ADVERTISEMENT

ಶ್ರದ್ಧಾಭಕ್ತಿಯ ನಾಗರಪಂಚಮಿ ಆಚರಣೆ

ನಾಗರಕಟ್ಟೆಗಳಿಗೆ ತೆರಳಿ ಭಕ್ತಿ ಸಮರ್ಪಿಸಿದ ಭಕ್ತಸಮೂಹ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 13:08 IST
Last Updated 5 ಆಗಸ್ಟ್ 2019, 13:08 IST
ಚಿತ್ರದುರ್ಗದಲ್ಲಿ ಸೋಮವಾರ ಅನೇಕರು ಶ್ರದ್ಧಾಭಕ್ತಿಯಿಂದ ನಾಗರಪಂಚಮಿ ಹಬ್ಬ ಆಚರಿಸಿದರು.
ಚಿತ್ರದುರ್ಗದಲ್ಲಿ ಸೋಮವಾರ ಅನೇಕರು ಶ್ರದ್ಧಾಭಕ್ತಿಯಿಂದ ನಾಗರಪಂಚಮಿ ಹಬ್ಬ ಆಚರಿಸಿದರು.   

ಚಿತ್ರದುರ್ಗ:ನಾಗರಪಂಚಮಿ ಹಬ್ಬದ ಅಂಗವಾಗಿ ನಗರದ ವಿವಿಧೆಡೆ ಶುಚಿಗೊಳಿಸಲಾಗಿದ್ದ ನಾಗರಕಟ್ಟೆಗಳತ್ತ ಸೋಮವಾರ ಮನೆಮಂದಿಯಲ್ಲ ಜತೆಗೂಡಿ ಮುಖ ಮಾಡಿದರು. ನಾಗರದೇವರ ವಿಗ್ರಹಗಳಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಮರ್ಪಿಸಿದರು.

ಮಹಿಳೆಯರು ಮನೆಯಲ್ಲಿಯೇ ಮಡಿಯಿಂದ ತಯಾರಿಸಿದ ಚಿಗಳಿ, ತಮಟ, ಅಳಿಟ್ಟು, ತಂಬಿಟ್ಟು, ಅಳ್ಳು, ಕಡಲೆಕಾಳು, ಗೆಜ್ಜೆವಸ್ತ್ರ ಹಾಗೂ ತೆಂಗಿನಕಾಯಿ, ಬಾಳೆಹಣ್ಣು ಸೇರಿ ಇತರೆ ಪೂಜಾ ಸಾಮಗ್ರಿಗಳೊಂದಿಗೆ ನಾಗರಕಟ್ಟೆಗಳಿಗೆ ಸಂಭ್ರಮದಿಂದ ಬಂದು ಇಷ್ಟಾರ್ಥ ಈಡೇರಿಸುವಂತೆ ನಾಗದೇವರನ್ನು ಪ್ರಾರ್ಥಿಸಿಕೊಂಡರು.

ಶ್ರಾವಣ ಮಾಸದಲ್ಲಿ ಬರುವ ಅನೇಕ ಹಬ್ಬಗಳು ಸ್ತ್ರೀಯರು ಸಂಭ್ರಮಿಸುವಂಥ ಹಬ್ಬಗಳಾಗಿವೆ. ಭಕ್ತಿ, ಶ್ರದ್ಧೆಯಿಂದ ಆಚರಿಸುವ ಈ ಹಬ್ಬದಲ್ಲಿ ಕೆಲವರು ಬೆಳ್ಳಿ ನಾಗರ ಮತ್ತು ಚಿನ್ನದ ನಾಗರವನ್ನು ನಾಗದೇವತೆಗೆ ಅರ್ಪಿಸುವ ಸಂಪ್ರದಾಯ ಕೂಡ ಇದೆ.

ADVERTISEMENT

ಹಬ್ಬಕ್ಕಾಗಿ ಮನೆಯಲ್ಲಿ ವಿಶೇಷವಾಗಿ ಎಳ್ಳು ಉಂಡೆ, ಶೇಂಗಾ, ಕಡಲೆ ಸೇರಿ ಇತರೆ ಉಂಡೆಗಳನ್ನು ತಯಾರಿಸಿ ಇಟ್ಟುಕೊಂಡಿದ್ದರು. ಮಳೆ-ಚಳಿಗಾಲದಲ್ಲಿ ಈ ಆಹಾರ ಪದಾರ್ಥಗಳು ಮನುಷ್ಯರನ್ನು ಒಂದಿಷ್ಟು ಬೆಚ್ಚಗಿಡುತ್ತವೆ. ಪೂಜೆ ನೆರವೇರಿಸಿದ ಬಳಿಕ ಮನೆಗೆ ಬಂದು ಕೆಲವರು ಉಂಡೆಗಳ ರುಚಿಯನ್ನೂ ಆಸ್ವಾದಿಸಿದರು.

ಬರಗೇರಮ್ಮ ದೇಗುಲ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇಗುಲ, ಉಚ್ಚಂಗಿಯಲ್ಲಮ್ಮ ದೇಗುಲ, ಜೋಗಿಮಟ್ಟಿ ರಸ್ತೆ, ರಂಗಯ್ಯನ ಬಾಗಿಲು, ಕಾಮನಬಾವಿ ಬಡಾವಣೆ ಸೇರಿ ವಿವಿಧ ಬಡಾವಣೆಗಳಲ್ಲಿರುವ ನಾಗರಕಟ್ಟೆಗಳಿಗೆ, ನಾಗರ ಹುತ್ತಗಳಿಗೆ ಭಕ್ತರು ಬೆಳಿಗ್ಗೆಯಿಂದಲೇ ಬಂದು ಹಾಲು ಎರೆದರು.

ನಾಗರಚೌತಿ ದಿನ ಸಹ ನಾಗಗಳಿಗೆ ವಿಶೇಷ ದಿನವಾದ್ದರಿಂದ ಭಾನುವಾರ ಕೂಡ ಭಕ್ತರು ಕುಟುಂಬದ ಒಳಿತಿಗಾಗಿ ನಾಗದೇವರಿಗೆ ಪೂಜೆ ನೆರವೇರಿಸಿದರು. ಚೌತಿ ದಿನ ಹಾಲನ್ನು ಎರೆದ ನಂತರ ಕೆಲವರು ಹುತ್ತದ ಮಣ್ಣನ್ನು ಮನೆಗೆ ತಂದು ಅದರಿಂದ ನಾಗದೇವತೆ ನಿರ್ಮಿಸಿ, ಮರುದಿನ ಪಂಚಮಿ ದಿನದಂದು ಮನೆಯಲ್ಲಿ ಮಣ್ಣಿನ ನಾಗದೇವರಿಗೆ ಹಾಲನ್ನು ಎರೆಯುತ್ತಾರೆ. ಈ ಸಂಪ್ರದಾಯ ಶತಮಾನಗಳಿಂದ ನಡೆದುಕೊಂಡು ಬಂದಿದೆ.

ಚೌತಿ ಮತ್ತು ಪಂಚಮಿ ದಿನ ಹಬ್ಬ ಆಚರಿಸದ ಕೆಲವರು ಶ್ರಾವಣ ಮಾಸ ಮುಗಿಯುವುದರೊಳಗೆ ಯಾವುದಾದರೊಂದು ದಿನ ನಾಗದೇವರಿಗೆ ಹಾಲನ್ನು ಎರೆಯುವ ಮೂಲಕ ಭಕ್ತಿಸಮರ್ಪಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.