ಶ್ರೀರಾಂಪುರ: ರಾಗಿ ಖರೀದಿ ಕೇಂದ್ರದಲ್ಲಿ ಉಂಟಾದ ಸಮಸ್ಯೆಯಿಂದ ಮನನೊಂದು ಆತ್ಮಹತ್ಯೆಗೆ ಮುಂದಾಗಿದ್ದ ರೈತ ಕುಟುಂಬಕ್ಕೆ ಶಾಸಕ ಗೂಳಿಹಟ್ಟಿ ಡಿ.ಶೇಖರ್ ನೆರವು ನೀಡಿದ್ದಾರೆ. ರಾಗಿ ಬೆಳೆ ಮಾರಾಟದಿಂದ ಬರಬೇಕಾಗಿದ್ದ ₹ 1.2 ಲಕ್ಷವನ್ನು ಶಾಸಕರು ನೀಡಿ ಧೈರ್ಯ ತುಂಬಿದ್ದಾರೆ.
ಓಬಳಾಪುರ ಗ್ರಾಮದ ಹೊನ್ನಪ್ಪ ಎಂಬುವರು 2020ರಲ್ಲಿ ಹೊಸದುರ್ಗ ರಾಗಿ ಖರೀದಿ ಕೇಂದ್ರಕ್ಕೆ ತೆರಳಿದ್ದರು. ತಾವು ಬೆಳೆದಿದ್ದ 31 ಕ್ವಿಂಟಲ್ ರಾಗಿ ಯನ್ನು ತೂಕ ಹಾಕಿಸಿದ್ದರು. ತಿಳಿವಳಿಕೆ ಕೊರತೆಯಿಂದ ರಾಗಿ ಬಿಟ್ಟಿರುವ ಬಗ್ಗೆ ಖರೀದಿ ಕೇಂದ್ರದಲ್ಲಿ ಹೆಸರು ನಮೂದಿಸಿ ಸ್ವೀಕೃತಿ ಪಡೆದಿರಲಿಲ್ಲ.
ನಾಲ್ಕೈದು ತಿಂಗಳು ಕಳೆದರೂ ರಾಗಿ ಹಣ ಬಾರದೆ ಇದ್ದುದರಿಂದ ಖರೀದಿ ಕೇಂದ್ರದ ಅಧಿಕಾರಿಗಳ ಬಳಿ ವಿಚಾರಿಸಿದ್ದರು. ಅಧಿಕಾರಿಗಳು ಪರಿಶೀಲಿಸಿದಾಗ ರೈತ ರಾಗಿ ಬಿಟ್ಟಿರುವ ಬಗ್ಗೆ ಯಾವುದೇ ದಾಖಲೆ ಇರಲಿಲ್ಲ. ಖರೀದಿ ಚೀಟಿ ನೀಡುವಂತೆ ಕೇಳಿದಾಗ ರೈತ ಕಂಗಾಲಾಗಿದ್ದರು.
ಈ ಮಧ್ಯೆ ರೈತನ ಹಿರಿಯ ಮಗ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ನೋವಿನಲ್ಲಿದ್ದ ರೈತ ಕುಟುಂಬಕ್ಕೆ ದಿಕ್ಕು ತೋಚದಂತಾಗಿತ್ತು. ಇದರಿಂದ ಮನನೊಂದು ದಂಪತಿ ಆತ್ಮಹತ್ಯೆಗೆ ನಿರ್ಧರಿಸಿದ್ದರು. ತಮ್ಮ ದುಖಃವನ್ನು ಗ್ರಾಮದ ಹಿತೈಷಿಗಳ ಬಳಿ ಹೇಳಿಕೊಂಡಾಗ ಅವರು ಶಾಸಕ ಗೂಳಿಹಟ್ಟಿ ಡಿ.ಶೇಖರ್ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸಿದ್ದರು.
‘ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಒಂದು ವೇಳೆ ಸಾಧ್ಯವಾಗದಿದ್ದರೆ ವೈಯಕ್ತಿಕ ನೆರವು ನೀಡುತ್ತೇನೆ’ ಎಂದು ಶಾಸಕರು ಭರವಸೆ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.