ಚಿತ್ರದುರ್ಗ: ಇಲ್ಲಿನ ಮುರುಘಾ ಮಠದ ಅನುಭವ ಮಂಟಪದಲ್ಲಿ ಗುರುವಾರ ನಡೆದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಹತ್ತು ಜೋಡಿ ವಧು–ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮೂರು ಜೋಡಿ ಅಂತರ್ಜಾತಿ ವಿವಾಹಕ್ಕೆ ಶಿವಮೂರ್ತಿ ಮುರುಘಾ ಶರಣರು ಸಾಕ್ಷಿಯಾದರು.
ಮುರುಘ ರಾಜೇಂದ್ರ ಬೃಹನ್ಮಠ ಹಾಗೂ ಎಸ್ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಸಹಯೋಗದಲ್ಲಿ 30ನೇ ವರ್ಷದ 11ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಸರಳವಾಗಿ ನೆರವೇರಿತು. ಕೋವಿಡ್ ನಿಯಮಾನುಸಾರ ಎಲ್ಲರೂ ಅಂತರ ಕಾಯ್ದುಕೊಂಡು ಎಚ್ಚರಿಕೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವವೂ ಜರುಗಿತು. ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಶಿವಮೂರ್ತಿ ಮುರುಘಾ ಶರಣರು ‘ಕನ್ನಡಿಗರಾದ ನಾವೆಲ್ಲ ಕನ್ನಡ ಭಾಷೆಯನ್ನು ಪ್ರೀತಿಸಬೇಕು. ಅದು ನಮಗೆ ಅನ್ನ ನೀಡಿದೆ. ಭಾಷೆಯ ಜೊತೆ ಜೊತೆಗೆ ನಮ್ಮ ಜೀವನ ಸಾಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.
‘ಕನ್ನಡದಲ್ಲಿ ವಚನ ರಚಿಸುವ ಮೂಲಕ ಬಸವಾದಿ ಶರಣರು 12ನೇ ಶತಮಾನದಲ್ಲಿ ಕನ್ನಡದ ಕಂಪನ್ನು ವಿಶ್ವಕ್ಕೆ ಪಸರಿಸಿದ್ದಾರೆ. ದೇವ ಭಾಷೆಯಾಗಿದ್ದ ಕನ್ನಡವನ್ನು ಜನರ ಭಾಷೆಯಾಗಿ ಪರಿವರ್ತನೆ ಮಾಡಿದ್ದಾರೆ. ಹೀಗಾಗಿ, ಪ್ರಪಂಚದ ಎಲ್ಲೆಡೆ ಕನ್ನಡಿಗರು ಸಿಗುತ್ತಾರೆ’ ಎಂದು ಹೇಳಿದರು.
ಮುಖ್ಯಮಂತ್ರಿ ಸಲಹೆಗಾರ ಎಂ.ಲಕ್ಷ್ಮೀನಾರಾಯಣ ಮಾತನಾಡಿ, ‘ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು 30 ವರ್ಷ ನಿರಂತರವಾಗಿ ನಡೆಯುತ್ತಿರುವುದು ಸಂತಸದ ವಿಚಾರ. ಲೋಕ ಕಲ್ಯಾಣಕ್ಕಾಗಿ ಜ್ಞಾನ ದಾಸೋಹ, ಅನ್ನ ದಾಸೋಹದ ಮೂಲಕ ಬಡ ಕುಟುಂಬಗಳಿಗೆ ಶರಣರು ಆಧಾರವಾಗಿದ್ದಾರೆ. ಬಸವಣ್ಣನವರ ಆಶಯ, ತತ್ವಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಬಸವ ಪುತ್ಥಳಿ ನಿರ್ಮಾಣ ಆಗುವುದರ ಮೂಲಕ ಚಿತ್ರದುರ್ಗ ಪ್ರವಾಸಿ ತಾಣವಾಗಬೇಕು’ ಎಂದು ತಿಳಿಸಿದರು.
ಪೂರ್ವವಲಯದ ಐಜಿಪಿ ಎಸ್.ರವಿ ಮಾತನಾಡಿದರು. ಎಸ್ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕೆಇಬಿ ಷಣ್ಮುಖಪ್ಪ, ಫಾದರ್ ಎಂ.ಎಸ್. ರಾಜು, ಪೈಲ್ವಾನ್ ತಿಪ್ಪೇಸ್ವಾಮಿ ಇದ್ದರು.
***
ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ದುಂದುವೆಚ್ಚಕ್ಕೆ ಕಡಿವಾಣ ಹಾಕಿದರೆ ಬದುಕನ್ನು ಉತ್ತಮವಾಗಿ ಕಟ್ಟಿಕೊಳ್ಳಲು ಸಾಧ್ಯ. ಸರಳ ವಿವಾಹ ಪದ್ಧತಿ 12ನೇ ಶತಮಾನದಲ್ಲೇ ಇತ್ತು.
–ಬಸವಲಿಂಗ ಸ್ವಾಮೀಜಿ
ಸಿದ್ಧಯ್ಯನಕೋಟೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.