ಚಿತ್ರದುರ್ಗ: ಜಿಲ್ಲೆಯ ವಿವಿಧೆಡೆ ಶ್ರಾವಣ ಮಾಸದ ಮೊದಲ ಮಂಗಳವಾರ ಮಂಗಳಗೌರಿ ವ್ರತಾಚರಣೆಯು ಶ್ರದ್ಧಾಭಕ್ತಿಯಿಂದ ನೆರವೇರಿತು. ನಗರದ ನವದುರ್ಗೆಯರ ದೇಗುಲಗಳಲ್ಲೂ ಮುಂಜಾನೆಯಿಂದಲೇ ಪೂಜೆಗಳು ಜರುಗಿದವು.
ಅಧಿದೇವತೆ ಏಕನಾಥೇಶ್ವರಿ, ಉಚ್ಚಂಗಿಯಲ್ಲಮ್ಮ, ಬರಗೇರಮ್ಮ ದೇವತೆಗಳಿಗೆ ಪುಷ್ಪ ಮತ್ತು ತರಕಾರಿಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಮಹಿಳೆಯರ ಹಬ್ಬವೆಂದೇ ಖ್ಯಾತಿಯಾದ ಈ ವ್ರತಾಚರಣೆಯನ್ನು ಅನೇಕರು ಮನೆಗಳಲ್ಲಿ ಆಚರಿಸಿದರು. ಪತಿಗೆ ದೀರ್ಘಾಯಸ್ಸು ಲಭಿಸಲಿ ಎಂದು ಪ್ರಾರ್ಥಿಸಿ ಮಹಿಳೆಯರು ಶ್ರಾವಣ ಮಾಸದ ಪ್ರತಿ ಮಂಗಳವಾರ ಮಂಗಳಗೌರಿ ವ್ರತ ಆಚರಿಸುವುದು ವಾಡಿಕೆ.
ಮಹಿಳೆಯರು ಮನೆಯಲ್ಲಿ ಮಂಗಳಗೌರಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುವ ಪರಂಪರೆ ಇದೆ. ಪರಸ್ಪರ ಫಲ–ತಾಂಬೂಲ ವಿನಿಮಯ ಮಾಡಿಕೊಂಡು ಗೌರಿ ಹಬ್ಬದ ಶುಭಾಶಯ ಕೋರಿದರು. ಕೋವಿಡ್ ಕಾರಣಕ್ಕೆ ಅಕ್ಕಪಕ್ಕದ ಮನೆಯವರನ್ನು ಕರೆಯಲಿಲ್ಲ. ಕುಟುಂಬದ ಸದಸ್ಯರಿಗೆ ಫಲ–ತಾಂಬೂಲ ನೀಡುವ ಮೂಲಕ ಸರಳವಾಗಿ ಆಚರಿಸಿದರು.
ಕೋಟೆ ಒಳಾಂಗಣದ ಮೇಲುದುರ್ಗದಲ್ಲಿರುವ ಏಕನಾಥೇಶ್ವರಿ ದೇಗುಲದಲ್ಲಿ ದೇವಿಗೆ ಅರ್ಚಕರಿಂದ ಮುಂಜಾನೆ ಪೂಜೆ ನೆರವೇರಿತು. ಮೂಲಂಗಿ, ಬದನೆಕಾಯಿ, ಈರುಳ್ಳಿ ಸೇರಿ ವಿವಿಧ ತರಕಾರಿಗಳಿಂದ ದೇವಿಯನ್ನು ವಿಶೇಷವಾಗಿ ಅಲಂಕರಿಸಿದ್ದರು. ನೂರಾರು ಭಕ್ತರು ಕೋಟೆಯನ್ನು ಏರಿ ಪೂಜೆ ಸಲ್ಲಿಸಿದರು.
ರಾಜಬೀದಿಯಲ್ಲಿ ಇರುವ ಉಚ್ಚಂಗಿ ಯಲ್ಲಮ್ಮ ದೇಗುಲದಲ್ಲಿಯೂ ದೇವಿಗೆ ಅರ್ಚಕರು ತರಕಾರಿಗಳಿಂದ ಅಲಂಕರಿಸಿದ್ದರು. ಶ್ರಾವಣ ಆರಂಭದ ಬಳಿಕ ದೇಗುಲಗಳಲ್ಲೂ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲಿಯ ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಿಗೆ ಪುಷ್ಪಾಲಂಕಾರ ನೆರವೇರಿಸಲಾಗಿತ್ತು. ಪ್ರಧಾನ ಅರ್ಚಕರಿಂದ ಪೂಜೆಯಾದ ಬಳಿಕ ಭಕ್ತರು ಮಹಾಮಂಗಳಾರತಿ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.