ADVERTISEMENT

ಮಾಸ್ಕ್‌ ಧರಿಸಿ ಮದುವೆಯಾದ ವಧು–ವರರು

ಮುರುಘಾ ಮಠದಲ್ಲಿ ನಡೆದ ಸಾಮೂಹಿಕ ವಿವಾಹ

​ಪ್ರಜಾವಾಣಿ ವಾರ್ತೆ
Published 5 ಮೇ 2020, 13:39 IST
Last Updated 5 ಮೇ 2020, 13:39 IST
ಚಿತ್ರದುರ್ಗದ ಮುರುಘಾ ಮಠದಲ್ಲಿ ಮಂಗಳವಾರ ನಡೆದ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು–ವರರನ್ನು ಶಿವಮೂರ್ತಿ ಮುರುಘಾ ಶರಣರು ಹರಸಿದರು.
ಚಿತ್ರದುರ್ಗದ ಮುರುಘಾ ಮಠದಲ್ಲಿ ಮಂಗಳವಾರ ನಡೆದ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು–ವರರನ್ನು ಶಿವಮೂರ್ತಿ ಮುರುಘಾ ಶರಣರು ಹರಸಿದರು.   

ಚಿತ್ರದುರ್ಗ: ಮುರುಘಾ ಮಠದ ಅನುಭವ ಮಂಟಪದಲ್ಲಿ ಮಂಗಳವಾರ ಸಾಮೂಹಿಕ ವಿವಾಹ ನೆರವೇರಿತು. ನಾಲ್ವರು ವಧು–ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

30 ವರ್ಷದ ಐದನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಸರ್ಕಾರ ಮಾರ್ಗಸೂಚಿ ಅನ್ವಯ ನೆರವೇರಿತು. ವಧು–ವರರ ಪೋಷಕರು ಹಾಗೂ ಬೆರಳೆಣಿಕೆಯ ಸಂಬಂಧಿಕರು ಮಾತ್ರ ವಿವಾಹಕ್ಕೆ ಸಾಕ್ಷಿಯಾದರು. ಶಿವಮೂರ್ತಿ ಮುರುಘಾ ಶರಣರು ನವ ದಂಪತಿಗಳನ್ನು ಹರಸಿದರು.

ವಿವಾಹಕ್ಕೆ ಸಜ್ಜಾಗಿದ್ದ ವಧು–ವರರು ಮುಖಕ್ಕೆ ಮಾಸ್ಕ್‌ ಧರಿಸಿದ್ದರು. ಪ್ರತಿಯೊಬ್ಬರೂ ಕೈಗಳನ್ನು ಸ್ಯಾನಿಟೈಸ್‌ ಮಾಡಿಕೊಂಡಿದ್ದರು. ಅನುಭವ ಮಂಟಪದ ವಿಶಾಲ ಸಭಾಂಗಣದಲ್ಲಿ ಐದು ಅಡಿ ದೂರದಲ್ಲಿ ಆಸನದ ವ್ಯವಸ್ಥೆ ಮಾಡಲಾಗಿತ್ತು. ಜಯವಿಭವ ಸ್ವಾಮೀಜಿ ಸ್ಮರಣೋತ್ಸವ ಕೂಡ ಇದೇ ಸಂದರ್ಭದಲ್ಲಿ ಜರುಗಿತು.

ADVERTISEMENT

‘ಕೊರೊನಾ ಸೋಂಕಿನ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಸರಳವಾಗಿ ವಿವಾಹ ಮಹೋತ್ಸವ ನಡೆಸಲಾಗಿದೆ. ಇಂತಹ ಸಂದರ್ಭದಲ್ಲಿ ಮದುವೆ ನಡೆದಿದ್ದು ದಾಖಲೆಯೇ ಸರಿ’ ಎಂದು ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

‘ಜನರು ಜೀವನ ಬೆಲೆಯನ್ನು ಅರ್ಥ ಮಾಡಿಕೊಳ್ಳಬೇಕು. ಜೀವ ಉಳಿದರೆ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಿದೆ. ಕೊರೊನಾ ಸೋಂಕು ಹರಡದಂತೆ ತಡೆಯಲು ಅಂತರ ಕಾಯ್ದುಕೊಳ್ಳುವುದೇ ಸೂಕ್ತ’ ಎಂದು ಸಲಹೆ ನೀಡಿದರು.

‘ಪ್ರಾಣಿ, ಪಕ್ಷಿಗಳ ಮೇಲೆ ಜಯವಿಭವ ಸ್ವಾಮೀಜಿ ಅತ್ಯಂತ ಪ್ರೀತಿ ಹೊಂದಿದ್ದರು. ಕೃಷಿ ಪ್ರೇಮಿಯೂ, ಪ್ರಖಾಂಡ ಪಂಡಿತರೂ ಆಗಿದ್ದರು. ಜಯದೇವ ಸ್ವಾಮೀಜಿ ಅವರೊಂದಿಗೆ ವೈಚಾರಿಕ ಚಿಂತನೆ ನಡೆಸಿದ್ದರು’ ಎಂದು ಸ್ಮರಿಸಿಕೊಂಡರು.

ಬಸವೇಶ್ವರ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಡೀನ್ ಡಾ.ಪ್ರಶಾಂತ್, ವೀರಶೈವ ಸಮಾಜದ ಕಾರ್ಯದರ್ಶಿ ಪಟೇಲ್ ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.