ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆ ವಿದ್ಯಾರ್ಥಿಗಳ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಮೌಲ್ಯಮಾಪನ ಅಷ್ಟೇ. ವರ್ಷಪೂರ್ತಿ ಓದಿರುವುದನ್ನೇ ಆತ್ಮ ವಿಶ್ವಾಸದಿಂದ ಬರೆಯಿರಿ. ಭಯ, ಆತಂಕ, ಉದ್ವೇಗಕ್ಕೆ ಒಳಗಾಗಬೇಡಿ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಕಿವಿಮಾತು ಹೇಳಿದ್ದಾರೆ.
ಆತಂಕದ ಭಾವನೆಗಳು ಮನಸ್ಥಿತಿಯನ್ನು ಘಾಸಿಗೊಳಿಸುತ್ತವೆ. ಅದಕ್ಕೆ ಅವಕಾಶ ನೀಡದೇ ಆಶಾಭಾವನೆಯೊಂದಿಗೆ ಪರೀಕ್ಷೆ ಬರೆಯಿರಿ. ಯಶಸ್ಸು ನಿಮ್ಮ ಪಾಲಿಗೆ ಸಿಕ್ಕೇ ಸಿಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್ ತಂದಿಟ್ಟ ಅತಂತ್ರ ಸ್ಥಿತಿ ವಿದ್ಯಾರ್ಥಿ ಮತ್ತು ಪೋಷಕರನ್ನು ಘಾಸಿಗೊಳಿಸಿದೆ. ಮಕ್ಕಳ ಮೇಲಿನ ಕಾಳಜಿಯಿಂದ ಪರೀಕ್ಷೆ ನಡೆಸಲು ಶಿಕ್ಷಣ ಸಚಿವ ಸುರೇಶಕುಮಾರ್ ಅವರು ವಿಶೇಷ ಒತ್ತು ನೀಡಿದ್ದಾರೆ. ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರು ವಿಶೇಷ ಪರಿಶ್ರಮ ಹಾಕಿದ್ದಾರೆ ಎಂದು ಹೇಳಿದ್ದಾರೆ.
‘ಪರೀಕ್ಷೆ ಬಗೆಗೆ ಪೋಷಕರೂ ಧೈರ್ಯ ತುಂಬಿದ್ದಾರೆ. ಭಾವನಾತ್ಮಕವಾಗಿ ಒತ್ತಾಸೆಯಾಗಿ ನಿಂತು ವಿದ್ಯಾರ್ಥಿಗಳಲ್ಲಿ ಭರವಸೆ ತುಂಬಿದ್ದಾರೆ. ಇಷ್ಟೆಲ್ಲದರ ನಡುವೆಯೂ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ಕಾಡದೇ ಇರದು. ಆದರೆ, ಈ ಭಯ, ಆತಂಕ ಅನಗತ್ಯವಾದುದು ಎಂಬುದನ್ನು ಎಲ್ಲ ಮಕ್ಕಳು ಅರಿಯಬೇಕು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.