ADVERTISEMENT

ಹಿರಿಯೂರು‌| ನಿರ್ಲಕ್ಷ್ಯ ಕಂಡುಬಂದಲ್ಲಿ ಶಿಸ್ತು ಕ್ರಮ: ಸಚಿವ ಡಿ. ಸುಧಾಕರ್

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 5:37 IST
Last Updated 9 ಡಿಸೆಂಬರ್ 2025, 5:37 IST
ಹಿರಿಯೂರಿನ ನಗರಸಭೆ ಸಭಾಂಗಣದಲ್ಲಿ ಶನಿವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ದೃಶ್ಯ.
ಹಿರಿಯೂರಿನ ನಗರಸಭೆ ಸಭಾಂಗಣದಲ್ಲಿ ಶನಿವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ದೃಶ್ಯ.   

ಹಿರಿಯೂರು: ನಗರ ಮತ್ತು ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ, ಸ್ವಚ್ಛತೆ ಹಾಗೂ ಬೀದಿದೀಪ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಕಂಡುಬಂದಲ್ಲಿ ಶಿಸ್ತು ಕ್ರಮ ಖಚಿತ. ಇದು ತೇರುಮಲ್ಲೇಶ್ವರನ ಮೇಲೆ ಆಣೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಠಿಣ ಸಂದೇಶ ರವಾನಿಸಿದರು.

ನಗರದ ನಗರಸಭೆ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆಯೇ ಸಾರ್ವಜನಿಕರಿಂದ ದೂರು ಬರದಂತೆ

ADVERTISEMENT

ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುವ ಪ್ರತಿ ಪಿಡಿಒಗೂ ತಲಾ ಐದು ಲಕ್ಷ ರೂಪಾಯಿ ಬಹುಮಾನವನ್ನು ಸ್ವಂತಕ್ಕೆ ನೀಡುತ್ತೇನೆ ಎಂದು ಘೋಷಿಸಿದ ಸಚಿವರು, ಯಾವ್ಯಾವ ಗ್ರಾಮ ಪಂಚಾಯಿತಿಗಳ ಬಗ್ಗೆ ದೂರುಗಳು ಬರುತ್ತವೆಯೋ ಅಂತಹ ಪಂಚಾಯಿತಿಗಳನ್ನು ವಿಶೇಷವಾಗಿ ಆಡಿಟ್ ಮಾಡಿಸಿ ತಪ್ಪು ಕಂಡುಬಂದಲ್ಲಿ ಪಿಡಿಒಗಳನ್ನು ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಎಚ್ಚರಿಸಿದರು.

ತಾಲ್ಲೂಕಿನ ಬಹಳಷ್ಟು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಾರ್ಖಾನೆಗಳು, ದೊಡ್ಡದೊಡ್ಡ ಕೈಗಾರಿಕೆಗಳಿವೆ. ಅಲ್ಲಿನ ಸಿಎಸ್ ಆರ್ ಅನುದಾನ ಬಳಸಿಕೊಂಡು ಮಾದರಿ ಗ್ರಾಮ ಪಂಚಾಯಿತಿ ಮಾಡಲು ಅವಕಾಶವಿದೆ. ಆದರೆ ಯಾರೊಬ್ಬರೂ ಅಂತಹ ಪ್ರಯತ್ನ ಮಾಡದಿರುವುದು ಬೇಸರದ ಸಂಗತಿ. ಎಲ್ಲಾ ಉದ್ದಿಮೆದಾರರು ಸಿಎಸ್ ಆರ್ ನಿಧಿ ಪಾವತಿಸುವಂತೆ ಕ್ರಮ ಕೈಗೊಳ್ಳಿ ಎಂದು ತಹಶೀಲ್ದಾರರು ಮತ್ತು ಪೊಲೀಸರಿಗೆ ಸಚಿವರು ಸೂಚಿಸಿದರು.

