ADVERTISEMENT

ಅನುದಾನದಿಂದ ಮಠ ಖರೀದಿಸಲು ಸಾಧ್ಯವಿಲ್ಲ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಮುಖ್ಯಮಂತ್ರಿಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 14:02 IST
Last Updated 3 ಫೆಬ್ರುವರಿ 2021, 14:02 IST
ಪ್ರವರ್ಗ 2 ಎ ಮೀಸಲಾತಿಗೆ ಒತ್ತಾಯಿಸಿ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರ ಪೀಠದ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಶಾಸಕ ಎಂ.ಬಿ. ಪಾಟೀಲ, ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶೆಪ್ಪನವರ್‌ ಬುಧವಾರ ಹೆಜ್ಜೆಹಾಕಿದರು.
ಪ್ರವರ್ಗ 2 ಎ ಮೀಸಲಾತಿಗೆ ಒತ್ತಾಯಿಸಿ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರ ಪೀಠದ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಶಾಸಕ ಎಂ.ಬಿ. ಪಾಟೀಲ, ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶೆಪ್ಪನವರ್‌ ಬುಧವಾರ ಹೆಜ್ಜೆಹಾಕಿದರು.   

ಚಿತ್ರದುರ್ಗ: ಅನುದಾನ ಬಿಡುಗಡೆ ಮಾಡಿ ಮಠಗಳನ್ನು ಖರೀದಿಸಲು ಸಾಧ್ಯವಿಲ್ಲ. ಮೀಸಲಾತಿಗೆ ಪರ್ಯಾಯವಾಗಿ ನೀಡುವ ಅನುದಾನ ಮಠಕ್ಕೆ ಬೇಕಾಗಿಲ್ಲ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಮಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2 ‘ಎ’ ಮೀಸಲಾತಿ ಸೌಲಭ್ಯ ಕಲ್ಪಿಸುವಂತೆ ಬೆಂಗಳೂರಿಗೆ ಪಾದಯಾತ್ರೆ ನಡೆಸುತ್ತಿರುವ ಸ್ವಾಮೀಜಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಮಠಕ್ಕೆ ಅನುದಾನ ನೀಡುವ ಪರಂಪರೆಯನ್ನು ಬಿ.ಎಸ್‌.ಯಡಿಯೂರಪ್ಪ ಹುಟ್ಟುಹಾಕಿದರು. ಅನುದಾನ ನೀಡುವಂತೆ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿರಲಿಲ್ಲ. ಬ್ಲ್ಯಾಕ್‌ಮೇಲ್‌ ಕೂಡ ಮಾಡಿಲ್ಲ’ ಎಂದರು.

ADVERTISEMENT

‘ಡಿಸೆಂಬರ್‌ ತಿಂಗಳಲ್ಲಿ ರಾಜ್ಯ ಸರ್ಕಾರ ₹25 ಲಕ್ಷ ಅನುದಾನವನ್ನು ಮಠಕ್ಕೆ ಬಿಡುಗಡೆ ಮಾಡಿತ್ತು. ಈ ಅನುದಾನ ಮರಳಿಸುವ ಪ್ರತಿಯನ್ನು ಮುಖ್ಯಮಂತ್ರಿ ಕಚೇರಿಗೆ ತಲುಪಿಸಲಾಗುವುದು. ಮರಳಿಸುವ ಅನುದಾನವನ್ನು ಮತ್ತೊಂದು ಮಠ ಅಥವಾ ದೇಗುಲಕ್ಕೆ ನೀಡಬೇಡಿ. ಸಂಕಷ್ಟದಲ್ಲಿರುವ ರೈತರಿಗೆ ಒದಗಿಸಿ’ ಎಂದರು.

ಸರ್ಕಾರದ ಧೋರಣೆಯ ವಿರುದ್ಧ ಪಂಚಮಸಾಲಿ ಮಹಿಳಾ ಘಟಕದ ಸದಸ್ಯರು ಒನಕೆ ಹಿಡಿದು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಬುಧವಾರ ಬೆಳಿಗ್ಗೆ ಚಿತ್ರದುರ್ಗದಿಂದ ಹೊರಟು ಹಿರಿಯೂರು ತಾಲ್ಲೂಕಿನ ಬುರುಜನರೊ‍ಪ್ಪ ಗ್ರಾಮ ತಲುಪಿತು. ಕೂಡಲಸಂಗಮದಿಂದ ಆರಂಭವಾದ ಪಾದಯಾತ್ರೆ ಸುಮಾರು 470 ಕಿ.ಮೀ. ಕ್ರಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.