ADVERTISEMENT

ಭರಮಸಾಗರದಲ್ಲಿ ಮುಂದಿನ ತರಳಬಾಳು ಹುಣ್ಣಿಮೆ

ಗ್ರಾಮೀಣ ಭಾಗದ ಜನರ ಬೇಡಿಕೆಗೆ ಸ್ವಾಮೀಜಿ ಮನ್ನಣೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 4:35 IST
Last Updated 7 ಫೆಬ್ರುವರಿ 2023, 4:35 IST
ಭರಮಸಾಗರದಲ್ಲಿ ಮುಂದಿನ ವರ್ಷ ತರಳಬಾಳು ಹುಣ್ಣಿಮೆ ನಡೆಯಲು ಅನುಮತಿ ದೊರಕಿದ ಕಾರಣ ಹೋಬಳಿಯ ವಿವಿಧ ಗ್ರಾಮಗಳ ಜನರು ಸೋಮವಾರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು.
ಭರಮಸಾಗರದಲ್ಲಿ ಮುಂದಿನ ವರ್ಷ ತರಳಬಾಳು ಹುಣ್ಣಿಮೆ ನಡೆಯಲು ಅನುಮತಿ ದೊರಕಿದ ಕಾರಣ ಹೋಬಳಿಯ ವಿವಿಧ ಗ್ರಾಮಗಳ ಜನರು ಸೋಮವಾರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು.   

ಭರಮಸಾಗರ: ಚಿತ್ರದುರ್ಗ ತಾಲ್ಲೂಕು ಭರಮಸಾಗರದಲ್ಲಿ ಮುಂದಿನ ವರ್ಷ 76ನೇ ತರಳಬಾಳು ಹುಣ್ಣಿಮೆ ನಡೆಯಲಿದೆ.

ತರಳಬಾಳು ಹುಣ್ಣಿಮೆ ಆಯೋಜಿಸಲು ಅವಕಾಶ ನೀಡುವಂತೆ ರಾಜ್ಯದ ವಿವಿಧ ಕಡೆಯಿಂದ ಬಂದ ಮನವಿ ಪರಿಶೀಲಿಸಿ ತರಳಬಾಳು ಹುಣ್ಣಿಮೆಯ ಕೊನೆಯಲ್ಲಿ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮುಂದಿನ ವರ್ಷ ತರಳಬಾಳು ಹುಣ್ಣಿಮೆ ನಡೆಯುವ ಸ್ಥಳದ ಬಗ್ಗೆ ಮಾಹಿತಿ ನೀಡುವುದು ವಾಡಿಕೆ. ಅದರಂತೆ ವಿಜಯನಗರ ಜಿಲ್ಲೆ ಕೊಟ್ಟೂರಿನಲ್ಲಿ ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮುಂದಿನ ತರಳಬಾಳು ಹುಣ್ಣಿಮೆ ಮಹೋತ್ಸವ ಸಿರಿಗೆರೆ ಸಮೀಪದ ಭರಮಸಾಗರದಲ್ಲಿ ನಡೆಯಲಿದೆ ಎಂದು ಪ್ರಕಟಿಸಿದರು.

ಸಿರಿಗೆರೆಯಲ್ಲಿ 1949ರಲ್ಲಿ ಲಿಂ. ಶಿವಕುಮಾರ ಸ್ವಾಮೀಜಿ ನೇತೃತ್ವದಲ್ಲಿ ಪ್ರಥಮ ಬಾರಿಗೆ ತರಳಬಾಳು ಹುಣ್ಣಿಮೆ ಆರಂಭವಾಯಿತು. 1952ರಲ್ಲಿ ಜೆ.ಎಂ. ಇಮಾಮ್‌ಸಾಬ್ ಅಧ್ಯಕ್ಷತೆಯಲ್ಲಿ ಜಗಳೂರಿನಲ್ಲಿ ನಡೆಯಿತು. ಅಲ್ಲಿಂದ ಇಲ್ಲಿವರೆಗೆ ರಾಜ್ಯದ ವಿವಿಧ ಊರುಗಳಲ್ಲಿ 75 ತರಳಬಾಳು ಹುಣ್ಣಿಮೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ, ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಸಾಸಲುಹಳ್ಳ (ತರಳಬಾಳು ವೃತ್ತ), ಭೀಮಸಮುದ್ರ, ದಾವಣಗೆರೆ ಪ್ರತ್ಯೇಕ ಜಿಲ್ಲೆ ಆಗುವ ಮೊದಲು ಜಗಳೂರು, ಹರಿಹರ, ದಾವಣಗೆರೆ, ಆನಗೋಡಿನಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ಕಾರ್ಯಕ್ರಮ ನಡೆದಿದೆ.

ADVERTISEMENT

ಭರಮಸಾಗರ ಏತನೀರಾವರಿ ಯೋಜನೆ ಯಶಸ್ಸಿನಲ್ಲಿ ಸಿರಿಗೆರೆ ಶ್ರೀಗಳ ಪಾತ್ರ ಪ್ರಮುಖವಾಗಿದೆ. ಈಗ ಭರಮಸಾಗರದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಯಲು ಸ್ವಾಮೀಜಿ ಅನುಮತಿ ನೀಡಿರುವುದರಿಂದ ಗ್ರಾಮೀಣ ಭಾಗದ ಜನರ ಬಹುದಿನದ ಬಯಕೆ ಈಡೇರಿದಂತಾಗಿದೆ ಎಂದು ತರಳಬಾಳು ವಿದ್ಯಾಸಂಸ್ಥೆ ಪ್ರಧಾನ ಕಾರ್ಯದರ್ಶಿ ಎಸ್.ಬಿ. ರಂಗನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.