ್ಲಿ ಸ್ವಾಮಿಗೆ ಭಕ್ತಪೂರ್ವಕವಾಗಿ ಸಮರ್ಪಿಸಲಾಗಿತ್ತು. ಅಮಾವಾಸ್ಯೆ ನಂತರ ಸರಪಳಿಗೆ ಬಲಿಪೂಜೆ ಮಾಡಿ ಅನ್ನಸಂತರ್ಪಣೆ ಮಾಡುವುದು ವಾಡಿಕೆ.

ಮೈಲಾರದಲ್ಲಿ ಆಗುವ ‘ಕಾರಣಿಕ’, ಹಿರಿಯೂರು ತಾಲ್ಲೂಕಿನ ಅಂಬಲಗೆರೆ ಗ್ರಾಮದ ರಂಗನಾಥಸ್ವಾಮಿ ದೇಗುಲದ ಮುಂದಿರುವ ಗರುಡಗಂಬದ ಚಲನೆ ಹಾಗೂ ನಗರದ ಮೈಲಾರ ದೇವರ ಸರಪಳಿ ಪವಾಡದಲ್ಲಿ ಬರುವ ಹೇಳಿಕೆಗಳ ಬಗ್ಗೆ ರೈತರಿಗೆ ಹೆಚ್ಚಿನ ನಂಬಿಕೆ. ಸರಪಳಿ ಪವಾಡ ಸಮಾಪನೆಗೊಂಡ ನಂತರ ಸ್ವಾಮಿಗೆ ‘ಗಂಗಾಪೂಜೆ’ ಸಲ್ಲಿಸಿ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ತೆರೆ ಎಳೆಯಲಾಯಿತು.

ಸಮಾರಂಭದಲ್ಲಿ ನಗರಸಭೆ ಪೌರಾಯುಕ್ತ ಎ. ವಾಸೀಂ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್. ನಾಗೇಂದ್ರನಾಯ್ಕ, ಭೋಜಣ್ಣ, ಜಗದೀಶ್ ಭಂಡಾರಿ, ಎ. ಮಂಜುನಾಥ್, ಗುತ್ತಿಗೆದಾರ ವೆಂಕಟೇಶ್ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.