ಹಳ್ಳಿಗಳಲ್ಲಿ ಇಂದಿಗೂ ಪರಿಶಿಷ್ಟ ಜಾತಿ–ಪಂಗಡದವರ ಕಾಲೋನಿಗಳಲ್ಲಿ ಸರಿಯಾದ ಚರಂಡಿ, ರಸ್ತೆ ಮಾಡಿಲ್ಲ. ಹಳ್ಳಿಯಲ್ಲೂ ಕೊಳಚೆ ಪ್ರದೇಶ ಇದೆ ಎಂದರೆ ನಾಚಿಕೆಯ ಸಂಗತಿ. ವಾರಕ್ಕೆ ಒಮ್ಮೆಯಾದರೂ ಅಂತಹ ಕಾಲೋನಿಗಳಿಗೆ ಹೋಗಿ ಜನರ ಅಹವಾಲು ಆಲಿಸಿ. ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗದು. ನಿಮಗೆ ಸಿಕ್ಕಿರುವ ಅವಕಾಶವನ್ನು ಸಮಾಜದ ಅಭಿವೃದ್ಧಿಗೆ ಬಳಸಿ ಎಂದು ಸುಧಾಕರ್ ತಾಕೀತು ಮಾಡಿದರು.

ನಿವೇಶನ ರಹಿತರಿಗೆ, ಭೂರಹಿತರಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕು. ಪಹಣಿಯಲ್ಲಿ ಸರ್ಕಾರಿ ಶಾಲಾ–ಕಾಲೇಜುಗಳ ಹೆಸರು ನಮೂದಾಗುವಂತೆ ನೋಡಿಕೊಳ್ಳಿ. ಆರ್ ಒ ಘಟಕಗಳ ನಿರ್ವಹಣೆಗೆ ಏಜೆನ್ಸಿ ನೇಮಿಸಿ. ಸಿಎ ನಿವೇಶನ ಒಳಗೊಂಡು ಸರ್ಕಾರಿ ಆಸ್ತಿಗಳನ್ನು ಹದ್ದುಬಸ್ತು ಮಾಡಿ ಎಂದು ಸಚಿವರು ಹೇಳಿದರು.

ಆಶ್ರಯ ಯೋಜನೆಯಡಿ ಒಟ್ಟು 583 ಎಕರೆ ಗುರುತಿಸಿದ್ದು, ಅದರಲ್ಲಿ 318.11 ಎಕರೆಗೆ ಜಿಲ್ಲಾಧಿಕಾರಿಗಳಿಂದ ಮಂಜೂರಾತಿ ಪಡೆಯಲಾಗಿದೆ. 79 ಎಕರೆ ಮಂಜೂರಾತಿಗೆ ಬಾಕಿ ಇದೆ. 136.15 ಗುಂಟೆ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಬೇಕಿದೆ. ತಾಲ್ಲೂಕಿನಲ್ಲಿ ಮೂಲ ಕಂದಾಯ ಗ್ರಾಮಗಳು 155 ಇದ್ದು, ಹೊಸ ಕಂದಾಯ ಗ್ರಾಮಗಳು 66 ಹಾಗೂ ಹೊಸ ಉಪ ಗ್ರಾಮಗಳು 42 ಒಳಗೊಂಡು ಒಟ್ಟು 265 ಕಂದಾಯ ಗ್ರಾಮಗಳಿವೆ. 2030 ಪೋಡಿ ಫಲಾನುಭವಿಗಳು, 2056 ಪೌತಿ ಖಾತೆ ಫಲಾನುಭವಿಗಳು ಇದ್ದಾರೆ ಎಂದು ತಹಶೀಲ್ದಾರ್ ಸಿದ್ದೇಶ್ ಸಚಿವರ ಗಮನಕ್ಕೆ ತಂದರು.

ಸ್ಥಳೀಯ ಅಧಿಕಾರಿಗಳು ಸ್ವಚ್ಛತೆ, ಶುದ್ಧ ಕುಡಿಯುವ ನೀರು ಪೂರೈಕೆ, ಸಮರ್ಪಕ ಬೀದಿ ದೀಪ ನಿರ್ವಹಣೆಗೆ ಒತ್ತು ನೀಡಬೇಕು. ಇಂತಹ ಕೆಲಸಗಳ ಜಿಪಿಎಸ್ ಫೋಟೋಗಳನ್ನು ಅಪ್ ಲೋಡ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆಕಾಶ್, ನಗರಸಭೆ ಪೌರಾಯುಕ್ತ ಎ.ವಾಸೀಂ, ಡಿಡಿಪಿಐ ಮಂಜುನಾಥ್, ಬಿಇಒ ತಿಪ್ಪೇಸ್ವಾಮಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.