ಹಿರಿಯೂರು: ತಾಲ್ಲೂಕಿನ ಮೈಸೂರು ರಸ್ತೆಯ ಉಡುವಳ್ಳಿ ಸಮೀಪ ಬುಧವಾರ ರಾತ್ರಿ ಬಳ್ಳಾರಿಯಿಂದ ಮಂಗಳೂರಿಗೆ ಹೋಗುತ್ತಿದ್ದ ಲಾರಿಯನ್ನು ದರೋಡೆಕೋರರು ತಡೆದು ಚಾಲಕನ ಮೇಲೆ ಹಲ್ಲೆ ನಡೆಸಿ ₹ 15 ಸಾವಿರ ಮತ್ತು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಈ ಬಗ್ಗೆ ಮಾಗಡಿ ತಾಲ್ಲೂಕಿನ ದ್ಯಾವಯ್ಯನಪಾಳ್ಯದ ಚಾಲಕ ನರಸಿಂಹರಾಜು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಮತ್ತೊಂದು ದರೋಡೆ ಯತ್ನ: ಇದೇ ತಂಡ ಗುರುವಾರ ಬೆಳಗಿನ ಜಾವ ವಿಜಯಪುರದಿಂದ ಮೈಸೂರಿಗೆ ಹೋಗುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಚಾಲಕನ ಮೇಲೂ ಹಲ್ಲೆ ನಡೆಸಿದೆ.
ಬಸ್ ಚಾಲಕ ಪರಶುರಾಂ ಮಲ್ಲಪ್ಪ ಕಾತ್ರಾಳ್ ಮೂತ್ರ ವಿಸರ್ಜನೆಗೆಂದು ರಸ್ತೆಯ ಬದಿಗೆ ಬಸ್ ನಿಲ್ಲಿಸಿ ಕೆಳಗೆ ಇಳಿದಿದ್ದರು. ಆ ಸಮಯದಲ್ಲಿ ರಸ್ತೆಯ ಪಕ್ಕದ ಪೊದೆಗೆ ಎಳೆದುಕೊಂಡು ಹೋಗಿ ಕಲ್ಲು, ರಾಡುಗಳಿಂದ ಬೆದರಿಸಿ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಳ್ಳಲು ಮುಂದಾಗಿದ್ದಾರೆ.
ಪರಶುರಾಂ ಜೋರಾಗಿ ಕಿರುಚಿಕೊಂಡಾಗ ಗುಂಪಿನಲ್ಲಿದ್ದ ಒಬ್ಬ ಹಿಂದಿನಿಂದ ಬಂದು ಕಲ್ಲಿನಿಂದ ತಲೆಗೆ ಹೊಡೆದಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರು ಕೆಳಗೆ ಇಳಿದಿದ್ದನ್ನು ನೋಡಿ ಓಡಿ ಹೋಗಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಡಿವೈಎಸ್ಪಿ ರೋಷನ್ ಜಮೀರ್, ಸಿಪಿಐ ರಾಘವೇಂದ್ರ ಭೇಟಿ ನೀಡಿದ್ದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.