ಮತ್ಸಮುದ್ರ ಶ್ರೀ ಮತ್ಸ್ಯಾಂಜನೇಯ ಸ್ವಾಮಿ
ಪರಶುರಾಂಪುರ: ಸಮೀಪದ ಮತ್ಸಮುದ್ರ ಗ್ರಾಮದ ಮತ್ಸ್ಯಾಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವ ಶನಿವಾರ ಅದ್ದೂರಿಯಾಗಿ ನಡೆಯಲಿದ್ದು, ದೇವಸ್ಥಾನ ಸಮಿತಿ, ತಾಲ್ಲೂಕು ಆಡಳಿತ, ಚನ್ನಮ್ಮನಾಗತಿಹಳ್ಳಿ ಗ್ರಾಮ ಪಂಚಾಯಿತಿ ಮತ್ತು ಸ್ವಾಮಿ ವಿವೇಕನಂದಾ ಸಮಾಜ ಸೇವಾ ಸಂಸ್ಥೆಯಿಂದ ಸಕಲ ಸಿದ್ಧತೆಗಳು ನಡೆಯುತ್ತಿವೆ.
ಡಿ.21ರಂದು ಬ್ರಹ್ಮ ರಥೋತ್ಸವ, ಡಿ.22ರಂದು ಉಟ್ಲ ಪರಿಷೆ, ಡಿ.23ರಂದು ಮಹಾ ಮಂಗಳಾರತಿಯೊಂದಿಗೆ ಜಾತ್ರೆಗೆ ತೆರೆಬೀಳಲಿದೆ.
ಮತ್ಸ್ಯಾಂನೇಯ ಸ್ವಾಮಿಯ ಐತಿಹ್ಯ: ಇಲ್ಲಿನ ಆಂಜನೇಯ ಸ್ವಾಮಿ ದೇವಸ್ಥಾನವನ್ನು ವ್ಯಾಸರಾಯರು ಸ್ಥಾಪಿಸಿದ್ದಾರೆ ಎಂಬ ಐತಿಹ್ಯವಿದ್ದು, ಅಂಜನೇಯ ಸ್ವಾಮಿಯು ಲಂಕಾದಹನ ಮಾಡಿ ಈ ಭಾಗದಿಂದ ಹಾದು ಹೋಗುವಾಗ ಇಲ್ಲಿ ಇಳಿದು ನೀರು ಕಡಿದು ಹೋಗಿದ್ದರು ಎಂಬ ಪ್ರತೀತಿ ಇದೆ. ಹಾಗಾಗಿ ಅಂಜನೇಯ ಸ್ವಾಮಿಯ ಮೂರ್ತಿಯನ್ನು ವ್ಯಾಸರಾಯರು ಇಲ್ಲಿ ಪ್ರತಿಷ್ಠಾಪಿಸುತ್ತಾರೆ. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಜಾತ್ರೆ ನಡೆಯುತ್ತಾ ಬಂದಿದೆ. ಜಾತ್ರೆಗೆ ಸುತ್ತಮುತ್ತಲ ಜಿಲ್ಲೆಯ ಜನರು ಸೇರಿದಂತೆ ನೆರೆಯ ಸೀಮಾಂಧ್ರ ಮತ್ತು ತೆಲಂಗಾಣದಿಂದಲೂ ಭಕ್ತರು ಇಲ್ಲಿಗೆ ಬರುತ್ತಾರೆ.
ಮಂಗದೋಣಿ: ಮತ್ಸಮುದ್ರ ಗ್ರಾಮದಲ್ಲಿ ಹನುಮಂತ ಬಾಯಾರಿಕೆ ನೀಗಿಸಲು ತನ್ನ ಮೊಣಕೈಯಿಂದ ಗುದ್ದಿ ನೀರು ತೆಗೆದು ಕುಡಿದು ಮುಂದೆ ಹೋಗಿದ್ದ ಕಾರಣಕ್ಕೆ, ಆ ಜಾಗಕ್ಕೆ ಮಂಗದೋಣಿ ಎಂದು ಕರೆಯುತ್ತಾರೆ. ಇಲ್ಲಿ ಎಂದಿಗೂ ನೀರು ಬತ್ತುವುದಿಲ್ಲ. ಪ್ರತಿ ವರ್ಷ ಜಾತ್ರೆ ಪ್ರಾರಂಭವಾಗುವುದೇ ಇಲ್ಲಿ ಗಂಗಾ ಪೂಜೆ ಸಲ್ಲಿಸಿದ ನಂತರವೇ ಎನ್ನುತ್ತಾರೆ ಗ್ರಾಮಸ್ಥ ಶಿವಪ್ಪ.
ಉಟ್ಲ ಪರಿಷೆ ವಿಶೇಷ: ಪ್ರತಿ ವರ್ಷ ಜಾತ್ರೆಯಲ್ಲಿ ನಡೆಯುವ ಉಟ್ಲ ಪರಿಷೆ ಇಲ್ಲಿನ ವಿಶೇಷ. ಉದ್ದನೆಯ ಕಂಬಕ್ಕೆ ಜೇಡಿ ಮಣ್ಣನ್ನು ಮೆತ್ತಿ, ಕಂಬದ ಮೇಲಿನಿಂದ ಲೋಳೆರಸವನ್ನು ಸುರಿಯಲಾಗುತ್ತದೆ. ಜಾರುವ ಕಂಬವನ್ನು ಹತ್ತಿದವರು ಸ್ಪರ್ಧೆಯಲ್ಲಿ ವಿಜೇತರಾಗುತ್ತಾರೆ. ಈ ಆಟ ನೋಡಲು ಸುತ್ತಮತ್ತಲ ಹಳ್ಳಿಗಳಿಂದ ಅಪಾರ ಸಂಖ್ಯೆಯ ಜನ ಸೇರುತ್ತಾರೆ.
ಪ್ರತಿ ಶನಿವಾರವೂ ಸ್ವಾಮಿಗೆ ಪೂಜೆ ನಡೆಯುತ್ತದೆ ಅದರೆ ಕಾರ್ತಿಕ ಮಾಸದ ಜಾತ್ರೆಯಲ್ಲಿ ಸಾವಿರಾರು ಭಕ್ತರು ಜಾತ್ರೆಗೆ ಅಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ.-ಸುಧೀಂದ್ರಚಾರ್, ಆರ್ಚಕರು ಮತ್ಸಮುದ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.