ಚಿತ್ರದುರ್ಗ: ದುರ್ಮಾರ್ಗದ ಕಡೆಗೆ ಸಾಗಿ ಮನುಕುಲ ದುರ್ಬಲವಾಗಬಾರದು ಎಂಬ ಕಾರಣಕ್ಕೆ ಸಮಾಜ ಕಾಯುವ ಕಾರ್ಯವನ್ನು ಸಂತರು ಶತಮಾನಗಳಿಂದ ಮಾಡುತ್ತಿದ್ದಾರೆ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.
ಶ್ರಾವಣಮಾಸದ ಅಂಗವಾಗಿ ಮಠದ ವತಿಯಿಂದ ಹಮ್ಮಿಕೊಂಡಿರುವ ‘ನಿತ್ಯ ಕಲ್ಯಾಣ’ ಕಾರ್ಯಕ್ರಮದಲ್ಲಿ ‘ಸಂತರ ಕಾರ್ಯವೇನು’ ಎಂಬ ವಿಚಾರದ ಕುರಿತು ಅವರು ಮಾತನಾಡಿದರು.
‘ಹೆಬ್ಬಾಳದ ಮಹಾಂತರುದ್ರಸ್ವಾಮಿ, ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಗಳು, ಜಯವಿಭವ ಸ್ವಾಮೀಜಿ ದಾಸೋಹ ಪರಂಪರೆ ಆರಂಭಿಸಿದರು. ಕೆರೆ – ಕಟ್ಟೆಗಳನ್ನು ಕಟ್ಟಿಸಿ, ಸಂಕಷ್ಟದಲ್ಲಿರುವವರಿಗೆ ಗಂಜಿಕೇಂದ್ರ ಸ್ಥಾಪಿಸಿದ್ದರು. ಚೀನಾ ಮತ್ತು ಭಾರತ ಯುದ್ಧವಾದಾಗ ಮಠದಲ್ಲಿದ್ದ ಬಂಗಾರದ ಕಿರೀಟವನ್ನು ಕೇಂದ್ರ ಸರ್ಕಾರಕ್ಕೆ ದಾನ ಕೊಟ್ಟವರು ಜಯವಿಭವ ಸ್ವಾಮೀಜಿ’ ಎಂದು ಹೇಳಿದರು.
‘ಭಾರತದ ನೆಲಕ್ಕೆ ಸಂತರು, ಸ್ವಾಮೀಜಿಗಳು ಅವಿಭಾಜ್ಯ ಅಂಗ. ಮಠಾಧೀಶರು ಇಲ್ಲದಿದ್ದರೆ ಸಮಾಜದಲ್ಲಿ ಅಸ್ತವ್ಯಸ್ತತೆ ಉಂಟಾಗುತ್ತಿತ್ತು. ಮಠಗಳ ಮೂಲಕ ಅಕ್ಷರ ಸಂಸ್ಕೃತಿ ಸಾಧ್ಯವಾಗಿದೆ. ಜನರು ಕಷ್ಟದಲ್ಲಿ ಕಣ್ಣೀರು ಹಾಕುವಾಗ ಸಂತರು ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ. ಸುಖವನ್ನು ಅನುಭವಿಸಲು ಸಾವಿರಾರು ಜನರಿದ್ದಾರೆ. ಆದರೆ, ದುಃಖದ ಸಂದರ್ಭದಲ್ಲಿ ದೂರ ಸರಿಯುತ್ತಾರೆ’ ಎಂದರು.
ಹಾವೇರಿ ಜಿಲ್ಲೆ ಅಗಡಿಯ ಪ್ರಭುಸ್ವಾಮಿ ಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ‘ಸಂತರು ನೋವು ಉಂಡು ಸಮಾಜಕ್ಕೆ ಒಳಿತು ಮಾಡುತ್ತಾರೆ. 12ನೇ ಶತಮಾನದಲ್ಲಿ ತುಳಿತಕ್ಕೆ ಒಳಗಾದ ಜನರನ್ನು ಬಸವಾದಿ ಶರಣರು ಮೇಲೆತ್ತುವ ಕೆಲಸ ಮಾಡಿದರು. ಇಂದಿನ ದಿನಗಳಲ್ಲಿ ಮಠಗಳು ಇಲ್ಲದೇ ಹೋಗಿದ್ದರೆ ಸಮಾಜ ಅಧಃಪತನಕ್ಕೆ ಜಾರುತ್ತಿತ್ತು’ ಎಂದರು.
ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ಹಾವೇರಿ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಶಿರಸಂಗಿ ಮುರುಘಾಮಠದ ಬಸವ ಮಹಾಂತ ಸ್ವಾಮೀಜಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.