ಪ್ರಜಾವಾಣಿ ವಾರ್ತೆ
ಸಿರಿಗೆರೆ: ಸಿರಿಗೆರೆ ಸಮೀಪದ ಅಳಗವಾಡಿ ಗ್ರಾಮಕ್ಕೆ ಹೊಂದಿಕೊಂಡಿರುವ ಉಣ್ಣೆ ಬಸಪ್ಪ ದೇಗುಲದ ಬಳಿ ವಾಹನ ಸಂಚಾಲಕರಿಗೆ ಸೋಮವಾರ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಕೆಲ ದಿನಗಳಿಂದ ಚಿರತೆಗಳು ಅಳಗವಾಡಿ ಗುಡ್ಡಗಳಿಗೆ ಹೊಂದಿಕೊಂಡ ಅರಣ್ಯ ಭಾಗಗಳಲ್ಲಿ ನೆಲೆಸಿರುವ ಬಗ್ಗೆ ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದರು. ಸೋಮವಾರ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ರಸ್ತೆ ಪಕ್ಕದಲ್ಲಿ ಚಿರತೆ ದರ್ಶನ ನೀಡಿದೆ. ಚಿರತೆಯ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಪ್ರತಿ ವರ್ಷ ಮೆಕ್ಕೆಜೋಳ ಬಿತ್ತನೆ ಮಾಡಿದ ನಂತರ ಕಾಡು ಹಂದಿಗಳ ಕಾಟ ಶುರುವಾಗುತ್ತಿತ್ತು. ಬಿತ್ತನೆ ಮಾಡಿದ ದಿನದಿಂದ ಹತ್ತು ದಿನಗಳವರೆಗೆ ಹಂದಿಗಳ ದಾಳಿಗೆ ತುತ್ತಾಗದಂತೆ ರಾತ್ರಿಯೆಲ್ಲ ಕಾವಲು ಕಾಯಬೇಕಿತ್ತು. ಆದರೆ, ಇಲ್ಲಿನ ಗುಡ್ಡಗಳಲ್ಲಿ ಚಿರತೆಗಳು ಇರುವುದರಿಂದ ಪ್ರಸ್ತುತ ವರ್ಷ ಹಂದಿಗಳ ಕಾಟ ಕಡಿಮೆ ಆಗಿದೆ. ಹಾಗಾಗಿ ರಾತ್ರಿ ಕಾವಲು ಕಾಯುವುದನ್ನು ಕೆಲ ರೈತರು ಕೈ ಬಿಟ್ಟಿದ್ದರು.
ಆದರೆ, ಚಿರತೆಗಳ ಇರುವಿಕೆಯಿಂದ ಹೊಲಗಳಿಗೆ ತಿರುಗಾಡಲು ಭಯಪಡುವಂತಾಗಿದೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.