ಹೊಸದುರ್ಗ: ತಾಲ್ಲೂಕಿನ ಮತ್ತೋಡಿನ ಗ್ರಾಮದ ರೈತ ಸೋಮಶೇಖರ್ ಅವರ ಜಮೀನಿನಲ್ಲಿ ಬೆಳೆದಿದ್ದ ಸಾವೆಗೆ ರೈತ ಕುರಿ ಕೂಡಿದ್ದಾರೆ.
ಒಂದು ತಿಂಗಳಿನಿಂದ ಸರಿಯಾಗಿ ಮಳೆಯಾಗದ ಕಾರಣ ಭೂಮಿಯಿಂದ ಮೇಲೆದ್ದಿದ್ದ ಸಾವೆ ಅರ್ಧಕ್ಕೆ ನಿಂತಿದೆ. ಹಳದಿ ಬಣ್ಣಕ್ಕೆ ತಿರುಗಿದ್ದು, ಈ ಬೆಳೆಯಿಂದ ಆದಾಯ ಪಡೆಯುವುದು ಕನಸಾಗಿದೆ.
‘ಇರುವ 5 ಎಕರೆ ಭೂಮಿಯಲ್ಲಿ ಮೇ ಕೊನೆಯ ವಾರದಲ್ಲಿ ಸಾವೆ ಬಿತ್ತನೆ ಮಾಡಲಾಗಿತ್ತು. ಬಿತ್ತನೆಯಾದಾಗಿನಿಂದ ಜುಲೈ ಮಧ್ಯದವರೆಗೂ ಮಳೆಯಾಗಿಲ್ಲ. ಅಂತರ ಬೇಸಾಯ, ಮೇಲುಗೊಬ್ಬರ ನೀಡಲು ಸಹ ಸೂಕ್ತ ಸಮಯದಲ್ಲಿ ಮಳೆಯಾಗಿಲ್ಲ. ಕಳೆದ 10 ದಿನಗಳಿಂದ ತುಂತುರು ಮಳೆಯಾಗುತ್ತಿದೆ. ಭೂಮಿ ಸಿದ್ಧತೆ, ಬಿತ್ತನೆ ಬೀಜ ಖರೀದಿ, ಗೊಬ್ಬರ, ಕಾರ್ಮಿಕರಿಗೆ ಕೂಲಿ ಸೇರಿದಂತೆ ಸಾವೆ ಬಿತ್ತನೆಯಿಂದ ಇದುವರೆಗೂ ₹ 36,000 ವ್ಯಯಿಸಲಾಗಿದೆ. ಸಾವೆ ಇಳುವರಿ ಪಡೆಯುವುದು ಕಷ್ಟ. ಮುಂದೆ ರಾಗಿ ಬಿತ್ತನೆಗೆ ಭೂಮಿ ಸಿದ್ಧತೆ ಮಾಡಿಕೊಳ್ಳಬೇಕು. ಹಾಗಾಗಿ ಜಮೀನಿನಲ್ಲಿ ಕುರಿ ಕೂಡಲಾಗಿದೆ ಎಂದು ಮತ್ತೋಡಿನ ರೈತ ಸೋಮಶೇಖರ್ ಅಳಲು ತೋಡಿಕೊಂಡರು.
ಸಾವೆ ಒಂದು ಅಡಿ ಮಾತ್ರ ಬೆಳೆದಿದೆ. ಕಾಳುಕಟ್ಟುವುದೂ ಇಲ್ಲ. ಬೆಳೆವಿಮೆ ಕಟ್ಟಿರುವ ರೈತರು ಸರ್ಕಾರದಿಂದ ಸಹಾಯಧನದ ನಿರೀಕ್ಷೆಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.