ADVERTISEMENT

ಕೋವಿಡ್ ಕೇಂದ್ರದಲ್ಲಿ ಸ್ವಚ್ಛತೆ ಕಾಪಾಡಿ: ಅಧಿಕಾರಿಗಳಿಗೆ ಶಾಸಕ ಎಂ. ಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 5:23 IST
Last Updated 7 ಜೂನ್ 2021, 5:23 IST
ಸಿರಿಗೆರೆಯ ತರಳಬಾಳು ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕ ಎಂ. ಚಂದ್ರಪ್ಪ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿದರು
ಸಿರಿಗೆರೆಯ ತರಳಬಾಳು ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕ ಎಂ. ಚಂದ್ರಪ್ಪ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿದರು   

ಸಿರಿಗೆರೆ: ಇಲ್ಲಿನ ತರಳಬಾಳು ಕೋವಿಡ್‌ ಆರೈಕೆ ಕೇಂದ್ರ ಈ ಭಾಗದಲ್ಲೇ ಉತ್ತಮವಾಗಿದೆ. ಕೇಂದ್ರದಲ್ಲಿ ಮೊದಲು ಸ್ವಚ್ಛತೆಗೆ ಆದ್ಯತೆ ನೀಡಿ. ಕೋವಿಡ್ ಆರೈಕೆಗಾಗಿ ಬಂದಿರುವ ಸುತ್ತಲಿನ ಗ್ರಾಮೀಣ ಭಾಗದ ಜನರಿಗೂ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕು ಎಂದು ಶಾಸಕ ಎಂ. ಚಂದ್ರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಭಾನುವಾರ ಗ್ರಾಮದ ತರಳಬಾಳು ಕೋವಿಡ್‌ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ತಾಲ್ಲೂಕು ಆರೋಗ್ಯಾಧಿಕಾರಿ ಜತೆ ಚರ್ಚಿಸಿದರು.

‘ಗ್ರಾಮೀಣ ಭಾಗದಲ್ಲಿ ಕೊರೊನಾ ಹೆಚ್ಚುತ್ತಿದೆ. ಜನರು ಸ್ವಪ್ರೇರಣೆಯಿಂದ ತಪಾಸಣೆ ಮಾಡಿಸಿಕೊಂಡು ಸಮಸ್ಯೆಯಿದ್ದಲ್ಲಿ ತಪ್ಪದೇ ಕೋವಿಡ್‌ ಕೇಂದ್ರಕ್ಕೆ ದಾಖಲಾಗಬೇಕು. ಇದರಿಂದ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಕುಟುಂಬದವರ ಆರೋಗ್ಯವನ್ನೂ ಕಾಪಾಡಿದಂತಾಗುತ್ತದೆ. ಸೋಂಕಿತರು, ವೈದ್ಯಾಧಿಕಾರಿ, ಪೊಲೀಸ್‌ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ತರಳಬಾಳು ಸೇವಾ ಸಮಿತಿ ಉತ್ತಮ ಸೇವೆ ಸಲ್ಲಿಸುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಅಳಗವಾಡಿ, ಮೇಗಳಹಳ್ಳಿ, ಪುಡಕಲಹಳ್ಳಿ, ಬಸವನಶಿವನಕೆರೆ ಹಾಗೂ ಹಳವುದರ, ಮದಕರಿಪುರ ಸೇರಿ ವಿವಿಧೆಡೆಯಿಂದ ತಪಾಸಣೆಗೆ ಬಂದ ರೋಗಿಗಳಿಂದ ಮಾಹಿತಿ ಪಡೆದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ. ಗಿರೀಶ್, ‘ನಗರಗಳಲ್ಲಿ ಸಿಗುವ ಚಿಕಿತ್ಸೆ ಗ್ರಾಮೀಣ ಭಾಗದಲ್ಲಿಯೂ ಸಿಗುವ ವ್ಯವಸ್ಥೆಯನ್ನು ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಲ್ಪಿಸಿಕೊಟ್ಟಿದ್ದಾರೆ. ದಾಖಲಾಗಿರುವವರಿಗೆ ಉತ್ತಮ ಆರೋಗ್ಯ ಸೇವೆ ನೀಡಬೇಕು’ ಎಂದು ವೈದ್ಯಾಧಿಕಾರಿಗೆ ಸೂಚಿಸಿದರು.

ಬಳಿಕ ಡಾ.ಬಿ.ವಿ. ಗಿರೀಶ್ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಎನ್‌ಬಿ ಮೋಹನ್, ಫಾರ್ಮಸಿಸ್ಟ್ ಮೋಹನ್, ವೈದ್ಯಾಧಿಕಾರಿಗಳಾದ ನಾರದಮುನಿ, ವಿಜಯಲಕ್ಷಿ,ಯಶಸ್ವಿನಿ, ಪ್ರತಿಭಾ, ಪೊಲೀಸ್‌ ಸಿಬ್ಬಂದಿ ಸಿ.ಬಿ. ಮಲ್ಲಿಕಾರ್ಜುನ್, ಎಂ.ಡಿ. ಬಸವರಾಜು, ಪೆಟ್ರೋಲ್ ಬಸವರಾಜು, ಚಿದಾನಂದ, ಸಿದ್ದೇಶ್, ಪ್ರಸನ್ನಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.