ಚಿತ್ರದುರ್ಗ: ಸೊಪ್ಪು, ತರಕಾರಿ ಬೆಲೆ ಏರಿಕೆಯಾಗುತ್ತಲೇ ಇದ್ದು, ಗ್ರಾಹಕರಲ್ಲಿ ತಳಮಳ ಶುರುವಾಗಿದೆ. ಅವಕ ಕಡಿಮೆ ಆಗಿರುವುದರಿಂದ ಬಹುತೇಕ ತರಕಾರಿ ಬೆಲೆ ಕೆ.ಜಿ.ಗೆ ₹80ರ ಗಡಿದಾಟಿದೆ.
ಇತ್ತೀಚೆಗೆ ಸುರಿದ ಭಾರಿ ಮಳೆಯ ಪರಿಣಾಮ ತರಕಾರಿ ಹಾಗೂ ಸೊಪ್ಪು ಇಳುವರಿ ಕಡಿಮೆಯಾಗಿದೆ. ಇದು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ ಎಂಬುದು ತರಕಾರಿ ವ್ಯಾಪಾರಿಗಳ ವಿಶ್ಲೇಷಣೆ.
ಕೊತ್ತಂಬರಿ, ಮೆಂತೆ, ಪಾಲಕ್ ಸೇರಿ ಹಲವು ಸೊಪ್ಪು ಕಟ್ಟಿಗೆ ₹10ಕ್ಕೆ ಮಾರಾಟವಾಗುತ್ತಿವೆ. ಎರಡು ದಿನಗಳಿಂದ ಈಚೆಗೆ ಕೊತ್ತಂಬರಿ ಮಾತ್ರ ₹7ಕ್ಕೆ ಇಳಿಕೆಯಾಗಿದೆ. ಉಳಿದ ಸೊಪ್ಪುಗಳ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಜಮೀನಿನಲ್ಲಿದ್ದ ಸೊಪ್ಪು ಮಳೆಗೆ ಹಾಳಾಗಿರುವ ಸಾಧ್ಯತೆ ಇದೆ.
ಮಾರುಕಟ್ಟೆಗೆ ಭೇಟಿ ನೀಡಿದ ಗ್ರಾಹಕರು ತರಕಾರಿ ಬೆಲೆಯನ್ನು ಕಂಡು ಅಚ್ಚರಿ ವ್ಯಕ್ತಪಡಿಸುವುದು ಸಾಮಾನ್ಯವಾಗಿದೆ. ದುಬಾರಿ ಬೆಲೆಯ ತರಕಾರಿ ಬದಲು ಪರ್ಯಾಯಗಳತ್ತ ಗೃಹಿಣಿಯರು ಗಮನ ಹರಿಸುವಂತಾಗಿದೆ. ಬೆಂಡೆ ₹80, ಹುರಳಿಕಾಯಿ ₹80, ಬದನೆ ₹80, ಹೀರೆಕಾಯಿ ₹70, ಆಲುಗೆಡ್ಡೆ ₹50, ಕ್ಯಾರೇಟ್ ₹80, ಮೆಣಸು ₹40ಕ್ಕೆ ಬೆಲೆ ಇದೆ.
ಸ್ಥಳೀಯ ರೈತರು ಬೆಳೆದ ಈರುಳ್ಳಿ ಮಾತ್ರ ಕಡಿಮೆ ಬೆಲೆಗೆ ಲಭ್ಯವಾಗುತ್ತಿದೆ. ಮಹಾರಾಷ್ಟ್ರದಿಂದ ಬಂದಿರುವ ಈರುಳ್ಳಿ ₹50ರ ಗಡಿದಾಟಿದೆ. ಟೊಮೆಟೊ, ಸೌತೆಕಾಯಿ ಹಾಗೂ ದೊಣ್ಣಮೆಣಸಿನಕಾಯಿ ಬೆಲೆಯಲ್ಲಿ ಭಾರಿ ವ್ಯತ್ಯಾಸವಾಗಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.