ADVERTISEMENT

ಪ್ರಾಚೀನ ಹಸ್ತಪ್ರತಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 13:16 IST
Last Updated 16 ಅಕ್ಟೋಬರ್ 2021, 13:16 IST
ಚಿತ್ರದುರ್ಗದ ಮುರುಘಾ ಮಠದ ಆವರಣದಲ್ಲಿ ವಚನಗಳ ಪ್ರಾಚೀನ ಹಸ್ತಪ್ರತಿ ಮೆರವಣಿಗೆ ಶನಿವಾರ ನಡೆಯಿತು.
ಚಿತ್ರದುರ್ಗದ ಮುರುಘಾ ಮಠದ ಆವರಣದಲ್ಲಿ ವಚನಗಳ ಪ್ರಾಚೀನ ಹಸ್ತಪ್ರತಿ ಮೆರವಣಿಗೆ ಶನಿವಾರ ನಡೆಯಿತು.   

ಚಿತ್ರದುರ್ಗ: ಇಲ್ಲಿನ ಮುರುಘಾ ಮಠದ ಆವರಣದಲ್ಲಿ ವಚನಗಳ ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆ ಶನಿವಾರ ಸಾಂಪ್ರದಾಯಿಕವಾಗಿ ನಡೆಯಿತು. ಶಿವಮೂರ್ತಿ ಮುರುಘಾ ಶರಣರು ಹಾಗೂ ಅಲ್ಲಮ ಪ್ರಭುವಿಗೆ ಭಕ್ತರು ಜೈಕಾರ ಹಾಕಿ ಸಂಭ್ರಮಿಸಿದರು.

ಶಿವಮೂರ್ತಿ ಮುರುಘಾ ಶರಣರು ಶೂನ್ಯ ಪೀಠಾರೋಹಣ ಮಾಡಿದ ನಂತರ ಬಸವಣ್ಣ, ಅಲ್ಲಮಪ್ರಭು ಅವರ ಭಾವಚಿತ್ರ ಹಾಗೂ ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆ ನಡೆಸುವುದು ವಾಡಿಕೆ. ಪಲ್ಲಕ್ಕಿಯಲ್ಲಿ ಪೀಠಾಧ್ಯಕ್ಷರ ಬದಲು ವಚನಗಳ ಹಸ್ತಪ್ರತಿ ಇಟ್ಟು ಮೆರವಣಿಗೆ ಮಾಡುವುದು ಈ ಉತ್ಸವದ ವಿಶೇಷ.

ಶೂನ್ಯಪೀಠಾರೋಹಣದ ಕೈಂಕರ್ಯಗಳು ಆರಂಭವಾಗುತ್ತಿದ್ದಂತೆ ಮಠದಿಂದ ಪಲ್ಲಕ್ಕಿಯನ್ನು ಹೊರತಂದು ಪುಷ್ಪಗಳಿಂದ ಸಿಂಗರಿಸಲಾಯಿತು. ಶೂನ್ಯ ಪೀಠದ ಪ್ರಥಮ ಅಧ್ಯಕ್ಷ ಅಲ್ಲಮಪ್ರಭು ಹಾಗೂ ಬಸವಣ್ಣನವರ ಭಾವಚಿತ್ರ ಇರಿಸಲಾಯಿತು. ಶೂನ್ಯಪೀಠಾರೋಹಣ ನೆರವೇರಿದ ಬಳಿಕ ವಚನಗಳ ಹಸ್ತಪ್ರತಿಯನ್ನು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಲೆಮೇಲೆ ಹೊತ್ತುತಂದು ಪಲ್ಲಕ್ಕಿಯಲ್ಲಿಟ್ಟರು. ರುದ್ರಾಕ್ಷಿ ಕಿರೀಟ ಬಿಚ್ಚಿಟ್ಟು ಬಂದ ಶರಣರು ಪಲ್ಲಿಕ್ಕಿಗೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು.

ADVERTISEMENT

ಮೆರವಣಿಗೆಯ ಮುಂಭಾಗದಲ್ಲಿ ಆನೆ ಹೆಜ್ಜೆಹಾಕಿತು. ವಾದ್ಯ ಮೇಳಗಳೊಂದಿಗೆ ಭಕ್ತರು, ವಿವಿಧ ಮಠಾಧೀಶರು ಸಾಗಿದರು. ಪಲ್ಲಕ್ಕಿಗೆ ಹೆಗಲುಕೊಟ್ಟು ಭಕ್ತರು ಪುನೀತರಾದರು. ಮಠದ ಆವರಣದಲ್ಲಿ ನಿಂತಿದ್ದ ಭಕ್ತರು ಈ ಕ್ಷಣಗಳನ್ನು ಕಣ್ತುಂಬಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.